
2022ರ ಟಿ20 ವಿಶ್ವಕಪ್ ಬಳಿಕ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದು, ಅಲ್ಲಿ ವೈಟ್-ಬಾಲ್ ಸರಣಿ ಆಡಲಿದೆ. ಮೂರು ಟಿ20 ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿದ್ದರೆ, ಏಕದಿನ ಸರಣಿಯಲ್ಲಿ ಶಿಖರ್ ಧವನ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಇದೀಗ ಭಾರತದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಅವರು ಶುಕ್ರವಾರ ಬಿಸಿಸಿಐ ಆಯ್ಕೆಗಾರರನ್ನು ಟೀಕಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಭಾರತ ತಂಡವನ್ನು ಪ್ರಕಟಿಸಿದಾಗ ಪೃಥ್ವಿ ಶಾ ಹೆಸರು ಕಾಣೆಯಾಗಿದ್ದನ್ನು ನೋಡಿ ಕಿಡಿಕಾರಿದ್ದಾರೆ.
ಮುಂಬೈ ಮೂಲದ ಪೃಥ್ವಿ ಶಾ ದೇಶೀಯ ಕ್ರಿಕೆಟ್ನಲ್ಲಿ ಸಾಕಷ್ಟು ರನ್ಗಳನ್ನು ಗಳಿಸಿದ್ದಾರೆ ಮತ್ತು ಅವರ ಸ್ಟ್ರೈಕ್ರೇಟ್ ಕೂಡ ಕಡಿಮೆ ಇಲ್ಲ. ಇಷ್ಟೆಲ್ಲ ಉತ್ತಮ ಪ್ರದರ್ಶನಗಳ ಹೊರತಾಗಿಯೂ, ಪೃಥ್ವಿ ಶಾರನ್ನು ನಿರಂತರವಾಗಿ ನಿರ್ಲಕ್ಷಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತ್ತೊಂದು ವಿಷಯವೆಂದರೆ, ಶುಭಮನ್ ಗಿಲ್ಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಅವಕಾಶ ನೀಡಲಾಗಿದೆ. ಪೃತ್ವಿ ಶಾ ಅವರಿಗೆ ಟಿ20 ತಂಡದಲ್ಲಿ ಸ್ಥಾನ ನೀಡದಿರುವುದು ಅಚ್ಚರಿ ತಂದಿದೆ ಎಂದು ಮಾಜಿ ಬ್ಯಾಟ್ಸ್ಮನ್ ಆಕಾಶ್ ಚೋಪ್ರಾ ತಿಳಿಸಿದ್ದಾರೆ.

"ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದ ಆಯ್ಕೆಯನ್ನು ನೋಡಿದರೆ, ಪೃಥ್ವಿ ಶಾ ಏಕೆ ಅದರ ಭಾಗವಾಗಿಲ್ಲ ಎಂದು ನೀವೇ ಅಚ್ಚರಿಪಡುತ್ತೀರಿ. ಪವರ್ಪ್ಲೇ ಓವರ್ಗಳಲ್ಲಿ ಆಟದ ಶೈಲಿಯನ್ನು ಬದಲಾಯಿಸಲು ಹೇಳುತ್ತೀರಿ. ಪೃಥ್ವಿ ಶಾಗೆ ಆಡಲು ಅವಕಾಶ ನೀಡಬೇಕಿತ್ತು," ಎಂದು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.
ಅನೇಕ ಯುವ ಮುಖಗಳು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನ ಆಟಗಾರರು ಈಗಾಗಲೇ ಕೆಲವು ಪಂದ್ಯಗಳಲ್ಲಿ ಭಾರತಕ್ಕಾಗಿ ಆಡಿದ್ದಾರೆ. ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶುಭಮನ್ ಗಿಲ್ ಮತ್ತು ಉಮ್ರಾನ್ ಮಲಿಕ್ ಅವರಂತಹ ಅಚ್ಚರಿಯ ಹೆಸರುಗಳಿವೆ.
ಆದರೆ, ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಪೃಥ್ವಿ ಶಾಗೆ ಸಮಯ ಮುಗಿದಿದೆ ಎಂದು ತೋರುತ್ತದೆ. ಏಕೆಂದರೆ ಅವರ ದೇಶೀಯ ರನ್ಗಳು ಸಹ ಅವರ ಆಯ್ಕೆಯನ್ನು ಖಚಿತಪಡಿಸಲಿಲ್ಲ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟರು.