
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ರೋಹಿತ್ ಶರ್ಮಾ ಪಡೆ ಕೊನೆಯ ಪಂದ್ಯಕ್ಕಾಗಿ ಭರ್ಜರಿ ಅಭ್ಯಾಸ ನಡೆಸಿದೆ. ತಿರುವನಂತಪುರದ ಗ್ರೀನ್ಫೀಲ್ಡ್ ಕ್ರೀಡಾಂಗಣದಲ್ಲಿ ಸರಣಿಯ ಕೊನೆಯ ಏಕದಿನ ಪಂದ್ಯ ಜನವರಿ 15 ರ ಭಾನುವಾರ ನಡೆಯಲಿದೆ.
ಪಂದ್ಯಕ್ಕೆ ಮುನ್ನಾದಿನ ಟೀಂ ಇಂಡಿಯಾ ಆಟಗಾರರು ಗ್ರೀನ್ಫೀಲ್ಡ್ ಅಂಗಳದಲ್ಲಿ ಕಠಿಣ ಅಭ್ಯಾಸ ಮಾಡಿದೆ. ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಭ್ಯಾಸದಿಂದ ಹೊರಗುಳಿದು, ವಿಶ್ರಾಂತಿ ಪಡೆದರು.
ಮೂರನೇ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಿ ನಾಯಕ ರೋಹಿತ್ ಶರ್ಮಾ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಸರಣಿಯನ್ನು ಗೆದ್ದಿರುವ ರೋಹಿತ್ ಶರ್ಮಾ ಪಡೆ ಮೂರನೇ ಪಂದ್ಯಗಳಲ್ಲಿ ಹಲವು ಪ್ರಯೋಗ ಮಾಡಲು ನಿರ್ಧರಿಸಿದೆ.
ಶನಿವಾರ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಹೆಚ್ಚಿನ ಅವಧಿಗೆ ಅಭ್ಯಾಸ ನಡೆಸಿದರು. ಸರಣಿಯ ಕೊನೆಯ ಪಂದ್ಯದಲ್ಲಿ ಇವರಿಬ್ಬರೂ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಈ ಇಬ್ಬರೂ ಆಟಗಾರರು ಬೆಂಚ್ ಕಾದಿದ್ದರು.

ಬ್ಯಾಟಿಂಗ್ ಕೋಚ್ ಹೇಳಿದ್ದೇನು?
ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಹೇಳುವ ಪ್ರಕಾರ, ಶ್ರೀಲಂಕಾ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡುವುದಿಲ್ಲ. ಅದರಲ್ಲೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಮಾಡಲ್ಲ ಎಂದಿದ್ದಾರೆ. ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಪ್ಲೇಯಿಂಗ್ XIನಲ್ಲಿ ಮತ್ತೆ ಅವಕಾಶ ಪಡೆಯುತ್ತಾರೆ ಎಂದಿದ್ದಾರೆ.
ಅವರ ಮಾತಿನಂತೆ ಆದರೆ, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಏಕದಿನ ಪಂದ್ಯವಾಡಲು ಇನ್ನೂ ಕೆಲವು ದಿನ ಕಾಯಬೇಕಾಗಬಹುದು. ಇನ್ನು ಚಹಾಲ್ ಫಿಟ್ ಆಗಿದ್ದರೂ ಅವರು ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ.

ಕಳೆದ ಪಂದ್ಯದಲ್ಲಿ ಕುಲದೀಪ್ ಯಾದವ್ ಪ್ರಮುಖ 3 ವಿಕೆಟ್ ಪಡೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದು, ಆಡುವ ಬಳಗದಲ್ಲಿ ಮುಂದುವರೆಯಲಿದ್ದಾರೆ. ಶನಿವಾರ ನಡೆದ ಅಭ್ಯಾಸದಲ್ಲಿ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಇಬ್ಬರೂ ನೆಟ್ಸ್ನಲ್ಲಿ ದೀರ್ಘಕಾಲ ಅಭ್ಯಾಸ ಮಾಡಿದರು.
ಬಾಂಗ್ಲಾದೇಶದ ವಿರುದ್ಧ ಭರ್ಜರಿ ದ್ವಿಶತಕ ಗಳಿಸಿದರೂ ಕೂಡ ಇಶಾನ್ ಕಿಶನ್ ಮುಂದಿನ ಏಕದಿನ ಪಂದ್ಯದಲ್ಲಿ ಬೆಂಚ್ ಕಾಯುವಂತಾಯಿತು. ಶುಭಮನ್ ಗಿಲ್ಗೆ ವಿಶ್ರಾಂತಿ ನೀಡಿದರೆ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.