ಬಾಬರ್ ಬಗ್ಗೆ ಗಂಭೀರ ಟೀಕೆ
ನೆದರ್ಲೆಂಡ್ಸ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಸಂದರ್ಭದಲ್ಲಿ ಕಾಮೆಂಟರಿ ಮಾಡುತ್ತಿದ್ದ ಗೌತಮ್ ಗಂಭೀರ್, ಬಾಬರ್ ಅಜಂ ಅಗ್ರ ಕ್ರಮಾಂಕದಲ್ಲಿ ಫಾಕರ್ ಜಮಾನ್ ಅವರನ್ನು ಕಣಕ್ಕಿಳಿಸದ ಬಗ್ಗೆ ಬಾಬರ್ ಅಜಂ ಬಗ್ಗೆ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ. "ನನ್ನ ಅಭಿಪ್ರಾಯದ ಪ್ರಕಾರ ನೀವು ನಿಮ್ಮ ಬಗ್ಗೆ ಚಿಂತಿಸುವ ಬದಲಿಗೆ ತಂಡದ ಬಗ್ಗೆ ಚಿಂತಿಸಬೇಕಾಗುತ್ತದೆ. ನಿಮ್ಮ ಯೋಜನೆಯ ಪ್ರಕಾರ ಎಲ್ಲವೂ ನಡೆದುಕೊಂಡು ಹೋಗದಿದ್ದಾಗ ಫಾಕರ್ ಜಮಾನ್ ಅವರನ್ನು ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಸಬೇಕಾಗಿತ್ತು. ಇದನ್ನು ಸ್ವಾರ್ಥ ಎನ್ನಬಹುದು. ನಾಯಕನಾಗಿ ಬಾಬರ್ ಅಜಂ ಹಾಗೂ ರಿಜ್ವಾನ್ ಇನ್ನಿಂಗ್ಸ್ ಆರಂಭಿಸಿ ಹಲವು ದಾಖಲೆಗಳನ್ನು ಬರೆಯುವುದು ತುಂಬಾ ಸುಲಭ. ಆದರೆ ತಾವೋರ್ವ ನೈಜ ನಾಯಕನಾಗಿದ್ದರೆ ನಿಮ್ಮ ತಂಡದ ಬಗ್ಗೆ ನೀವು ಯೋಚನೆ ಮಾಡುತ್ತಿದ್ದಿರಿ" ಎಂದು ಗೌತಮ್ ಗಂಭೀರ್ ಅಭಿಪ್ರಾಯ ಹಂಚಿಕೊಂಡಿದ್ದರು.
ಗಂಭೀರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅಕ್ರಮ್
ಇನ್ನು ಪಾಕಿಸ್ತಾನದ ತಂಡದ ನಾಯಕ ಬಾಬರ್ ಅಜಂ ಬಗ್ಗೆ ಗೌತಮ್ ಗಂಭೀರ್ ಮಾಡಿದ ಟೀಕೆಯ ಬಗ್ಗೆ ವಾಸಿಂ ಅಕ್ರಮ್ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನದ ಚಾನೆಲ್ ಎ ಸ್ಪೋರ್ಟ್ಸ್ನಲ್ಲಿ ಮಾತನಾಡುತ್ತಿದ್ದಾಗ ಅಕ್ರಮ್ ಪ್ರತಿಕ್ರಿಯಿಸಿದ್ದಾರೆ. "ಅದು ಅವರ ವೈಯಕ್ತಿಕ ಅಭಿಪ್ರಾಯ. ಗೌತನಮ್ ಗಂಭಿರ್ ಓರ್ವ ಯಶಸ್ವಿ ನಾಯಕ ಎಂದು ಐಪಿಎಲ್ನಲ್ಲಿ ಕರೆಸಿಕೊಂಡಿದ್ದಾರೆ. ಕೆಕೆಆರ್ ತಂಡದ ನಾಯಕನಾಗಿ ಎರಡು ಬಾರಿ ಟೂರ್ನಿ ಗೆದ್ದುಕೊಂಡಿದ್ದಾರೆ. ಅವರ ಕಾಲದಲ್ಲಿ ಅಗ್ರ ಆಟಗಾರರ ಪೈಕಿ ಅವರು ಒಬ್ಬರಾಗಿದ್ದರು. ಎಲ್ಲರಿಗೂ ಅವರವರ ಅಭಿಪ್ರಾಯವನ್ನು ಹೇಳಿಕೊಳ್ಳುವ ಹಕ್ಕಿದೆ ಎಂದು ನಾನು ಭಾವಿಸುತ್ತೇನೆ. ಇದು ಅವರ ಅಭಿಪ್ರಾಯ" ಎಂದಿದ್ದಾರೆ ವಾಸಿಂ ಅಕ್ರಮ್.
ಈ ವಿಶ್ವಕಪ್ನಲ್ಲಿ ಬಾಬರ್ ಸಂಪೂರ್ಣ ವಿಫಲ
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಸಂಪೂರ್ಣವಾಗಿ ವೈಫಲ್ಯವನ್ನು ಅನುಭವಿಸಿದ್ದಾರೆ. ಆದರೆ ಪಾಕಿಸ್ತಾನ ಆಡಿರುವ ಮೂರು ಪಂದ್ಯಗಳಲ್ಲಿಯೂ ಬಾಬರ್ ಎರಡಂಕಿಯನ್ನು ದಾಟುವಲ್ಲಿಯೂ ವಿಫಲವಾಗಿದ್ದಾರೆ. ಮೂರು ಪಂದ್ಯಗಳಲ್ಲಿ ಬಾಬರ್ ಒಟ್ಟು ಗಳಿಸಿರುವುದು ಕೇವಲ 8 ರನ್ ಮಾತ್ರ. ಇದು ಮೊದಲೇ ದುರ್ಬಲ ಎನಿಸಿಕೊಂಡಿರುವ ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಮೇಲೆ ಇನ್ನಿಲ್ಲದ ಒತ್ತಡವನ್ನುಂಟು ಮಾಡಲು ಕಾರಣವಾಗಿದೆ.
ಪಾಕಿಸ್ತಾನದ ಮುಂದಿದೆ ಕಠಿಣ ಸವಾಲು
ಈ ಬಾರಿಯ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ ಹಂತಕ್ಕೇರುವುದು ಪಾಕಿಸ್ತಾನ ತಂಡದ ಪಾಲಿಗೆ ಅತ್ಯಂತ ದುರ್ಗಮವಾಗಿದೆ. ಮತ್ತೊಂದೆಡೆ ಪಾಕಿಸ್ತಾನದ ಅಂತಿಮ ಎರಡು ಪಂದ್ಯಗಳು ಕಠಿಣವಾಗಿದೆ ಎಂಬುದು ಕೂಡ ಗಮನಿಸಬೇಕಿದೆ. ಪಾಕ್ ಪಡೆ ಮುಂದಿನ ಪಂದ್ಯದಲ್ಲಿ ಗುರುವಾರದಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈಗಾಗಲೇ ಟೂರ್ನಿಯಲ್ಲಿ ಅಜೇಯವಾಗಿರುವ ಪಾಕಿಸ್ತಾನ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡು ಬರುತ್ತಿದ್ದು ಪಾಕಿಸ್ತಾನ ತಂಡಕ್ಕೆ ಈ ಸವಾಲು ಗೆಲ್ಲುವುದು ಸುಲಭವಿಲ್ಲ. ಅಂತಿಮ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ನವೆಂಬರ್ 6ರಂದು ಆಡಲಿದೆ.