ಪಂತ್, ಇಶಾಂತ್ ಅಗ್ಗಕ್ಕೆ ಔಟ್
ಇನ್ನು ಐದನೇ ದಿನದಾಟದಲ್ಲಿ ಭಾರತದ ಪರವಾಗಿ ಕೊನೆಯ ಭರವಸೆಯಂತೆ ಕ್ರೀಸ್ನಲ್ಲಿದ್ದವರು ಯುವ ಆಟಗಾರ ರಿಷಭ್ ಪಂತ್. ಆದರೆ ಪಂತ್ ಈ ಪಂದ್ಯದಲ್ಲಿ ಉತ್ತಮ ಪ್ತದರ್ಶನ ನೀಡಲು ಸಾಧ್ಯವಾಗಲಿಲ್ಲ. 22 ರನ್ಗಳಿಸಿದ್ದ ವೇಳೆ ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರತ ತಂಡ ಮತ್ತೊಮ್ಮೆ ಹಿನ್ನಡೆಯನ್ನು ಅನುಭವಿಸಿತ್ತು. ಆಗ ಟೀಮ್ ಇಂಡಿಯಾ 194 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ನಂತರ ಇಶಾಂತ್ ಶರ್ಮಾ ಕೂಡ ತಮ್ಮ ವಿಕೆಟ್ ಕಳೆದುಕೊಂಡರು. ಆದರೆ ಇಂಗ್ಲೆಂಡ್ ಕ್ರಿಕೆಟ್ ತಂಡ ಸಾಧಿಸಿದ ಕೊನೆಯ ಯಶಸ್ಸು ಇದಾಗಿತ್ತು.
ಶಮಿ-ಬೂಮ್ರಾ ಮ್ಯಾಜಿಕ್
ನಂತರ ಕ್ರೀಸ್ನಲ್ಲಿ ಜೊತೆಯಾದವರು ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ. ಈ ಜೋಡಿ ಇಂಗ್ಲೆಂಡ್ ತಂಡಕ್ಕೆ ಊಹಿಸಲು ಸಾಧ್ಯವಾಗದಂತಾ ಆಘಾತ ನೀಡಿದರು. ಸೋಲಿನ ಸುಳಿಯಲ್ಲಿದ್ದ ಟೀಮ್ ಇಂಡಿಯಾವನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ದರು. ಈ ಜೋಡಿ 9ನೇ ವಿಕೆಟ್ಗೆ ಇಂಗ್ಲೆಂಡ್ ನೆಲದಲ್ಲಿ ದಾಖಲೆಯ ರನ್ ಪೇರಿಸಿತು. ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ಬರೊಬ್ಬರಿ 298 ರನ್ಗಳನ್ನು ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್ಗೆ ಅಂತಿಮ 60 ಓವರ್ಗಳಲ್ಲಿ 273 ರನ್ಗಳ ಗುರಿಯನ್ನು ನಿಗದಿ ಪಡಿಸಿತು.
ಬೌಲಿಂಗ್ನಲ್ಲಿಯೂ ಭಾರತೀಯರ ಅಬ್ಬರ
ಇದಾದ ಬಳಿಕ ಬಾರತೀಯ ಬೌಲರ್ಗಳು ಬೌಲಿಂಗ್ನಲ್ಲಿ ತಮ್ಮ ಆರ್ಭಟವನ್ನು ಮುಂದುವರಿಸಿದರು. ಆರಂಭದಿಂದಲೇ ಇಂಗ್ಲೆಂಡ್ ತಂಡಕ್ಕೆ ಒಂದಾದಮೇಲೊಂದರಂತೆ ಆಘಾತ ನೀಡುತ್ತಾ ಸಾಗಿದರು. ಆರಂಭಿಕರಿಬ್ಬರು ಕೂಡ ಶೂನ್ಯಕ್ಕೆ ಔಟ್ ಆಗಿ ಫೆವಿಲಿಯನ್ ಸೇರಿದರು. ಇಂಗ್ಲೆಂಡ ತಮಡದ ನಾಯಕ ಜೋ ರೂಟ್ ಈ ಇನ್ನಿಂಗ್ಸ್ನಲ್ಲಿಯೂ ಒಂದಷ್ಟು ಹೊತ್ತು ಪ್ರತಿರೋಧವನ್ನು ಒಡ್ಡುವ ಮೂಲಕ ಭಾರತೀಯ ಬೌಲರ್ಗಳಿಗೆ ಸವಾಲಾದರು. ಆದರೆ 33 ರನ್ಗಳಿಗೆ ಇನ್ನಿಂಗ್ಸ್ ಅಂತ್ಯಗೊಳಿಸಿದ ರೂಟ್ ಬೂಮ್ರಾಗೆ ಬಲಿಯಾದರು. ಬಳಿಕ ಇನ್ನಿಂಗ್ಸ್ನ ಅಂತ್ಯದಲ್ಲಿ ಜೋಸ್ ಬಟ್ಲರ್ ಕೆಲ ಹೊತ್ತು ಕಾಡಿದರು. ಆದರೆ ಇನ್ನೊಂದು ತುದಿಯಲ್ಲಿ ಭಾರತ ನಿರಂತರವಾಗಿ ವಿಕೆಟ್ ಪಡೆಯುತ್ತಲೇ ಸಾಗಿತ್ತು. ಅಂತಿಮವಾಗಿ ಭಾರತ ಇಂಗ್ಲೆಂಡ್ ತಂಡವನ್ನು ಕೇವಲ 120 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡದ ವಿರುದ್ಧ 151 ರನ್ಗಳ ಭಾರೀ ಅಂತರದ ಗೆಲುವು ಸಾಧಿಸಿದೆ.
ಎರಡನೇ ಇನ್ನಿಂಗ್ಸ್ನಲ್ಲಿಯೂ ಸಿರಾಜ್ಗೆ 4 ವಿಕೆಟ್
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ನೀಡಿದ ಪ್ರದರ್ಶನ ಅಮೋಘವಾಗಿತ್ತು. ಎರಡೂ ಇನ್ನಿಂಗ್ಸ್ಗಳಲ್ಲಿ ಸಿರಾಜ್ ತಲಾ 4 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಜಸ್ಪ್ರೀತ್ ಬೂಮ್ರಾ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ನಲ್ಲಿ ಮಿಂಚುವ ಜೊತೆಗೆ ಬೌಲಿಂಗ್ನಲ್ಲಿಯೂ 3 ವಿಕೆಟ್ ಕಬಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಶಾಂತ್ ಶರ್ಮಾ ಎರಡಯ ವಿಕೆಟ್ ಪಡೆದರೆ ಮೊಹಮ್ಮದ್ ಶಮಿ ಒಂದು ವಿಕೆಟ್ ಕಬಳಿಸಿದರು.
ಸರಣಿಯಲ್ಲಿ ಭಾರತಕ್ಕೆ ಮುನ್ನಡೆ
ನಾಟಿಂಗ್ಹ್ಯಾಮ್ನಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗೆಲ್ಲುವ ಅವಕಾಶವನ್ನು ಪಡೆದಿದ್ದ ಭಾರತೀಯ ತಂಡ ಅಂತಿಮ ದಿನದಾಟದಲ್ಲಿ ಮಳೆಯ ಕಾರಣದಿಂದಾಗಿ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಲಾರ್ಡ್ಸ್ ಅಂಗಳದಲ್ಲಿ ಭಾರತೀಯ ತಂಡ ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಸರಣಿ ಗೆಲ್ಲುವ ಆಸೆಯನ್ನು ಚಿಗುರಿಸಿದೆ. ಇನ್ನು ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಭಾರತ ಕಳೆದ 7 ವರ್ಷಗಳಲ್ಲಿ ಸಾಧಿಸಿದ ಎರಡನೇ ಗೆಲುವಾಗಿದೆ. ಇದಕ್ಕೂ ಮುನ್ನ 2014ರಲ್ಲಿ ಎಂಎಸ್ ಧೋನಿ ನೇತೃತ್ವದ ಭಾರತ ತಂಡ ಲಾರ್ಡ್ಸ್ ಮೈದಾನದಲ್ಲಿ ಗೆಲುವು ಸಾಧಿಸಿ ಬೀಗಿತ್ತು. ಈಗ ವಿರಾಟ್ ಪಡೆ ಕೂಡ ಅದೇ ಸಾಧನೆ ಮಾಡಿದೆ. ಇದು ಲಾರ್ಡ್ಸ್ ಮೈದಾನದಲ್ಲಿ ಭಾರತ ಸಾಧಿಸಿದ ಮೂರನೇ ಗೆಲುವು. ಕಪಿಲ್ ದೇವ್ ನೇತೃತ್ವದ ತಂಡ 1986ರಲ್ಲಿ ಮೊದಲ ಬಾರಿಗೆ ಲಾರ್ಡ್ಸ್ ಅಂಗಳದಲ್ಲಿ ಗೆಲುವಿನ ರುಚಿ ಕಂಡಿತ್ತು.