ಮುಂಬೈ, ಅಕ್ಟೋಬರ್ 24: 'ಭಾರತೀಯ ಕ್ರಿಕೆಟ್ ತಂಡದಲ್ಲಿ ಈಗ ಮುಸ್ಲಿಂ ಆಟಗಾರರಿದ್ದಾರೆಯೇ?' ಎಂದು ಪ್ರಶ್ನಿಸಿದ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಹಿರಿಯ ಕ್ರಿಕೆಟರ್ ಹರ್ಭಜನ್ ಸಿಂಗ್ ಅವರು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
'ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರು ಪರಸ್ಪರ ಸಹೋದರರಂತೆ ಇದ್ದಾರೆ. ಟೀಂ ಇಂಡಿಯಾದಲ್ಲಿನ ಪ್ರತಿಯೊಬ್ಬ ಆಟಗಾರ ಕೂಡಾ ಹಿಂದೂಸ್ತಾನಿಯಾಗಿದ್ದಾರೆ. ಇದರಲ್ಲಿ ಆಟಗಾರರ ಬಣ್ಣ, ಧರ್ಮದ ಬೇಧ ಮಾಡಬಾರದು' ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

'ಭಾರತೀಯ ತಂಡದಲ್ಲಿ ಯಾರಾದರೂ ಮುಸ್ಲಿಂ ಆಟಗಾರರಿದ್ದಾರೆಯೇ? ಎಂದು ಐಪಿಎಸ್ ಮಾಜಿ ಅಧಿಕಾರಿ ಸಂಜೀವ್ ಭಟ್ ಅವರು ಪ್ರಶ್ನಿಸಿ ಫೇಸ್ ಬುಕ್ ಪೋಸ್ಟ್ ಹಾಕಿದ್ದು, ಟ್ವೀಟ್ ರೂಪದಲ್ಲಿ ಬಂದಿತ್ತು.
ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಸೋಮವಾರದಂದು ಭಾರತ ತಂಡವನ್ನು ಪ್ರಕಟಿಸಲಾಯಿತು. ಹೈದರಾಬಾದಿನ ಆಟೋ ಚಾಲಕನ ಮಗ ಮೊಹಮ್ಮದ್ ಸಿರಾಜ್ ಸ್ಥಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.