ಜೋಧಪುರ, ಮಾರ್ಚ್ 22 : ಸಂವಿಧಾನದ ಕರ್ತೃ ಡಾ. ಭೀಮರಾವ್ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ್ದ ಕ್ರಿಕೆಟ್ ಪಟು ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್ಐಆರ್ ದಾಖಲಿಸಲು ವಿಶೇಷ ಎಸ್ಸಿ/ಎಸ್ಟಿ ನ್ಯಾಯಾಲಯ ಆದೇಶಿಸಿದೆ.
ಭಾರತದ ಕ್ರಿಕೆಟ್ ತಂಡದಲ್ಲಿ ಆಲ್ ರೌಂಡರ್ ಆಗಿ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಅವರು 2017ರ ಡಿಸೆಂಬರ್ 26ರಂದು, ಅಂಬೇಡ್ಕರ್ ವಿರುದ್ಧ ಟ್ವೀಟ್ ಮಾಡಿ, ಸಂವಿಧಾನದ ಕರ್ತೃವನ್ನು ಅವಮಾನಿಸಿದ್ದರೆಂದು ಡಿಆರ್ ಮೇಘವಾಲ್ ಎಂಬುವವರು ದೂರು ಸಲ್ಲಿಸಿದ್ದರು.
ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿ, ಡಿಲೀಟ್ ಮಾಡಿದ್ದೇಕೆ?
ಪಾಂಡ್ಯ ಮಾಡಿದ್ದ ಟ್ವೀಟ್ ಹೀಗಿದೆ... "ಯಾವ ಅಂಬೇಡ್ಕರ್? ಅಡ್ಡ ಕಾನೂನುಗಳಿರುವ ಸಂವಿದಾನ ರಚಿಸಿದ್ದಾರಲ್ಲಾ ಆ ಅಂಬೇಡ್ಕರ್? ಅಥವಾ ಇಡೀ ದೇಶದಾದ್ಯಂತ ಮೀಸಲಾತಿ ಎಂಬ ರೋಗವನ್ನು ಹರಡಿದ್ದಾರಲ್ಲಾ, ಆ ಅಂಬೇಡ್ಕರ್" ಎಂದು ಅವರು ಟ್ವೀಟ್ ಮಾಡಿದ್ದರು.
ಹೀಗೆ ಟ್ವೀಟ್ ಮಾಡಿ ಪಾಂಡ್ಯ ಅವರು ದಲಿತರ ನಾಯಕ ಅಂಬೇಡ್ಕರ್ ಅವರಿಗೆ ಮಾತ್ರವಲ್ಲ ದಲಿತ ಸಮುದಾಯವನ್ನೂ ಅವಮಾನಿಸಿದ್ದಾರೆ ಎಂದು, ರಾಜಸ್ತಾನದ ಜಲೋರ್ ಜಿಲ್ಲೆಯ ರಾಷ್ಟ್ರೀಯ ಭೀಮ ಸೇನೆಯ ಸದಸ್ಯರಾಗಿರುವ ಮೇಘವಾಲ್ ಅವರು ದೂರಿನಲ್ಲಿ ತಿಳಿಸಿದ್ದರು.
ಪಾಂಡ್ಯ ಬ್ರದರ್ಸ್ ಟ್ವೀಟ್ ವಾರ್ ಗೆ ಸಕತ್ ಉತ್ತರ ನೀಡಿದ ಸೆಹ್ವಾಗ್
ಜನಪ್ರಿಯ ಕ್ರಿಕೆಟ್ ಪಟುವಾಗಿರುವ ಹಾರ್ದಿಕ್ ಪಾಂಡ್ಯ ಅಂಥವರು ಸಂವಿಧಾನದ ನಿರ್ಮಾತೃ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದಲ್ಲದೆ, ದಲಿತ ಸಮುದಾಯದ ಭಾವನೆಗಳಿಗೂ ಘಾಸಿ ಉಂಟು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ನಕಲಿ ಖಾತೆ : ಇದೀಗ ತಿಳಿದುಬಂದಿರುವ ಮಾಹಿತಿಯೇನೆಂದರೆ, ಆ ಅವಮಾನಕರ ಟ್ವೀಟನ್ನು ಹಾರ್ದಿಕ್ ಪಾಂಡ್ಯ ಮಾಡಿದ್ದಲ್ಲ. ಬದಲಾಗಿ, ನಕಲಿ ಖಾತೆ ತೆರೆದು ಬೇರೆ ಯಾರೋ ಆ ರೀತಿ ಟ್ವೀಟ್ ಮಾಡಿದ್ದರು. ಆ ನಕಲಿ ಟ್ವೀಟನ್ನು ಅಳಿಸಲಾಗಿದೆ.