ನಾನು ನಾಯಕನಾಗಿದ್ರೆ ಕೊಹ್ಲಿ ರೀತಿ ಆ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ ಎಂದ ಸಚಿನ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಮಳೆಗೆ ಆಹುತಿಯಾಗಿ ನೀರಸ ಡ್ರಾನಲ್ಲಿ ಅಂತ್ಯಕಂಡಿತು. ಆದರೆ ಲಾರ್ಡ್ಸ್ ಅಂಗಳದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 151 ರನ್ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಕಾಯ್ದುಕೊಂಡಿದೆ. ಇದೀಗ ಲಾರ್ಡ್ಸ್ ಪಂದ್ಯದ ಕುರಿತು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮಾತನಾಡಿದ್ದು ಎರಡನೇ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ನಿಧಾನವಾಗಿ ಡಿಕ್ಲೇರ್ ಘೋಷಿಸಿದ್ದರ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಲಾರ್ಡ್ಸ್ ಅಂಗಳದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನದ ಕೆಲ ಸಮಯದವರೆಗೂ ಟೀಮ್ ಇಂಡಿಯಾ ಸೋಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಹೌದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಐದನೇ ದಿನದಾಟ ಆರಂಭವಾಗಿ ಟೀಮ್ ಇಂಡಿಯಾ ತನ್ನ 8 ವಿಕೆಟ್ಗಳನ್ನು ಕಳೆದುಕೊಂಡ ನಂತರ ಈ ಪಂದ್ಯವನ್ನು ಖಚಿತವಾಗಿ ಇಂಗ್ಲೆಂಡ್ ತಂಡ ಗೆಲ್ಲಲಿದೆ ಎಂದು ಕ್ರೀಡಾ ಪಂಡಿತರು ಮತ್ತು ಕ್ರೀಡಾಭಿಮಾನಿಗಳು ಅಭಿಪ್ರಾಯಗಳನ್ನು ವ್ಯಕ್ತಪಡಿಸತೊಡಗಿದ್ದರು. ಆದರೆ ಒಂಬತ್ತನೇ ವಿಕೆಟ್ಗೆ ಜೊತೆಯಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ 89 ರನ್ಗಳ ಜತೆಯಾಟವನ್ನು ಆಡುವುದರ ಮೂಲಕ ಸೋಲಿನ ಭೀತಿಯಲ್ಲಿದ್ದ ಟೀಮ್ ಇಂಡಿಯಾವನ್ನು ರಕ್ಷಿಸಿ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಿ ಬಿಟ್ಟರು.
ಹೀಗೆ ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅಬ್ಬರದ ಬ್ಯಾಟಿಂಗ್ ನಡೆಸಿದ ನಂತರ ಊಟದ ವಿರಾಮ ಘೋಷಿಸಲಾಯಿತು. ಹೀಗೆ ಊಟದ ವಿರಾಮ ಘೋಷಿಸಿದರೂ ಸಹ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡದೇ ಊಟದ ನಂತರವೂ ಸಹ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಗೆ ಬ್ಯಾಟಿಂಗ್ ಮುಂದುವರಿಸಲು ಹೇಳಿದರು. ವಿರಾಟ್ ಕೊಹ್ಲಿಯ ಈ ನಿರ್ಧಾರ ಕೆಲವರಲ್ಲಿ ಆಶ್ಚರ್ಯ ಮೂಡಿಸಿದರೆ, ಇನ್ನೂ ಕೆಲವರಲ್ಲಿ ಕುತೂಹಲವನ್ನು ಕೆರಳಿಸಿತ್ತು. ಊಟದ ಸಮಯಕ್ಕೆ ವಿರಾಟ್ ಕೊಹ್ಲಿ ಡಿಕ್ಲೇರ್ ಘೋಷಿಸಬಹುದು ಎಂದು ಊಹಿಸಿದ್ದವರ ಊಹೆ ತಪ್ಪಾಯಿತು,ಊಟದ ನಂತರದ ಕೆಲ ಓವರ್ಗಳವರೆಗೆ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ತಮ್ಮ ಬ್ಯಾಟಿಂಗ್ ಮುಂದುವರಿಸಿದರು. ಪಂದ್ಯದ ಕೊನೆಯ ದಿನದಲ್ಲಿ ಡಿಕ್ಲೇರ್ ಕುರಿತು ವಿರಾಟ್ ಕೊಹ್ಲಿ ಈ ರೀತಿಯ ನಿರ್ಧಾರವನ್ನು ಕೈಗೊಂಡಿದ್ದರ ಕುರಿತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಈ ಕೆಳಕಂಡಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ನಾನು ನಾಯಕನಾಗಿದ್ರೆ ಊಟದ ವಿರಾಮಕ್ಕೂ ಮುನ್ನ ಡಿಕ್ಲೇರ್ ಘೋಷಿಸುತ್ತಿದ್ದೆ ಎಂದ ಸಚಿನ್
ಲಾರ್ಡ್ಸ್ ಅಂಗಳದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಊಟದ ವಿರಾಮದ ನಂತರ ಕೆಲ ಓವರ್ಗಳು ಮುಗಿದ ಮೇಲೆ ವಿರಾಟ್ ಕೊಹ್ಲಿ ಡಿಕ್ಲೇರ್ ಘೋಷಿಸಿದರು. ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 'ನಾನೇನಾದರೂ ಟೀಮ್ ಇಂಡಿಯಾ ನಾಯಕನಾಗಿದ್ದರೆ ವಿರಾಟ್ ಕೊಹ್ಲಿ ತೆಗೆದುಕೊಂಡ ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ವಿರಾಟ್ ಕೊಹ್ಲಿ ಊಟದ ವಿರಾಮದ ನಂತರ ಡಿಕ್ಲೇರ್ ಘೋಷಿಸಿದರು, ಆದರೆ ನಾನಾಗಿದ್ದರೆ ಊಟದ ವಿರಾಮಕ್ಕೂ ಮುಂಚೆಯೇ ಡಿಕ್ಲೇರ್ ಘೋಷಿಸುತ್ತಿದ್ದೆ. ಹೀಗೆ ಊಟಕ್ಕೂ ಮುನ್ನವೇ ಡಿಕ್ಲೇರ್ ಘೋಷಿಸುವುದರಿಂದ ಇಂಗ್ಲೆಂಡ್ ಆರಂಭಿಕ ಆಟಗಾರರು ಡ್ರೆಸ್ಸಿಂಗ್ ರೂಮ್ ತಲುಪಿ ಬ್ಯಾಟಿಂಗ್ಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ಮತ್ತೆ ಮೈದಾನಕ್ಕೆ ಬಂದು ಕೆಲ ಓವರ್ಗಳಲ್ಲಿ ಬ್ಯಾಟಿಂಗ್ ಮಾಡಿ ಪುನಃ ಊಟದ ವಿರಾಮಕ್ಕೆ ತೆರಳಬೇಕಾಗುತ್ತಿತ್ತು. ಹೀಗೆ ಮಾಡುವುದರಿಂದ ಇಂಗ್ಲೆಂಡ್ ಆರಂಭಿಕ ಆಟಗಾರರ ಮೇಲೆ ಒತ್ತಡ ಹೇರಬಹುದಿತ್ತು. ಯಾವುದೇ ಆರಂಭಿಕ ಆಟಗಾರ ಕೂಡ ಊಟದ ವಿರಾಮಕ್ಕೂ ಮುಂಚೆ ಡಿಕ್ಲೇರ್ ಘೋಷಿಸಿದಾಗ ಪದೇಪದೆ ಮೈದಾನದಿಂದ ಡ್ರೆಸ್ಸಿಂಗ್ ರೂಂಗೆ ಮತ್ತು ಡ್ರೆಸ್ಸಿಂಗ್ ರೂಮಿನಿಂದ ಮೈದಾನಕ್ಕೆ ಓಡಾಡಲು ಇಚ್ಛಿಸುವುದಿಲ್ಲ ಮತ್ತು ಒತ್ತಡಕ್ಕೊಳಗಾಗುತ್ತಾರೆ. ಹೀಗಾಗಿ ಊಟದ ವಿರಾಮಕ್ಕೂ ಮುಂಚೆಯೇ ಡಿಕ್ಲೇರ್ ಘೋಷಿಸುತ್ತಿದ್ದೆ' ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಿಕ್ಲೇರ್ ಕುರಿತು ವಿರಾಟ್ ಕೊಹ್ಲಿ ಹೇಳಿದ್ದಿಷ್ಟು
ಸಚಿನ್ ತೆಂಡೂಲ್ಕರ್ ತಾವು ನಾಯಕರಾಗಿದ್ದರೆ ಊಟಕ್ಕೂ ಮುಂಚೆಯೇ ಡಿಕ್ಲೇರ್ ಘೋಷಿಸಿ ಆಂಗ್ಲ ಆಟಗಾರರ ಮೇಲೆ ಒತ್ತಡವನ್ನು ಹೇರುವ ಪ್ರಯತ್ನವನ್ನು ಮಾಡುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಊಟದ ವಿರಾಮದ ನಂತರ ಡಿಕ್ಲೇರ್ ಘೋಷಿಸಿದ್ದು ಯಾವ ಕಾರಣಕ್ಕಾಗಿ ಎಂಬುದನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ. 'ಲಾರ್ಡ್ಸ್ ಟೆಸ್ಟ್ನ ಕೊನೆಯ ದಿನದಂದು 60 ಓವರ್ಗಳನ್ನು ಮಾಡುವಷ್ಟು ಅವಕಾಶವಿರುವಾಗ ಡಿಕ್ಲೇರ್ ಘೋಷಿಸಲು ಪ್ರಮುಖ ಕಾರಣವಿದೆ. ಅದೇನೆಂದರೆ 60 ಓವರ್ಗಳು ಅಥವಾ ಅದಕ್ಕಿಂತ ಕಡಿಮೆ ಓವರ್ಗಳನ್ನು ಬೌಲಿಂಗ್ ಮಾಡಬೇಕಾಗಿ ಬಂದಾಗ ತಂಡದ ಮೇಲೆ ನಿಧಾನಗತಿಯ ಬೌಲಿಂಗ್ ಕಾರಣಕ್ಕೆ ದಂಡ ವಿಧಿಸಲಾಗುವುದಿಲ್ಲ. ಹೀಗಾಗಿ 60 ಓವರ್ಗಳನ್ನು ಮಾಡುವಷ್ಟು ಸಮಯ ಬರುವವರೆಗೂ ಬ್ಯಾಟಿಂಗ್ ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಂಡೆ' ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಮೊದಲನೇ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿ ದಂಡ ತೆತ್ತಿದ್ದ ಕೊಹ್ಲಿ ಪಡೆ
ವಿರಾಟ್ ಕೊಹ್ಲಿ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಮುಖ ಕಾರಣವೂ ಇದೆ. ಅದೇನೆಂದರೆ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳು ಸಹ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕೆ ಎರಡೂ ತಂಡಗಳಿಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಗಳಲ್ಲಿ ತಲಾ 2 ಅಂಕಗಳನ್ನು ಕಡಿತಗೊಳಿಸಲಾಗಿತ್ತು. ಹೌದು ಮೊದಲನೇ ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಡ್ರಾನಲ್ಲಿ ಅಂತ್ಯಗೊಂಡ ಕಾರಣ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳಿಗೂ ತಲಾ 4 ಅಂಕಗಳು ಲಭಿಸಿದ್ದವು. ಆದರೆ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳು ಸಹ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕೆ ಎರಡೂ ತಂಡಗಳಿಗೂ ತಲಾ 2 ಅಂಕಗಳನ್ನು ದಂಡ ವಿಧಿಸಿ ಕಡಿತಗೊಳಿಸಿದ ನಂತರ ಎರಡೂ ತಂಡಗಳಿಗೂ ತಲಾ 2 ಅಂಕಗಳು ಮಾತ್ರ ಲಭಿಸಿದ್ದವು. ಹೀಗಾಗಿ ಎಚ್ಚೆತ್ತ ವಿರಾಟ್ ಕೊಹ್ಲಿ ಒಂದು ವೇಳೆ ಪಂದ್ಯ ಡ್ರಾ ಆದರೂ ಸಹ ನಿಧಾನಗತಿಯ ಬೌಲಿಂಗ್ ದಂಡ ಹಾಕಬಾರದು ಎಂಬ ಕಾರಣಕ್ಕೆ ಊಟದ ವಿರಾಮದ ನಂತರವೂ ಬ್ಯಾಟಿಂಗ್ ಮುಂದುವರೆಸುವ ನಿರ್ಧಾರವನ್ನು ವಿರಾಟ್ ಕೊಹ್ಲಿ ತೆಗೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications