
ಲಂಡನ್, ಮೇ 29: ಕಾರ್ಡಿಫ್ನ ಸೋಫಿಯಾ ಗಾರ್ಡನ್ನಲ್ಲಿ ಮಂಗಳವಾರ (ಮೇ 28) ನಡೆದ ಭಾರತ vs ಬಾಂಗ್ಲಾದೇಶ 10ನೇ ಅಭ್ಯಾಸ ಪಂದ್ಯದ ಬಳಿಕ ಭಾರತದ 4ನೇ ಬ್ಯಾಟಿಂಗ್ ಕ್ರಮಾಂಕ ಬದಲಾವಣೆಯಾಗುವುದರಲ್ಲಿದೆ. 4ನೇ ಕ್ರಮಾಂಕ ವಿಜಯ್ ಶಂಕರ್ ಬದಲು ಕೆಎಲ್ ರಾಹುಲ್ ಪಾಲಾಗುವುದರಲ್ಲಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಕನ್ನಡಿಗ ರಾಹುಲ್, 99 ಎಸೆತಗಳಿಗೆ 108 ರನ್ ಬಾರಿಸಿದ್ದರು. ಎಂಎಸ್ ಧೋನಿಯ ಸ್ಫೋಟಕ ಶತಕದ (78 ಎಸೆತ, 113 ರನ್) ನೆರವೂ ದೊರೆತಿದ್ದರಿಂದ ಭಾರತ ಭರ್ಜರಿ 95 ರನ್ ಗೆಲುವು ದಾಖಲಿಸಿತ್ತು.
ಕಾರ್ಡಿಫ್ ಅಭ್ಯಾಸ ಪಂದ್ಯಕ್ಕೂ ಮೊದಲು 4ನೇ ಕ್ರಮಾಂಕಕ್ಕೆ ತ್ರೀ-ಡೈಮೆನ್ಶನಲ್ ಆಟಗಾರ ವಿಜಯ್ ಶಂಕರ್ ಸೂಕ್ತ ಎಂದು ಬಿಸಿಸಿಐ ಹೇಳಿತ್ತು. ಆದರೆ ಕಾರ್ಡಿಫ್ ಪಂದ್ಯದಲ್ಲಿ ರಾಹುಲ್ 4ನೇ ಕ್ರಮಾಂಕದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದರು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಶಂಕರ್ ಕೇವಲ 2 ರನ್ ಗಳಿಸಿದ್ದರು. ಹೀಗಾಗಿ ವಿಶ್ವಕಪ್ ಪಂದ್ಯಗಳಲ್ಲಿ ರಾಹುಲ್ 4ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದ ಬಳಿಕ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಕೂಡ 4ನೇ ಕ್ರಮಾಂಕಕ್ಕೆ ಕೆಎಲ್ ರಾಹುಲ್ ಸೂಕ್ತ ಎಂಬ ಸುಳಿವು ನೀಡಿದ್ದರು. ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, '4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ರಾಹುಲ್ ಧನಾತ್ಮಕ ಆಟವನ್ನಾಡಿದರು. ಅವರ ಆಟ ತಂಡದ ಗೆಲುವಿಗೆ ತುಂಬಾ ಪ್ರಮುಖವಾಗಿತ್ತು' ಎಂದಿದ್ದಾರೆ.