
ನವದೆಹಲಿ, ಜನವರಿ 12: ಟಿವಿ ಟಾಕ್ ಶೋನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಆಸೀಸ್ ಸರಣಿಯಿಂದ ಕಿಕ್ ಔಟ್ ಗುದ್ದಿನ ಬೆನ್ನಲ್ಲೇ ಮತ್ತೊಂದು ಹೊಡೆತ ಬಿದ್ದಿದೆ. ಪಾಂಡ್ಯಗೆ ಪ್ರಾಯೋಜಕತ್ವ ನೀಡಿದ್ದ ಕಂಪನಿ ಪ್ರಾಯೋಜಕತ್ವದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದೆ.
ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಕರಣ್ ಜೊಹರ್ ನಡೆಸಿ ಕೊಡುವ ಕಾಫೀ ವಿತ್ ಕರಣ್ ಟಿವಿ ಟಾಕ್ ಶೋನಲ್ಲಿ ಪಾಂಡ್ಯ, ಕೆಎಲ್ ರಾಹುಲ್ ಎಲ್ಲೆ ಮೀರಿ ಮಾತಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಬಿಸಿಸಿಐ ಇಬ್ಬರನ್ನೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಅಮಾನತುಗೊಳಿಸಿತ್ತು.
ವಿವಾದದಿಂದಾಗಿ ಅಮಾನತಾದ ಬಳಿಕ ಪಾಂಡ್ಯಗೆ ಪ್ರಾಯೋಜಕತ್ವ ನೀಡಿದ್ದ ಜಿಲೆಟ್ ಕಂಪನಿ ಪಾಂಡ್ಯ ಜೊತೆಗಿನ ಒಪ್ಪಂದಗಳನ್ನು ಅಮಾನತುಗೊಳಿಸಿದೆ. ಮುಂದಿನ ನಿರ್ಧಾರ ಕೈಗೊಳ್ಳುವವರೆಗೂ ಪಾಂಡ್ಯ ಜೊತೆಗಿನ ನಮ್ಮ ಒಪ್ಪಂದಗಳನ್ನು ಅಮಾನತುಗೊಳಿಸಿದ್ದೇವೆ ಎಂದು ಕಂಪನಿಯ ವಕ್ತಾರ ಶುಕ್ರವಾರ (ಜನವರಿ 11) ಹೇಳಿಕೊಂಡಿದ್ದಾರೆ.
ಪಾಂಡ್ಯ ಅವರು ಸುಮಾರು ಏಳು ಬ್ರ್ಯಾಂಡ್ಗಳ ಪ್ರಾಯೋಜಕತ್ವದಲ್ಲಿದ್ದರು. ಏಳರಲ್ಲಿ ಜಿಲೆಟ್, ಡಿ:ಎಫ್ಐ, ಪೂಮಾದಂತಹ ಸ್ಪೋರ್ಟ್ಸ್ ವೇರ್ಗಳಂತ ಬ್ರ್ಯಾಂಡ್ಗಳು ಸೇರಿದ್ದವು. ಆ ಎಲ್ಲಾ ಬ್ರ್ಯಾಂಡ್ಗಳ ಪ್ರಾಯೋಜಕತ್ವಕ್ಕೆ ಇನ್ನು ಹೊಡೆತ ಬೀಳಲಿದೆ. ಟಾಕ್ ಶೋ ನಲ್ಲಿ ಪಾಲ್ಗೊಂಡ ಕೆಎಲ್ ರಾಹುಲ್ಗೂ ಇದೇ ಬಿಸಿ ತಾಗಲಿದೆ.