ಬಂದ ದಾರಿಗೆ ಸುಂಕವಿಲ್ಲ ಎಂದು ಪಾಂಡ್ಯ-ರಾಹುಲ್ ಭಾರತಕ್ಕೆ ವಾಪಸ್!


ನವದೆಹಲಿ, ಜನವರಿ 11: ಜವಾಬ್ದಾರಿ ಮರೆತು ಮಾಡೋ ಹುಡುಗಾಟಿಕೆ-ಹುಚ್ಚಾಟಿಕೆಗೆ ಅಷ್ಟೇ ಬೆಲೆ ತೆರಬೇಕಾಗಿ ಬರುತ್ತೆ ಅನ್ನೋದಕ್ಕೆ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಹಾರ್ದಿಕ್ ಪಾಂಡ್ಯ ಮತ್ತು ಲೋಕೇಶ್ ರಾಹುಲ್ ಸದ್ಯಕ್ಕೆ ಉತ್ತಮ ಉದಾಹರಣೆ. ಬೇಕಾಬಿಟ್ಟಿ ಹೇಳಿಕೆ ನೀಡಿ ಸುದ್ದಿಯಾಗಿರುವ ಪಾಂಡ್ಯ ಮತ್ತು ರಾಹುಲ್ ಇಬ್ಬರಿಗೂ ಬಿಸಿಸಿಐ ಕೊಂಚ ಜೋರಾಗೇ ಚಾಟಿ ಬೀಸಿದೆ.
ವಿವಾದಾತ್ಮಕ ಹೇಳಿಕೆಯಿಂದಾಗಿ ಇಬ್ಬರೂ ಆಸೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಅಮಾನತಾಗಿದ್ದಷ್ಟೇ ಅಲ್ಲ ಇಡೀ ಸರಣಿಯಿಂದಲೇ ಹೊರದಬ್ಬಲ್ಪಟ್ಟಿದ್ದಾರೆ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪಾಂಡ್ಯ-ರಾಹುಲ್ ಇಬ್ಬರೂ ಭಾರತಕ್ಕೆ ಮರಳಲಿದ್ದಾರೆ.
ಇಬ್ಬರೂ ಯುವ ಆಟಗಾರರು ಕಾಫೀ ವಿತ್ ಕರಣ್ ಟಿವಿ ಟಾಕ್ ಶೋನಲ್ಲಿ ಪಾಲ್ಗೊಂಡು ಕೊಟ್ಟ ಹೇಳಿಕೆ ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣವಾಗಿದೆ. ಅಂದ್ಹಾಗೆ, ಶೋ ನಲ್ಲಿ ಇಬ್ಬರೂ ಬೇಕಾಬಿಟ್ಟಿ ಮಾತಾಡಿ ತಮ್ಮ ಮುಖಕ್ಕೆ ಮಸಿ ಬಳಿದುಕೊಂಡಿದ್ದಾರೆ.
ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಕರಣ್ ಜೊಹರ್ ನಡೆಸಿಕೊಡುವ 'ಕಾಫೀ ವಿತ್ ಕರಣ್' ನಲ್ಲಿ ಪಾಂಡ್ಯ ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ನೀಡಿದ್ದರು. ಜೊತೆಗೆ ಲೈಂಗಿಕ ವಿಚಾರದಲ್ಲಿ ನಾಲಗೆ ಲಗಾಮಿಲ್ಲದೆ ಎಲ್ಲಾ ತೆರೆದು ಮಾತನಾಡಿದ್ದರು. ರಾಹುಲ್ ಕೂಡ ಇಂಥದ್ದೇ ಎಲ್ಲೆ ಮೀರಿದ ಕಾಮೆಂಟಿಗೆ ಕೆಂಗಣ್ಣಿಗೆ ಗುರಿಯಾಗಿದ್ದರು.
ಇಂಥ ಕಾಮೆಂಟ್ಗಳು ದೊಡ್ಡ ಸಂಗತಿಯಾದೀತು ಎಂದು ರಾಹುಲ್-ಪಾಂಡ್ಯ ಇಬ್ಬರಿಗೂ ಅನ್ನಿಸಿರಲಿಕ್ಕಿರಲಿಲ್ಲ. ಆದರೆ ಇಬ್ಬರ ಹೇಳಿಕೆ ಜಾಲತಾಣಿಗರ ಕೋಪಕ್ಕೆ ಕಾರಣವಾಗಿದೆಯಲ್ಲದೆ ಬಿಸಿಸಿಐ ಕೆಂಗಣ್ಣಿಗೂ ಗುರಿಯಾಗಿತ್ತು. ಇದೇ ಕಾರಣಕ್ಕೆ ಇಬ್ಬರನ್ನೂ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಹೊರದಬ್ಬಲಾಗಿದೆ.
ಇಷ್ಟೇ ಅಲ್ಲ, ನ್ಯೂಜಿಲ್ಯಾಂಡ್ ಸರಣಿಯಲ್ಲೂ ರಾಹುಲ್ ಮತ್ತು ಪಾಂಡ್ಯಗೆ ಅವಕಾಶ ಸಿಗೋದು ಅನುಮಾನವೇ. ಒಟ್ಟಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿರುವ ಆಟಗಾರರು ಎಲ್ಲ ಮೀರುವಂತಿಲ್ಲ ಎಂಬ ಖಡಕ್ ಸಂದೇಶವನ್ನು ಬಿಸಿಸಿಐ ಆಟಗಾರರಿಗೆ ರವಾನಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications