ತಮೀಮ್ ಇಕ್ಬಾಲ್ ಗಾಯಗೊಂಡು ಭಾರತದ ವಿರುದ್ಧದ ಸರಣಿಯಿಂದ ಹೊರಬಿದ್ದ ನಂತರ, ಲಿಟ್ಟನ್ ದಾಸ್ರನ್ನು ಬಾಂಗ್ಲಾದೇಶ ತಂಡದ ನೂತನ ನಾಯಕನನ್ನಾಗಿ ನೇಮಿಸಲಾಗಿದೆ. ಅದಕ್ಕೂ ಮೊದಲು ನಾಯಕತ್ವ ವಹಿಸಿಕೊಳ್ಳಲು ಟೆಸ್ಟ್ ತಂಡದ ನಾಯಕ ಶಕೀಬ್ ಅಲ್ ಹಸನ್ರನ್ನು ಕೇಳಿಕೊಂಡಿದ್ದರು, ಆದರೆ, ಬಿಸಿಬಿ ಮನವಿಯನ್ನು ತಿರಸ್ಕರಿಸಿದ್ದರು.
ಟೆಸ್ಟ್ ಸರಣಿಯಲ್ಲಿ ಶಕೀಬ್ ಅಲ್ ಹಸನ್ ಬಾಂಗ್ಲಾದೇಶ ತಂಡವನ್ನು ಮುಂದುವರೆಸಲಿದ್ದಾರೆ. ಏಕದಿನ ಸರಣಿಗೂ ಅವರಿಗೆ ನಾಯಕತ್ವ ವಹಿಸಿಕೊಳ್ಳಲು ಕೇಳಲಾಯಿತು. ಆದರೆ, ಶಕೀಬ್ ಅದಕ್ಕೆ ನಿರಾಕರಿಸಿದ ಕಾರಣ, ಲಿಟ್ಟನ್ ದಾಸ್ರನ್ನು ನೂತನ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಶುಕ್ರವಾರ ಅಧಿಕೃತ ಮಾಹಿತಿ ನೀಡಿದೆ.
ಅಭ್ಯಾಸದ ವೇಳೆ ಬಾಂಗ್ಲಾದೇಶದ ನಾಯಕ ನಾಯಕ ತಮೀಮ್ ಇಕ್ಬಾಲ್ ಗಾಯಗೊಂಡು ಸರಣಿಯಿಂದಲೇ ಹೊರಬಿದ್ದರು. ಟೆಸ್ಟ್ ತಂಡದಲ್ಲಿ ಉಪನಾಯಕನಾಗಿರುವ ಲಿಟ್ಟನ್ ದಾಸ್, ಏಕದಿನ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ನಾಯಕನಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಭಾನುವಾರ ಢಾಕಾದಲ್ಲಿ ಸರಣಿಯ ಮೊದಲನೇ ಏಕದಿನ ಪಂದ್ಯ ನಡೆಯಲಿದೆ.
ENG vs PAK: ಆತ ನಾಯಕನಾಗಲು ಅನರ್ಹ ಎಂದು ಕಿಡಿಕಾರಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ
ಲಿಟ್ಟನ್ ದಾಸ್ ಬಾಂಗ್ಲಾದೇಶ ಪ್ರಮುಖ ಬ್ಯಾಟರ್ ಆಗಿದ್ದಾರೆ. ಎಲ್ಲಾ ಸ್ವರೂಪಗಳಲ್ಲಿ ಅವರು ತಮ್ಮ ತಂಡಕ್ಕಾಗಿ ಉತ್ತಮ ರನ್ ಗಳಿಸಿದ್ದಾರೆ. ಕಳೆದ ವರ್ಷ ಟಿ20 ಮಾದರಿಯಲ್ಲಿ ನಾಯಕರಾಗಿದ್ದ ಮಹಮ್ಮದುಲ್ಲಾ ಗಾಯಗೊಂಡಿದ್ದಾಗ ಲಿಟ್ಟನ್ ದಾಸ್ ನಾಯಕತ್ವದ ಹೊರೆ ಹೊತ್ತುಕೊಂಡು ಮುನ್ನಡೆಸಿದ್ದರು.
ಆತನಲ್ಲಿ ಉತ್ತಮ ನಾಯಕತ್ವದ ಗುಣವಿದೆ
"ಲಿಟ್ಟನ್ ದಾಸ್ ತಂಡದಲ್ಲಿ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರು. ಅವರಲ್ಲಿ ಉತ್ತಮ ನಾಯಕತ್ವದ ಗುಣಗಳಿವೆ. ಅವರು ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ, ಆತನಿಗೆ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಇದೆ" ಎಂದು ಬಿಸಿಬಿ ಕ್ರಿಕೆಟ್ ಕಾರ್ಯಾಚರಣೆಯ ಅಧ್ಯಕ್ಷ ಜಲಾಲ್ ಯೂನಸ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 30 ರಂದು ಅಭ್ಯಾಸ ಮಾಡುವ ಸಂದರ್ಭದಲ್ಲಿ ತೊಡೆಸಂದು ಗಾಯಕ್ಕೆ ತುತ್ತಾಗಿದ್ದ ತಮೀಮ್ ಇಕ್ಬಾಲ್, ನಂತರ ವೈದ್ಯರ ಪರೀಕ್ಷೆಗೆ ಒಳಗಗಾಗಿದ್ದರು. ಅವರು ಗಾಯದಿಂದ ಚೇತರಿಸಿಕೊಳ್ಳದ ಕಾರಣ ಏಕದಿನ ಸರಣಿಯಿಂದಲೇ ಹೊರಗುಳಿದಿದ್ದಾರೆ. ಟೆಸ್ಟ್ ಸರಣಿಗೆ ತಮೀಮ್ ಆಯ್ಕೆ ಅನುಮಾನ ಎನ್ನುವಂತಾಗಿದೆ.
"ಭಾರತದ ವಿರುದ್ಧದ ಸರಣಿ ನಮಗೆ ಪ್ರಮುಖವಾಗಿದ್ದು, ಈ ಸಮಯದಲ್ಲಿ ತಮೀಮ್ ಗಾಯಗೊಂಡಿರುವುದ ಅತ್ಯಂತ ದುರದೃಷ್ಟಕರವಾಗಿದೆ, ಅವರ ನಾಯಕತ್ವದಲ್ಲಿ ಬಾಂಗ್ಲಾದೇಶ ತಂಡ ಕಳೆದ ಎರಡು ವರ್ಷಗಳಲ್ಲಿ ಕೆಲವು ಅತ್ಯುತ್ತಮವಾಗಿ ಆಡಿದೆ ಮತ್ತು ಏಕದಿನ ಮಾದರಿಯಲ್ಲಿ ಅವರು ಉತ್ತಮ ಬ್ಯಾಟರ್ ಆಗಿದ್ದಾರೆ. ಲಿಟ್ಟನ್ ದಾಸ್ ನಾಯಕನ ಗುಣಲಕ್ಷಣಗಳನ್ನು ಹೊಂದಿದ್ದು, ಅವರು ಭಾರತದ ವಿರುದ್ಧದ ಸರಣಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಲಿದ್ದಾರೆ" ಎಂದು ಜಲಾಲ್ ಯೂನಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.