ಭಾರತವೇ ಗೆಲ್ಲಲಿದೆ ಎಂದ ಆಕಾಶ್ ಚೋಪ್ರ
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಆಕಾಶ್ ಚೋಪ್ರ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಬಗ್ಗೆ ಮಾತನಾಡಿರುವ ಆಕಾಶ್ ಚೋಪ್ರ ನಾಲ್ಕನೇ ಪಂದ್ಯದಲ್ಲಿ ಭಾರತ ಗೆಲ್ಲಲಿದೆ ಎಂಬ ಮಾತನ್ನು ಹೇಳಿದ್ದಾರೆ. ಜೊತೆಗೆ ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲಿದೆ ಎಂದು ಕೂಡ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಟಾಸ್ ಗೆಲ್ಲುವ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲಿದೆ. ಭಾರತ ತಂಡಕ್ಕೆ ಬ್ಯಾಟಿಂಗ್ ಉತ್ತಮ ಆಯ್ಕೆಯಾಗಿರಲಿದೆ. ಇಂಗ್ಲೆಂಡ್ ನೀವು ಕೂಡ ಲಾರ್ಡ್ಸ್ನಲ್ಲಿ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕಿತ್ತು. ಯಾಕೆಂದರೆ ಅಂತಿಮ ಹಂತದಲ್ಲಿ ಬ್ಯಾಟಿಂಗ್ ನಡೆಸುವುದು ಸುಲಭವಲ್ಲ. ಅಂದು ನೀವು ಕೇವಲ ಐವತ್ತು ಓವರ್ಗಳಲ್ಲಿಯೇ ಆಲೌಟ್ ಆಗಿದ್ದಿರಿ" ಎಂದು ಆಕಾಶ್ ಚೋಪ್ರಾ ವಿವರಣೆ ನೀಡಿದ್ದಾರೆ.
ಸ್ಪಿನ್ನರ್ಗಳಿಗೆ ಉತ್ತಮ ಅವಕಾಶ ಎಂದ ಚೋಪ್ರ
ಇನ್ನು ನಾಲ್ಕನೇ ಟೆಸ್ಟ್ ಪಂದ್ಯ ಓವಲ್ ಅಂಗಳದಲ್ಲಿ ನಡೆಯುತ್ತಿರುವ ಕಾರಣ ಇಲ್ಲಿ ಸ್ಪಿನ್ನರ್ಗಳಿಗೆ ಹೆಚ್ಚಿನ ಅವಕಾಶ ದೊರೆಯುವ ಸಾಧ್ಯತೆಯಿದೆ ಎಂದಿದ್ದಾರೆ ಚೋಪ್ರ. ಕಳೆದ ಮೂರು ಪಮದ್ಯಗಳಿಗೆ ಹೋಲಿಸಿದರೆ ಓವಲ್ ಮೈದಾನದಲ್ಲಿ ಸ್ಪಿನ್ನರ್ಗಳು ಹೆಚ್ಚಿನ ಯಶಸ್ಸು ಪಡೆಯಲಿದ್ದಾರೆ ಎಂದು ಚೋಪ್ರ ಊಹಿಸಿದ್ದಾರೆ. "ಈ ಐದು ದಿನಗಳ ಟೆಸ್ಟ್ ಪಂದ್ಯದಲ್ಲಿ ಕೊನೆಯ ದಿನದವರೆಗೆ ಪಂದ್ಯ ನಡೆದರೆ ಸ್ಪಿನ್ನರ್ಗಳು ಆರಕ್ಕಿಂತ ಹೆಚ್ಚಿನ ವಿಕೆಟ್ ಪಡೆಯಲಿದ್ದಾರೆ. ಮೊಯೀನ್ ಅಲಿ, ಆರ್ ಅಶ್ವಿನ್, ರವೀಂದ್ರ ಜಡೇಜಾ ಇವರಲ್ಲಿ ಯಾರಿಗೆ ಆ ಅವಕಾಶ ದೊರೆಯಲಿದೆ? ಎಂದಿದ್ದಾರೆ ಆಕಾಶ್ ಚೋಪ್ರ.
ಭೋಜನ ವಿರಾಮದ ನಂತರ ಬ್ಯಾಟಿಂಗ್ ಸುಲಭ
ಇನ್ನು ಇದೇ ಸಂದರ್ಭದಲ್ಲಿ ಮೊದಲ ಸೆಶನ್ನಲ್ಲಿ ಬ್ಯಾಟಿಂಗ್ ಸವಾಲಾಗಿದ್ದರೂ ಎರಡನೇ ಸೆಶನ್ನಲ್ಲಿ ಬ್ಯಾಟಿಂಗ್ ಸರಾಗವಾಗಿ ನಡೆಯಲಿದೆ ಎಂದಿದ್ದಾರೆ. ಭೋಜನ ವಿರಾಮದ ನಂತರ ಬ್ಯಾಟ್ಸ್ಮನ್ಗಳು ಉತ್ತಮವಾಗಿ ರನ್ಗಳನ್ನು ಕಲೆ ಹಾಕುವ ಅವಕಾಶವಿದೆ. "ಪ್ರತಿ ದಿನವೂ ಊಟದ ವಿರಾಮದ ಬಳಿಕ ಉತ್ತಮವಾಗಿ ರನ್ ಹರಿದುಬರಲಿದೆ. ಮಧ್ಯಮ ಓವರ್ಗಳಲ್ಲಿ ಹಳೆಯ ಚೆಂಡು, ಫ್ಲ್ಯಾಟ್ ಪಿಚ್ ಹಾಗೂ ಸ್ವಲ್ಪ ಹೆಚ್ಚು ಸ್ಪಿನ್ ಆಗಲಿದೆ. ಇಂತಾ ಸಂದರ್ಭದಲ್ಲಿ ಬ್ಯಾಟ್ಸ್ಮನ್ಗಳಿಗೆ ರನ್ಗಳಿಸಲು ಉತ್ತಮವಾದ ಅವಕಾಶವಿದೆ ಎಂದಿದ್ದಾರೆ ಆಕಾಶ್ ಚೋಪ್ರ.