ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಎರಡು ಪಮದ್ಯಗಳು ಅಂತ್ಯವಾಗಿದ್ದು ಭಾರತ ಎರಡು ಪಂದ್ಯದಲ್ಲಿಯೂ ಭರ್ಜರಿ ಗೆಲುವು ಸಾಧಿಸಿದೆ. ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡ ಮಾಡಿದ ಎಡವಟ್ಟಿಗೆ ಈಗ ದಂಡ ತೆರಬೇಕಾಗಿದೆ. ನಿಧಾನಗತಿಯ ಬೌಲಿಂಗ್ ಕಾರಣಕ್ಕೆ ಶ್ರೀಲಂಕಾ ತಂಡಕ್ಕೆ 20 ಶೇಕಡಾ ದಂಡವನ್ನು ವಿಧಿಸಲಾಗಿದೆ.
ಮ್ಯಾಚ್ ರೆಫ್ರಿ ರಂಜನ್ ಮದುಗಲ್ಲೆ ಶ್ರೀಲಂಕಾ ತಂಡದ ನಾಯಕ ದಸುನ್ ಶನಕಾ ಹಾಗೂ ಅವರ ತಂಡದ ಸದಸ್ಯರಿಗೆ ದಂಡವನ್ನು ವಿಧಿಸಿದ್ದಾರೆ. ನಿಗದಿತ ಸಮಯದ ಒಳಗೆ ಓವರ್ ಪೂರ್ಣಗೊಳಿಸುವಲ್ಲಿ ಶ್ರೀಲಂಕಾ ತಂಡ ವಿಫಲವಾಗಿತ್ತು. ಹೀಗಾಗಿ ಈ ದಂಡವನ್ನು ವಿಧಿಸಲಾಗಿದೆ.
ಭಾರತ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಪ್ರಕಟ
ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಉತ್ತಮ ಬ್ಯಾಟಿಂಗ್ ನಡೆಸಿ ಭಾರತಕ್ಕೆ 276 ರನ್ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ವಿರುದ್ಧ ಬೌಲಿಂಗ್ನಲ್ಲಿಯೂ ಉತ್ತಮ ದಾಳಿಯನ್ನು ಸಂಘಟಿಸುವಲ್ಲಿ ಶ್ರೀಲಂಕಾ ತಂಡ ಯಶಸ್ವಿಯಾಗಿತ್ತು.
ಪ್ರಮುಖ ಬ್ಯಾಟ್ಸ್ಮನ್ಗಳನ್ನು ಶೀಘ್ರವಾಗಿ ಫೆವಿಲಿಯನ್ಗೆ ವಾಪಾಸ್ ಕಳುಹಿಸುವಲ್ಲಿ ಶ್ರೀಲಂಕಾ ತಂಡದ ಬೌಲರ್ಗಳು ಯಶಸ್ಸನ್ನು ಕಂಡಿದ್ದರು. ಆದರೆ ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ ಹಾಗೂ ದೀಪಕ್ ಚಹರ್ ಮತ್ತು ಭುವನೇಶ್ವರ್ ಕುಮಾರ್ ಶ್ರೀಲಂಕಾ ತಂಡದ ಹಿಡಿತದಲ್ಲಿದ್ದ ಪಂದ್ಯವನ್ನು ಭಾರತ ಗೆಲ್ಲುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ದೀಪಕ್ ಚಹರ್ ಅದ್ಭುತವಾದ ಪ್ರದರ್ಶನ ನೀಡಿ ಭಾರತ ಗೆಲ್ಲುವಂತೆ ಮಾಡಿದ್ದರು. ಈ ಮೂಲಕ ಭಾರತ ಸರಣಿಯಲ್ಲಿ ಸತತ ಎರಡನೇ ಪಂದ್ಯವನ್ನು ಕೂಡ ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಯಿತು.
ಈ ಪಂದ್ಯದಲ್ಲಿ ದೀಪಕ್ ಚಹರ್ ಅಜೇಯ 69 ರನ್ಗಳ ಕೊಡುಗೆಯನ್ನು ನೀಡಿದ್ದರು. ಇನ್ನೂ ಐದು ಎಸೆತಗಳು ಬಾಕಿಯಿರುವಂತೆಯೇ ಭಾರತ ಗೆದ್ದು ಬೀಗಿತ್ತು. ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಶುಕ್ರವಾರ ನಡೆಯಲಿದೆ. ಶ್ರೀಲಂಕಾ ತಂಡಕ್ಕೆ ಸರಣಿಯಲ್ಲಿ ವೈಟ್ವಾಶ್ ಮುಖಬಂಗದಿಂದ ತಪ್ಪಿಸಿಕೊಳ್ಳಬೇಕಾದರೆ ಅಂತಿಮ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡವಿದೆ.