ಈ ಬಾರಿಯ ಐಪಿಎಲ್ನಲ್ಲಿ ಸಾಕಷ್ಟು ಆಟಗಾರರು ಗಾಯಗೊಳ್ಳುತ್ತಿದ್ದಾರೆ. ಕೆಲ ಪ್ರಮುಖ ಆಟಗಾರರು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ಟೂರ್ನಿ "ಇಂಜ್ಯುರಿ ಪ್ರೀಮಿಯರ್ ಲೀಗ್" ಎಂದು ಅಭಿಮಾನಿಗಳು ಟ್ವಿಟ್ಟರ್ನಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಈ ಗಾಯಗಳಿಗೆ ಕಾರಣವನ್ನು ಡೆಲ್ಲಿ ತಂಡದ ಕೀಪರ್ ಅಲೆಕ್ಸ್ ಕ್ಯಾರಿ ಹೇಳಿದ್ದಾರೆ.
ಡೆಲ್ಲಿ ತಂಡದ ಪ್ರಮುಖ ಮೂವರು ಆಟಗಾರರು ಈಗಾಗಲೇ ಗಾಯಗೊಂಡಿದ್ದಾರೆ. ಅದರಲ್ಲಿ ಅನುಭವಿ ಆಟಗಾರರಾದ ಅಮಿತ್ ಮಿಶ್ರಾ ಹಾಗೂ ಇಶಾಂತ್ ಶರ್ಮಾ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ರಿಷಬ್ ಪಂತ್ ಕೂಡ ಗಾಯಗೊಂಡಿದ್ದು ಮುಂದಿನ ಕೆಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಸ್ವತಃ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹೇಳಿಕೆಯನ್ನು ನೀಡಿದ್ದಾರೆ.
ಯುವ ಆಟಗಾರರಿಗೆ ಧೋನಿ ಪಾಠ: ಪಂದ್ಯ ಮುಗಿದ ಬಳಿಕ ಕ್ರೀಡಾಸ್ಫೂರ್ತಿ ಮೆರೆದ ಮಾಹಿ
ಈ ಪ್ರಮಾಣದಲ್ಲಿ ಗಾಯಗೊಳ್ಳುತ್ತಿರುವುದಕ್ಕೆ ಸುದೀರ್ಘ ಕಾಲ ಅಭ್ಯಾಸವನ್ನು ನಡೆಸದೇ ಇರುವುದೇ ಕಾರಣ ಎಂದು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಹೇಳಿದ್ದಾರೆ. ಪಂತ್ ಅನುಪಸ್ಥಿತಿಯಲ್ಲಿ ಕ್ಯಾರಿ ಅವಕಾಶವನ್ನು ಪಡೆದಿದ್ದು ಡೆಲ್ಲಿ ತಂಡದ ವಿಕೆಟ್ ಕೀಪಿಂಗ್ ಹೊಣೆ ಹೊತ್ತಿದ್ದಾರೆ.
ಟೂರ್ನಿ ಆರಂಭವಾದ ಕೆಲವೇ ಕೆಲವೇ ಸಮಯದಲ್ಲಿ ನಾವು ಆಟಗಾರರು ಗಾಯಗೊಳ್ಳುತ್ತರುವುದನ್ನು ಕಂಡಿದ್ದೇವೆ. ಇದಕ್ಕೆ ವಾಸ್ತವ ಕಾರಣ ಏನೆಂದು ತಿಳಿಯುತ್ತಿಲ್ಲ. ಆದರೆ ಕೊರೊನಾ ವೈರಸ್ನ ಸಂದರ್ಭದಲ್ಲಿ ಆಟಗಾರರು ಸುದೀರ್ಘ ಕಾಲ ಅಭ್ಯಾಸವನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಇದು ಪರಿಣಾಮ ಬೀಳುವ ಸಾಧ್ಯತೆಯಿದೆ ಎಂದು ಕ್ಯಾರಿ ಹೇಳಿದ್ದಾರೆ.