ಹನುಮ ವಿಹಾರಿ ಪಾಪದ ಹುಡುಗ ಎಂದ ಅಜಯ್ ಜಡೇಜಾ
ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ಹನುಮ ವಿಹಾರಿಗೆ ಆಡುವ ಅವಕಾಶವನ್ನು ನೀಡಿಲ್ಲ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅಜಯ್ ಜಡೇಜಾ "ಹನುಮ ವಿಹಾರಿ ಓರ್ವ ಪಾಪದ ಹುಡುಗ, ಆತ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದ್ದಾನೆ. ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದಷ್ಟು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹನುಮ ವಿಹಾರಿ ಮಾಡಿದ ತಪ್ಪಾದರೂ ಏನು? ಆತ ತವರಿನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯ ಆಡುವುದನ್ನು ಬಿಟ್ಟು ಸೌತ್ ಆಫ್ರಿಕಾ ವಿರುದ್ಧ ಭಾರತ ಎ ತಂಡದಲ್ಲಿ ಪ್ರವಾಸವನ್ನು ಕೈಗೊಂಡು ಯಾಕೆ ಆಡಬೇಕು? ಟೀಮ್ ಇಂಡಿಯಾಗೆ ಆಯ್ಕೆ ಮಾಡದಿದ್ದ ಮೇಲೆ ಆತನನ್ನು ಭಾರತ ಎ ತಂಡಕ್ಕೂ ಆಯ್ಕೆ ಮಾಡಬೇಡಿ" ಎಂದು ಹೇಳಿಕೆ ನೀಡುವುದರ ಮೂಲಕ ಹನುಮ ವಿಹಾರಿಯನ್ನು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡದೇ ಭಾರತ ಎ ತಂಡದ ಜತೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕಳುಹಿಸಿರುವ ಆಯ್ಕೆಗಾರರ ವಿರುದ್ಧ ಅಜಯ್ ಜಡೇಜಾ ಕಿಡಿಕಾರಿದ್ದಾರೆ.
ಟೆಸ್ಟ್ ಸರಣಿಯಲ್ಲಿ ಭಾರತವೇ ಫೇವರಿಟ್ ಎಂದ ಅಜಯ್ ಜಡೇಜಾ
ಇನ್ನು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ 2ಪಂದ್ಯಗಳ ಟೆಸ್ಟ್ ಸರಣಿಯ ಕುರಿತು ಮಾತನಾಡಿರುವ ಅಜಯ್ ಜಡೇಜಾ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಗೆಲ್ಲಲಿದೆ ಎಂದು ಊಹಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ತವರು ನೆಲದಲ್ಲಿ ನಡೆದಿರುವ ಟೆಸ್ಟ್ ಪಂದ್ಯಗಳನ್ನು ಟೀಂ ಇಂಡಿಯಾ ಸುಲಭವಾಗಿ ಜಯ ಗಳಿಸಿದ್ದು ಈ ಬಾರಿಯೂ ಅದೇ ರೀತಿ ಗೆದ್ದು ಬೀಗಲಿದೆ ಎಂದು ಅಜಯ್ ಜಡೇಜಾ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ಗೆ ಪ್ರಕಟವಾಗಿರುವ ಭಾರತ ತಂಡ
ಅಜಿಂಕ್ಯ ರಹಾನೆ (ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ (ಉಪನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ವೃದ್ಧಿಮಾನ್ ಸಹಾ ( ವಿಕೆಟ್ ಕೀಪರ್), ಕೆಎಸ್ ಭರತ್ ( ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ; ವಿರಾಟ್ ಕೊಹ್ಲಿ ಎರಡನೇ ಟೆಸ್ಟ್ಗೆ ತಂಡವನ್ನು ಸೇರಿಕೊಂಡು ತಂಡವನ್ನು ಮುನ್ನಡೆಸಲಿದ್ದಾರೆ