
ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಪಂತ್ ಕನಿಷ್ಠ 9 ತಿಂಗಳು ಕ್ರಿಕೆಟ್ನಿಂದ ದೂರವುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಆಸ್ಟ್ರೇಲಿಯಾ ವಿರುದ್ದ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ, ಐಪಿಎಲ್ ತಪ್ಪಿಸಿಕೊಳ್ಳುವುದು ಖಚಿತವಾಗಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಪಂತ್ ಅಪಘಾತದಲ್ಲಿ ಗಾಯಗೊಂಡು ಹೊರಗುಳಿದಿರುವುದು ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡಕ್ಕೆ ಹಿನ್ನಡೆಯಾಗಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಪಂತ್ ಮುಖ್ಯ ಪಾತ್ರ ವಹಿಸುವ ಸಾಧ್ಯತೆ ಇತ್ತು.
ಪಂತ್ ಹೊರಗುಳಿದ ನಂತರ ಅವರ ಸ್ಥಾನಕ್ಕೆ ಆಯ್ಕೆಯಾಗಲು ಹಲವು ಪ್ರಮುಖ ವಿಕೆಟ್ ಕೀಪರ್ ಗಳು ಇದ್ದಾರೆ. ಆದರೆ, ಭಾರತ ಎ ತಂಡದಲ್ಲಿ ಆಡಿರುವ ಕೆಎಸ್ ಭರತ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲು ಎರಡು ಪಂದ್ಯಗಳಿಗಾಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಕೆಎಸ್ ಭರತ್ ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧತೆ ಆರಂಭಿಸಿದ್ದಾರೆ. ತಮ್ಮ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಸಾಮರ್ಥ್ಯದ ಬಗ್ಗೆ ಭರತ್ ಆತ್ಮವಿಶ್ವಾಸದಿಂದ ಇದ್ದಾರೆ. ತಂಡ ಬಯಸಿದ್ದಲ್ಲಿ, ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡಲಿ ಸಿದ್ಧವಾಗಿದ್ದಾರೆ.

ನಾನು ಪರಿಪೂರ್ಣ ಬ್ಯಾಟರ್ ಮತ್ತು ವಿಕೆಟ್ ಕೀಪರ್
ಆಧುನಿಕ ಕ್ರಿಕೆಟ್ನಲ್ಲಿ ಕೀಪರ್ ಸಮರ್ಥ ಬ್ಯಾಟರ್ ಆಗಿರಬೇಕು ಎನ್ನುವ ಭರತ್, ನಾನು ಯಾವಾಗಲೂ 100 ಪ್ರತಿಶತ ಕೀಪರ್ ಮತ್ತು 100 ಪ್ರತಿಶತ ಬ್ಯಾಟರ್ ಆಗಿರುತ್ತೇನೆ. 70 ಪ್ರತಿಶತ ಬ್ಯಾಟರ್, 30 ಪ್ರತಿಶತ ಕೀಪರ್ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.
ನಾನು ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಕಾಲಿಟ್ಟಾಗ ಆರಂಭಿಕ ಬ್ಯಾಟರ್ ನಂತೆ ಉತ್ತಮವಾಗಿ ಆಡುತ್ತೇನೆ. ಯಾವುದೇ ಪರಿಸ್ಥಿತಿ ಅಥವಾ ಸನ್ನಿವೇಶದಲ್ಲಿ ನಾನು ಅತ್ಯುತ್ತಮ ವಿಕೆಟ್ ಕೀಪರ್ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ನಂಬಿಕೆ ಆತ್ಮವಿಶ್ವಾಸ ನನ್ನ ಶಕ್ತಿ
ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಆಂಧ್ರ ತಂಡದ ಪರವಾಗಿ ಆಡುತ್ತಿದ್ದಾರೆ. ಆಂಧ್ರ ದೆಹಲಿ ನಡುವಿನ ಪಂದ್ಯದಲ್ಲಿ 80 ರನ್ ಗಳಿಸಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 9 ಶತಕ ಮತ್ತು 27 ಅರ್ಧಶತಕ ಗಳಿಸಿದ್ದಾರೆ, ಅವರು ತ್ರಿಶತಕ ಕೂಡ ದಾಖಲಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾನು ಆಡುವ ಬಳಗದಲ್ಲಿ ಇರುತ್ತೇನಾ ಇಲ್ಲವಾ ಗೊತ್ತಿಲ್ಲ. ಯಾವುದೇ ಹಂತದಲ್ಲಿ ಅವರು ಬ್ಯಾಟಿಂಗ್ ಮಾಡಲು ಸಿದ್ಧವಾಗಿದ್ದಾರೆ. ಟಿ20 ಮಾದರಿಯಾದರೂ ಟೆಸ್ಟ್ ಪಂದ್ಯವಾದರೂ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡಬೇಕು ಎಂದು ಹೇಳಿದ್ದಾರೆ. ಪ್ರತಿ ಓವರ್ ಗೆ 10 ರನ್ ಗಳಿಸಬೇಕು ಎಂದಾದರೆ ಅದನ್ನು ಮಾಡಬೇಕು, ರಣಜಿ ಟ್ರೋಫಿಯಲ್ಲಿ ವಿವಿಧ ಟ್ಯ್ರಾಕ್ಗಳಲ್ಲಿ ಆಡಿರುವುದರಿಂದ ಸವಾಲುಗಳಿಗೆ ಸಿದ್ಧವಾಗಿದ್ದೇನೆ ಎಂದು ಹೇಳಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯಲು ಭಾರತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲಲೇಬೇಕಿದೆ. ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಈಗಾಗಲೇ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು, ಜನವರಿ ಕೊನೆಯ ವಾರದಲ್ಲಿ ಭಾರತ ತಂಡವನ್ನು ಘೋಷಿಸುವ ಸಾಧ್ಯತೆ ಇದೆ.