ಎರಡಕ್ಕೂ ಪ್ರಮುಖ ಪಂದ್ಯ
ಮೈದಾನಕ್ಕಿಳಿಯುವುದಕ್ಕೂ ಮುನ್ನ ಎರಡೂ ತಂಡಗಳು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡಿದ್ದ ಮೂರೂ ಪಂದ್ಯಗಳಲ್ಲಿ ಸೋತಿದ್ದವು. ಹಾಗಾಗಿ ಗೆಲುವು ಎರಡೂ ತಂಡಗಳಿಗೂ ಬಹುಮುಖ್ಯವಾಗಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ವಿಭಾಗದಲ್ಲಿ ಮಿಂಚಿದ್ದ ಕನ್ನಡಿಗ ಶ್ರೇಯಸ್, ಎದುರಾಳಿ ಬೆಂಗಳೂರು ತಂಡವನ್ನು ಹೆಡೆಮುರಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೆಂಗಳೂರು ನೀಡಿದ್ದ 159 ರನ್ ಗುರಿ ಬೆನ್ನುಬಿದ್ದ ರಾಜಸ್ಥಾನ್ 19.5 ಓವರ್ನಲ್ಲಿ 164 ರನ್ ಗಳಿಸಿತ್ತು.
ಜೀವನದ ಅಪೂರ್ವ ಕ್ಷಣ
ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್, 'ಒಂದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ವಿಕೆಟ್ಗಳನ್ನು ಮುರಿಯೋದು ಎಲ್ಲಾ ಯುವ ಆಟಗಾರರ ಕನಸಾಗಿರತ್ತೆ. ಹಾಗೆಯೇ ಇದು ನನ್ನ ವೃತ್ತಿ ಜೀವನದ ಅಪೂರ್ವ ಕ್ಷಣ. ಅಲ್ಲದೆ ಐಪಿಎಲ್ನಲ್ಲೂ ನನ್ನ ಪಾಲಿನ ಅವಿಸ್ಮರಣೀಯ ಸಂದರ್ಭವಿದು' ಎಂದರು.
ಘಾಟಾನುಘಟಿಗಳ ವಿಕೆಟ್ ಪತನ
ಕೇವಲ 12 ರನ್ನಿಗೆ ಆರ್ಬಿಸಿ 3 ವಿಕೆಟ್ ಗಳನ್ನು ಶ್ರೇಯಸ್ ಕೆಡವಿದ್ದರಿಂದ ಆರ್ಸಿಬಿ ಸೋಲಿನಂಚಿಗೆ ಸರಿಯಿತು. ಅಲ್ಲದೆ ಶ್ರೇಯಸ್ ಮುರಿದ ಮೂರು ವಿಕೆಟ್ ಗಳು ವಿರಾಟ್ ಕೊಹ್ಲಿ (23 ರನ್), ಎಬಿ ಡಿವಿಲಿಯರ್ಸ್ (13 ರನ್) ಮತ್ತು ಶಿಮ್ರಾನ್ ಹೆಟ್ಮೇಯರ್ (1 ರನ್) ಅವರದ್ದು. ಆರ್ಸಿಬಿಯಲ್ಲಿ ಈ ಮೂವರೂ ಅಪಾಯಕಾರಿ ಆಟಗಾರರೆ. ಆದರೆ ತಂಡದ ಪ್ರಮುಖ ಆಟಗಾರರೆ ಬೇಗನೆ ನಿರ್ಗಮಿಸಿದ್ದರಿಂದ ಬೆಂಗಳೂರು ಸಂಕಟ ಪಡುವಂತಾಯ್ತು.
ಇಷ್ಟಕ್ಕೇ ಬೀಗಬಾರದು
'ಆಡುವಾಗ ಯಾವ ವಿಕೆಟ್ ಲಭಿಸಿದರೂ ಅದು ಬೌಲರ್ನ ಪಾಲಿಗೆ ದೊಡ್ಡದೆ. ಆದರೆ ಈ ಇಬ್ಬರ (ಕೊಹ್ಲಿ, ಎಬಿಡಿ) ವಿಕೆಟ್ಗಳು ಇನ್ನೂ ಹೆಚ್ಚು ಕೊಡುತ್ತವೆ. ಹಾಗಂತ ಇಷ್ಟಕ್ಕೇ ನಾನು ಬೀಗಬಾರದು. ತಾಳ್ಮೆಯಿಂದ ಇನ್ನೂ ಕಾಯಬೇಕಿದೆ. ಸಾಧಿಸಬೇಕಿದೆ ಎಂದು ನಾನು ಭಾವಿಸುತ್ತೇನೆ' ಎಂದು ಶ್ರೇಯಸ್ ಹೇಳಿದರು.