ರಾಹುಲ್ ಆಟಕ್ಕೆ ನಾಯಕನ ಮೆಚ್ಚುಗೆ: ಭಾರತದ 5ನೇ ಕ್ರಮಾಂಕಕ್ಕೆ ಈಗ ವಿಶೇಷ ಬಲ ಬಂದಿದೆ ಎಂದ ರೋಹಿತ್

ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದ ಅದ್ಭುತ ಪ್ರದರ್ಶನದ ಜೊತೆಗೆ ಕೆಎಲ್ ರಾಹುಲ್ ಬ್ಯಾಟಿಂಗ್ನಲ್ಲಿ ನೀಡಿದ ಸಮಯೋಚಿತ ಪ್ರದರ್ಶನ ಭಾರತದ ಗೆಲುವಿಗೆ ಪ್ರಮುಖ ಕಾರಣವಾಯಿತು. ಹೀಗಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೆಎಲ್ ರಾಹುಲ್ ಪ್ರದರ್ಶನದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.
ಶ್ರೀಲಂಕಾ ವಿರುದ್ಧದ 2ನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಟೀಮ್ ಇಂಡಿಯಾ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ಗೆ ಇಳಿದಿದ್ದರು. ಬಳಿಕ 103 ಎಸೆತಗಳನ್ನು ಎದುರಿಸಿದ ರಾಹುಲ್ ಅಜೇಯ 64 ರನ್ ಸಿಡಿಸಿದರು ಹೀಗಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ 216 ರನ್ಗಳ ಗುರಿ ಬೆನ್ನಟ್ಟಲು ಸಾಧ್ಯವಾಯಿತು. ಈ ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಅವರಂತಾ ಆಟಗಾರ ಐದನೇ ಕ್ರಮಾಂಕದಲ್ಲಿ ಇಳಿಯುವುದರಿಂದಾಗಿ ಭಾರತ ತಂಡಕ್ಕೆ ಅದ್ಭುತವಾದ ಬ್ಯಾಟಿಂಗ್ ಬಲ ದೊರೆಯುತ್ತದೆ ಎಂದಿದ್ದಾರೆ.

ಭಾರತದ ಬ್ಯಾಟಿಂಗ್ಗೆ ವಿಶೇಷ ಬಲ
"ಇದು ಬಹಳ ಪೈಪೋಟಿ ಪಂದ್ಯವಾಗಿತ್ತು. ಆದರೆ ಇಂಥಾ ಪಂದ್ಯಗಳು ನಮಗೆ ಸಾಕಷ್ಟು ಪಾಠವನ್ನು ಕಲಿಸುತ್ತವೆ. ನಾವು ಒತ್ತಡದಲ್ಲಿ ಇನ್ನಿಂಗ್ಸ್ ಬೆಳೆಸಬೇಕಾಗುತ್ತದೆ. ಕೆಎಲ್ ರಾಹುಲ್ ಬಹಳ ಸಮಯಗಳಿಂದ ಐದನೇ ಕ್ರಮಾಂಕದಲ್ಲಿ ಇಳಿಯುತ್ತಿದ್ದು ಇದರಿಂದಾಗಿ ನಮ್ಮ ಬ್ಯಾಟಿಂಗ್ನ ಬಲ ಹೆಚ್ಚಾಗಿದೆ. ಹೀಗಾಗಿ ಅಗ್ರ ಕ್ರಮಾಂಕದಲ್ಲಿ ನಾವು ನಿರಾಳವಾಗಿ ಬ್ಯಾಟಿಂಗ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ" ಎಂದು ರಾಹುಲ್ ಪ್ರದರ್ಶನದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್.

ಮಧ್ಯಮ ಕ್ರಮಾಂಕದ ಬಗ್ಗೆ ರೋಹಿತ್ ಮಾತು
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ ಇರಬೇಕು ಎಂಬ ಒತ್ತಾಯಕ್ಕೆ ಸಂಬಂದಿಸಿದಂತೆ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕಡ್ಡಾಯವಾಗಿ ಎಡಗೈ ಆಟಗಾರ ಇರಲೇಬೇಕು ಎಂಬ ವಾದವನ್ನು ತಾನು ಒಪ್ಪಿಕೊಳ್ಳಲ್ಲ ಎಂದಿರುವ ರೋಹಿತ್ ಗುಣಮಟ್ಟದ ಬಲಗೈ ಆಟಗಾರ ಕೂಡ ತಂಡದ ಒತ್ತಡವನ್ನು ಮಧ್ಯಮ ಕ್ರಮಾಂಕದಲ್ಲಿ ಮೆಟ್ಟಿ ನಿಲ್ಲಲು ಸಾಧ್ಯವಿದೆ ಎಂದಿದ್ದಾರೆ.

ಎಡಗೈ ಆಟಗಾರ ಕಡ್ಡಾಯವಲ್ಲ
"ಮಧ್ಯಮ ಕ್ರಮಾಂಕದಲ್ಲಿ ಎಡಗೈ ಆಟಗಾರ ಇದ್ದರೆ ಉತ್ತಮವಾದ ಸಂಗತಿ. ಆದರೆ ಆ ಬಗ್ಗೆ ಹೆಚ್ಚು ಚಿಂತಿತನಾಗುವುದಿಲ್ಲ. ಸಾಮಾನ್ಯವಾಗಿ ನಾವು ಅಲ್ಲಿ ಎಡಗೈ ಆಟಗಾರ ಇರುವುದನ್ನು ಬಯಸುತ್ತೇವೆ ನಿಜ. ಆದರೆ ಬಲಗೈ ಆಟಗಾರರ ಗುಣಮಟ್ಟದ ಬಗ್ಗೆ ಕೂಡ ನಮಗೆ ಅರಿವಿದ್ದು ಅವರು ಮಧ್ಯಮ ಕ್ರಮಾಂಕದಲ್ಲಿ ತಂಡದ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ.

ಕುಲ್ದೀಪ್ ಪ್ರದರ್ಶನ ಕೊಂಡಾಡಿದ ರೋಹಿತ್
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್ದೀಪ್ ಯಾದವ್ ಬೌಲಿಂಗ್ ಪ್ರದರ್ಶನದ ಬಗ್ಗೆಯೂ ರೋಹಿತ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಕುಲ್ದೀಪ್ಗೆ ಇದು ಕಮ್ಬ್ಯಾಕ್ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಅವರು ಅದ್ಭುತವಾಗಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ನಮ್ಮನ್ನು ಅಕ್ಷರಶಃ ಪಂದ್ಯಕ್ಕೆ ವಾಪಾಸ್ ತಂದು ಕುಲ್ದೀಪ್. ಶ್ರೀಲಂಕಾ ಉತ್ತಮವಾಗಿ ಆಡುತ್ತಿದ್ದಾಗ ಅವರಿಗೆ ಆಘಾತ ನೀಡಿದರು. ಅಗತ್ಯ ಸಂದರ್ಭಗಳಲ್ಲಿ ವಿಕೆಟ್ ಪಡೆಯುವ ಮೂಲಕ ಎದುರಾಳಿ ವಿರುದ್ಧ ಒತ್ತಡ ಹೇರುವಂತೆ ಮಾಡಿದರು. ಈಗ ಅವರು ಆತ್ಮವಿಶ್ವಾಸದಿಂದ ಬೌಲಿಂಗ್ ನಡೆಸುತ್ತಿದ್ದು ಇದು ಖಂಡಿತವಾಗಿಯೂ ತಂಡಕ್ಕೆ ನೆರವಾಗುತ್ತದೆ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications