ವೀರಾವೇಶದಿಂದ ಹೋರಾಡಿದ ನಾಯಕ ರೋಹಿತ್ ಶರ್ಮಾ
ಏಕದಿನ ಸರಣಿಯನ್ನು ಜೀವಂತವಾಗಿರಿಸಲು ವೀರಾವೇಶದಿಂದ ಹೋರಾಡಿದ ನಾಯಕ ರೋಹಿತ್ ಶರ್ಮಾ ಮೂರು ಬೌಂಡರಿ ಮತ್ತು ಐದು ಸಿಕ್ಸರ್ಗಳೊಂದಿಗೆ 28 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದರೂ, ಗೆಲ್ಲಲು ಸಾಧ್ಯವಾಗಲಿಲ್ಲ. ಎಡಗೈ ಹೆಬ್ಬೆಟ್ಟಿನ ಗಾಯದ ಕಾರಣದಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹೊರಗುಳಿಯಲಿದ್ದಾರೆ.
"ಅಭಿಮನ್ಯು ಈಶ್ವರನ್ ಟೆಸ್ಟ್ ಸರಣಿಯಲ್ಲಿ ಭಾರತ ಎ ಪರ ಸತತ ಎರಡು ಶತಕಗಳನ್ನು ಗಳಿಸಿದ್ದಾರೆ ಮತ್ತು ಆರಂಭಿಕ ಬ್ಯಾಟ್ಸ್ಮನ್ ಆಗಿದ್ದಾರೆ. ಈ ಎಲ್ಲಾ ಸಾಧ್ಯತೆಗಳಿಂದ ಸಿಲ್ಹೆಟ್ನಲ್ಲಿ ತಮ್ಮ ಎರಡನೇ ಎ ತಂಡದ ಟೆಸ್ಟ್ ಮುಗಿಸಿದ ನಂತರ ಚಟ್ಟೋಗ್ರಾಮ್ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ," ಎಂದು ಹಿರಿಯ ಬಿಸಿಸಿಐ ಅನಾಮಧೇಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಎಲ್ ರಾಹುಲ್, ಶುಭಮನ್ ಗಿಲ್ ಇನ್ನಿಂಗ್ಸ್ ತೆರೆಯುವ ಸಾಧ್ಯತೆ
ಅಭಿಮನ್ಯು ಈಶ್ವರನ್ ಮೊದಲ ಎ ಟೆಸ್ಟ್ನಲ್ಲಿ 141 ರನ್ ಗಳಿಸಿದರು ಮತ್ತು ಎರಡನೇ ಟೆಸ್ಟ್ನ ಎರಡನೇ ದಿನದ ಅಂತ್ಯಕ್ಕೆ 144 ರನ್ ಬಾರಿಸಿದರು. ರೋಹಿತ್ ಶರ್ಮಾ ಅವರ ಕವರ್ ಬ್ಯಾಟರ್ ಆಗಿ ಅಭಿಮನ್ಯು ಈಶ್ವರನ್ ಆಯ್ಕೆಯಾಗಬಹುದು. ಆದರೆ ಚಟ್ಟೋಗ್ರಾಮ್ ಮತ್ತು ಢಾಕಾದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ನಾಯಕ ಕೆಎಲ್ ರಾಹುಲ್ ಮತ್ತು ಯುವ ಆಟಗಾರ ಶುಭಮನ್ ಗಿಲ್ ಇನ್ನಿಂಗ್ಸ್ ತೆರೆಯುವ ಸಾಧ್ಯತೆ ಇದೆ.
ಭಾರತ ಎ ಪರ ಸತತವಾಗಿ ಉತ್ತಮ ಪ್ರದರ್ಶನ ನೀಡಿರುವ ಬಂಗಾಳದ ವೇಗಿ ಮುಖೇಶ್ ಕುಮಾರ್ ಅಥವಾ ಉಮ್ರಾನ್ ಮಲಿಕ್ ಅವರು ಗಾಯಗೊಂಡಿರುವ ಮೊಹಮ್ಮದ್ ಶಮಿ ಬದಲಾಗಿ ಸ್ಥಾನ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಒಂದೂ ಪಂದ್ಯವನ್ನು ಆಡದ ರವೀಂದ್ರ ಜಡೇಜಾ ನೇರವಾಗಿ ಟೆಸ್ಟ್ ಪಂದ್ಯಗಳನ್ನು ಆಡಲಿರುವುದರಿಂದ ಭಾರತದ ಬೌಲಿಂಗ್ ವಿಭಾಗಕ್ಕೆ ಪೆಟ್ಟು ಬೀಳಲಿದೆ.
ಮೂರನೇ ಏಕದಿನ ಪಂದ್ಯ ರೋಹಿತ್ ಶರ್ಮಾ ಲಭ್ಯವಿಲ್ಲ
ಎಡಗೈ ಆಲ್ರೌಂಡರ್ ಅಕ್ಷರ್ ಪಟೇಲ್ ಈಗಾಗಲೇ ತಂಡದಲ್ಲಿದ್ದರೂ, ಸೌರಭ್ ಕುಮಾರ್ ಅವರನ್ನು ಬ್ಯಾಕ್ಅಪ್ ಎಡಗೈ ಸ್ಪಿನ್ನರ್ ಆಗಿ ಎ ತಂಡದಿಂದ ಕರೆತರಬಹುದು. ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಆಯ್ಕೆಯ ಬಗ್ಗೆ ಗೊಂದಲವಿದೆ. ಇದೇ ವೇಳೆ ಈ ಬಾರಿಯ ರಣಜಿ ಋತುವಿನಲ್ಲಿ ಮುಂಬೈ ಪರ ಆಡುವುದಾಗಿ ಸೂರ್ಯಕುಮಾರ್ ಈಗಾಗಲೇ ಖಚಿತಪಡಿಸಿದ್ದಾರೆ.
"ರೋಹಿತ್ ಶರ್ಮಾ ಖಚಿತವಾಗಿ ಮೂರನೇ ಏಕದಿನ ಪಂದ್ಯವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಮತ್ತು ಮುಂಬೈಗೆ ಹಿಂತಿರುಗಲಿದ್ದಾರೆ. ತಜ್ಞರೊಂದಿಗೆ ಸಮಾಲೋಚಿಸಿದ ನಂತರ ಟೆಸ್ಟ್ ಪಂದ್ಯಗಳಿಗೆ ಹಿಂತಿರುಗಬಹುದೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕಿದೆ," ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದೇ ವೇಳೆ ಢಾಕಾದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೇವಲ ಮೂರು ಓವರ್ಗಳನ್ನು ಬೌಲ್ ಮಾಡಿದ ದೀಪಕ್ ಚಹಾರ್, ಕುಲದೀಪ್ ಸೇನ್ ಅವರಂತೆ ಅಂತಿಮ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಹೀಗಾಗಿ "ಈ ಮೂವರೂ ಆಟಗಾರರು ಮುಂದಿನ ಪಂದ್ಯವನ್ನು ಆಡುವುದಿಲ್ಲ," ಎಂದು ರಾಹುಲ್ ದ್ರಾವಿಡ್ ಖಚಿತಪಡಿಸಿದ್ದಾರೆ.