
ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ಅಂತ್ಯವಾಗಿದ್ದು ಈ ಪಂದ್ಯದಲ್ಲಿ ಭಾರತ ಭಾರೀ ಅಂತರದ ಗೆಲುವು ಸಾಧಿಸಿದೆ. ಈ ಪಂದ್ಯ ಹಲವು ಕಾರಣಗಳಿಗಾಗಿ ಭಾರತೀಯ ತಂಡಕ್ಕೆ ಸ್ಮರಣೀಯ ಪಂದ್ಯ ಎನಿಸಿಕೊಂಡಿದೆ. ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯ ಇದಾಗಿದ್ದರೆ ರೋಹಿತ್ ಶರ್ಮಾ ನಾಯಕತ್ವದ ಚೊಚ್ಚಲ ಟೆಸ್ಟ್ ಪಂದ್ಯ ಎಂಬುದು ಕೂಡ ಮತ್ತೊಂದು ಪ್ರಮುಖ ಅಂಶವಾಗಿತ್ತು. ಇದರ ಹೊರತಾಗಿ ಭಾರತದ ಅನುಭವಿ ಆಟಗಾರ ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ದಿಗ್ಗಜ ಕ್ರಿಕೆಟಿಗ ಕಪಿಲ್ದೇವ್ ಅವರ ದಾಖಲೆಯನ್ನು ಮುರಿದು ಭಾರತದ ಪರವಾಗಿ ಟೆಸ್ಟ್ ಮಾದರಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಈ ಮಹತ್ತರ ಸಾಧನೆಯನ್ನು ಮಾಡಿದ ನಂತರ ನಾಯಕ ರೋಹಿತ್ ಶರ್ಮಾ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಬಗ್ಗೆ ಬಿಸಿಸಿಐ ಟಿವಿಗೆ ನಿಡಿದ ಸಂದರ್ಶನದಲ್ಲಿ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅದಾದ ಬಳಿಕ ಸ್ವತಃ ಆರ್ ಅಶ್ವಿನ್ ಬಿಸಿಸಿಐ ಟಿವಿಗೆ ಸಂದರ್ಶನ ನಿಡಿದ್ದು ಈ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಅವರಿಂದ ಹೊಗಳಿಸಿಕೊಂಡ ನಂತರ ನಾಯಕನನ್ನು ಎದುರಿಸಲು ಮುಜುಗರವುಂಟಾಯಿತು ಹಾಗೂ ಅವರನ್ನು ಹೇಗೆ ಎದುರಿಸಿದರು ಎಂಬುದನ್ನು ಆರ್ ಅಶ್ವಿನ್ ಹಂಚಿಕೊಂಡಿದ್ದಾರೆ.
ರೋಹಿತ್ ಹೇಳಿದ್ದೇನು?: ಪಮದ್ಯದ ಮುಕ್ತಾಯದ ಬಳಿಕ ರೋಹಿತ್ ಶರ್ಮಾ ಮಾಧ್ಯಮಗೋಷ್ಠಿಯಲ್ಲಿ ಆರ್ ಅಶ್ವಿನ್ ಸಾಧನೆಯ ಬಗ್ಗೆ ಮಾತನಾಡುತ್ತಾ ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. "ನನ್ನ ಪಾಲಿಗೆ ಆತ ಈಗಾಗಲೇ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್. ಆತ ದೇಶಕ್ಕಾಗಿ ಬಹಳ ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಆತನ ಪ್ರದರ್ಶನ ಬಹಳ ಅದ್ಭುತವಾಗಿದೆ. ಆತ ಬಹಳಷ್ಟು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ" ಎಂದು ರೋಹಿತ್ ಆರ್ ಅಶ್ವಿನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
"ರೋಹಿತ್ಗೆ ಏನು ಹೇಳಬೇಕೆಂದು ನನಗೆ ಗೊತ್ತೇ ಆಗಲಿಲ್ಲ. ನನಗೆ ಹೊಗಳಿಕೆಯನ್ನು ಸ್ವೀಕರಿಸಲು ಬರುವುದಿಲ್ಲ. ನನಗೆ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ನಿಜಕ್ಕೂ ತಿಳಿಯಲಿಲ್ಲ. ನಾನು ಕೆಲ ಸಂದರ್ಭಗಳಲ್ಲಿ ಭಾವನಾತ್ಮಕಗೊಳ್ಳಬಹುದು. ಆದರೆ ಭಾವುಕನಾಗಿದ್ದಾಗ ಅಂತಾ ಪದಗಳನ್ನು ಬಳಸಲು ನನಗೆ ಸಾಧ್ಯವಾಗುವುದಿಲ್ಲ. ರೋಹಿತ್ ಮಾಧ್ಯಮಗೋಷ್ಠಿಗೆ ತೆರಳಿ ನನ್ನನ್ನು ಪ್ರಶಂಸಿಸಿದ ನಂತರ ಇಂದು ಬೆಳಗ್ಗಿನವರೆಗೂ ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ತಿಳಿಯಲಿಲ್ಲ. ಬೆಳಗ್ಗಿನ ಉಪಹಾರದ ಸಂದರ್ಭದಲ್ಲಿ ಅದು ಆತನ ಶ್ರೇಷ್ಠ ಗುಣ ಎಂದು ಹೇಳಿದೆ" ಎಂದು ಆರ್ ಅಶ್ವಿನ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 222 ರನ್ಗಳ ಅಂತರದ ಬೃಹತ್ ಗೆಲುವಿಗೆ ರೋಹಿತ್ ಶರ್ಮಾ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದರು. "ರೋಹಿತ್ ಶರ್ಮಾ ರಣತಂತ್ರದ ವಿಚಾರದಲ್ಲಿ ಎಷ್ಟು ಬಲಿಷ್ಠ ಎಂಬುದು ಎಲ್ಲರಿಗೂ ತಿಳಿದಿದೆ. ಆತ ತಂಡವನ್ನು ಮುನ್ನಡೆಸುವಾಗ ಸಾಕಷ್ಟು ಮಾನವೀಗ ಗುಣಗಳನ್ನು ನಾನು ಕಂಡಿದ್ದೇನೆ. ಆತ ತಂಡದ ಪ್ರತಿಯೊಬ್ಬರ ಬಗ್ಗೆಯೂ ಗಮನವಿಟ್ಟುಕೊಳ್ಳುತ್ತಾನೆ. ಎಲ್ಲರೂ ಯಾವ ಭಾವನೆಯಲ್ಲಿದ್ದಾರೆ ಹಾಗೂ ಎಲ್ಲರ ಆತ್ಮವಿಶ್ವಾಸ ಎಷ್ಟು ಉತ್ತಮವಾಗಿದೆ ಎಂಬುದು ಬಹಳ ಮುಖ್ಯವಾಗುತ್ತದೆ" ಎಂದು ಆರ್ ಅಶ್ವಿನ್ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ತಂಡಗಳು ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಈಗ ಸಜ್ಜಾಗುತ್ತಿದೆ. ಎರಡನೇ ಪಂದ್ಯ ಅಹರ್ನಿಶಿಯಾಗಿ ನಡೆಯಲಿದ್ದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿಥ್ಯ ವಹಿಸಿಕೊಳ್ಳಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಚೊಚ್ಚಲ ಟೆಸ್ಟ್ ಪಂದ್ಯ ಇದಾಗಿದೆ.