ಜೋಹಾನ್ಸ್ ಬರ್ಗ್, ಜನವರಿ 11: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡ ಭಾರತ, ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಕೇಪ್ ಟೌನ್ ನಲ್ಲಿ ಆಡಿದ ತಂಡಕ್ಕೆ ಹೋಲಿಸಿದರೆ ಜೋಹಾನ್ಸ್ ಬರ್ಗ್ ನಲ್ಲಿ ಭಾರಿ ಬದಲಾವಣೆಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಆದರೆ, ಜಿಗುಟು ಸ್ವಭಾವ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಅವರು ಮತ್ತೊಮ್ಮೆ ತಮ್ಮ ಅತ್ಯಾಪ್ತರಿಗೆ ಮಣೆ ಹಾಕಿದರೆ ಅದರಲ್ಲಿ ಅಚ್ಚರಿಯೇನಿಲ್ಲ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅವಕಾಶ ವಂಚಿತರಾದ ಅಜಿಂಕ್ಯ ರಹಾನೆಯನ್ನು ಕೇಪ್ ಟೌನ್ ಟೆಸ್ಟ್ ಪಂದ್ಯಕ್ಕೆ ಪರಿಗಣಿಸಲಿಲ್ಲ. ರಹಾನೆ ಬದಲಿಗೆ ರೋಹಿತ್ ಶರ್ಮಗೆ ಮಣೆ ಹಾಕಲಾಯಿತು.
ಇನ್ನು ಕೆಎಲ್ ರಾಹುಲ್ ರನ್ನು ಎರಡನೇ ಆಯ್ಕೆಯಾಗಿ ಯಾವಾಗಲೂ ಪರಿಗಣಿಸುವುದು ಗೊತ್ತಿರುವ ವಿಚಾರ. ಹೀಗಾಗಿ, ಮುರಳಿ ವಿಜಯ್ ಜತೆಗೆ ಶಿಖರ್ ಧವನ್ ಕಣಕ್ಕಿಳಿದಿದ್ದರು.
ಮೊದಲ ಟೆಸ್ಟ್ ಪಂದ್ಯ ಕಳೆದುಕೊಳ್ಳಲು ಬ್ಯಾಟಿಂಗ್ ವೈಫಲ್ಯ ಪ್ರಮುಖ ಕಾರಣ ಎನ್ನುವುದನ್ನು ಕೊಹ್ಲಿ ಕೂಡಾ ಒಪ್ಪಿಕೊಂಡಿದ್ದಾರೆ. ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಆಯ್ಕೆ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಮಾಜಿ ನಾಯಕ ಸೌರವ್ ಗಂಗೂಲಿ ಅವರಂತೂ ಚೇತೇಶ್ವರ್ ಪೂಜಾರಾ ಅವರ ಆಯ್ಕೆ ಬಗ್ಗೆಯೂ ಪ್ರಶ್ನಿಸಿದ್ದಾರೆ. ಪೂಜಾರಾ ಅವರ 14 ಟೆಸ್ಟ್ ಶತಕಗಳ ಪೈಕಿ 13 ತವರು ನೆಲದಲ್ಲಿ ಬಂದಿದೆ.
ಕೆಎಲ್ ರಾಹುಲ್ ಅವರು ಆಸ್ಟ್ರೇಲಿಯಾದಲ್ಲಿ ಶತಕ ಬಾರಿಸುವ ಮೂಲಕ ಟೆಸ್ಟ್ ರಂಗಕ್ಕ್ ಕಾಲಿಟ್ಟರು. ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ನೆಲದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಂದಿನ ಪಂದ್ಯಕ್ಕೆ ಧವನ್ ಬದಲಿಗೆ ರಾಹುಲ್ ಸೂಕ್ತ ಆಯ್ಕೆ ಎಂದಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯಂತೆ, ಜೋಹಾನ್ಸ್ ಬರ್ಗ್ ನಲ್ಲಿ ಕೆಎಲ್ ರಾಹುಲ್ ಅವರು ಎರಡನೇ ಟೆಸ್ಟ್ ಪಂದ್ಯವಾಡುವುದು ಖಚಿತವಾಗಿದೆ. ಆದರೆ, ರಹಾನೆ ಆಯ್ಕೆ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅಲ್ಲದೆ ಹೆಚ್ಚುವರಿ ಬ್ಯಾಟ್ಸ್ ಮನ್ ಬೇಕು ಎಂದೆನಿಸಿದರೆ ರಹಾನೆ ಹಾಗೂ ರೋಹಿತ್ ಇಬ್ಬರಿಗೂ ಅವಕಾಶ ಸಿಗುವ ಸಾಧ್ಯತೆಯಿದೆ.