
ಢಾಕಾ, ಅಕ್ಟೋಬರ್ 07: ಇಲ್ಲಿನ ಶೇರ್ ಎ ಬಾಂಗ್ಲಾ ಮೈದಾನದಲ್ಲಿ ನಡೆದ ಅಂಡರ್ 19 ಏಷ್ಯಾಕಪ್ ಅಂತಿಮ ಹಣಾಹಣಿಯಲ್ಲಿ ಭಾರತದ ಅಂಡರ್ 19 ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಶ್ರೀಲಂಕಾ ತಂಡವನ್ನು ಮಣಿಸಿ 6ನೇ ಬಾರಿಗೆ ಏಷ್ಯಾ ಕಪ್ ಎತ್ತಿ ಹಿಡಿದ ಭಾರತದ ತರುಣರು ಸಂಭ್ರಮಿಸಿದರು.
ಗೆಲ್ಲಲು ಬೇಕಿದ್ದ 305ರನ್ ಗಳ ಗುರಿಯನ್ನು ಬೆನ್ನು ಹತ್ತಿದ್ದ ಶ್ರೀಲಂಕಾ ತಂಡವು 38.4 ಓವರ್ ಗಳಲ್ಲಿ 160 ಸ್ಕೋರಿಗೆ ಆಲೌಟ್ ಆಯಿತು. ಈ ಮೂಲಕ ಭಾರತಕ್ಕೆ 144ರನ್ ಗಳ ಬೃಹತ್ ಜಯದ ಕಾಣಿಕೆ ನೀಡಿತು. ಭಾರತದ ಪರ ಹರ್ಷ್ ತ್ಯಾಗಿ 38ರನ್ನಿತ್ತು 6 ವಿಕೆಟ್ ಗಳಿಸಿ ಅಮೋಘ ಪ್ರದರ್ಶನ ನೀಡಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ನಾಲ್ವರು ಅರ್ಧಶತಕ ಸಿಡಿಸಿದರು. ಯಶಸ್ವಿ ಜೈಸ್ವಾಲ್ 113 ಎಸೆತಗಳಲ್ಲಿ 85ರನ್, ಅನುಜ್ ರಾವತ್ 79 ಎಸೆತಗಳಲ್ಲಿ 57ರನ್, ಕರ್ನಾಟಕ ಮೂಲದ ದೇವದತ್ ಪಡಿಕ್ಕಳ್ ಅವರು 31 ರನ್ ಗಳಿಸಿದರು.
ನಾಯಕ ಸಿಮ್ರಾನ್ ಸಿಂಗ್ 37 ಎಸೆತಗಳಲ್ಲಿ 65ರನ್ ಹಾಗೂ ಅಯೂಶ್ 28 ಎಸೆತಗಳಲ್ಲಿ 52ರನ್ ಗಳಿಸಿ ತಂಡದ ಮೊತ್ತವನ್ನು 50 ಓವರ್ ಗಳಲ್ಲಿ 304/3ಕ್ಕೇರಿಸಿದರು.
ಶ್ರೀಲಂಕಾ ಪರ ಆರಂಭಿಕ ಆಟಗಾರ ನಿಸಾ ಮದುಶ್ಕಾ 49ರನ್ ಹಾಗೂ ಪಸಿಂದು ಸೂರ್ಯಬಂದಾರ 31ರನ್, ನವೋದ್ ಪರನವಿಥಾನ 48ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಹರ್ಷ್ ತ್ಯಾಗಿ ಮಾರಕ ಬೌಲಿಂಗ್ ಮಾಡಿ 6 ವಿಕೆಟ್ ಕಿತ್ತರೆ, ಸಿದ್ದಾರ್ಥ್ ದೇಸಾಯಿ 2, ಮೋಹಿತ್ 1 ವಿಕೆಟ್ ಪಡೆದರು. ಹರ್ಷ್ ತ್ಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.