ದುಬೈ, ಸೆ. 25: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯುವ ಪ್ರತಿಭೆಗಳ ಪೈಕಿ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರು ಪಂಜಾಬ್ ತಂಡದ ಲೆಗ್ ಸ್ಪಿನ್ನರ್ ರವಿ ಬಿಷ್ನೋಯಿ. ಐಪಿಎಲ್ ನಲ್ಲಿ ಶಿಸ್ತಿನಿಂದ ಬೌಲಿಂಗ್ ಮಾಡಿ, ಯಶಸ್ಸು ಗಳಿಸಲು ಕೋಚ್ ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನವೇ ಕಾರಣ ಎಂದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ವಿರುದ್ಧ ಕಿಂಗ್ಸ್ ಎಲೆವನ್ ಪಂಜಾಬ್ ತಂಡವು 97 ರನ್ ಗಳಿಂದ ಗೆಲುವು ಸಾಧಿಸಿದ ಸಂತಸದಲ್ಲಿ ರವಿ ಮಾತನಾಡಿದರು.
ಐಪಿಎಲ್ 2020ರಲ್ಲಿ ಮೊದಲ ಶತಕ ಸಿಡಿಸಿ, ರಾಹುಲ್ ಮುರಿದ ದಾಖಲೆಗಳ ಪಟ್ಟಿ
ಕುಂಬ್ಳೆ ಅವರು ಕಲಿಸಿದ ಶಿಸ್ತು, ನಿನ್ನ ಕೌಶಲ್ಯಕ್ಕೆ ತಕ್ಕಂತೆ ಆಟವಾಡು, ಎದುರಾಳಿ ಬಗ್ಗೆ ಭಯಬೇಡ, ಎಂಥಾ ಸನ್ನಿವೇಶ ಬಂದರೂ ತಾಳ್ಮೆಯಿಂದ ಎದುರಿಸು ಎಂದು ಕಿವಿಮಾತು ಹೇಳಿದರು ಇದನ್ನು ನಾನು ಅಳವಡಿಸಿಕೊಂಡಿದ್ದೇನೆ. ಹೀಗಾಗಿ ಎರಡು ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದಿದ್ದಾರೆ.
ಅಂಡರ್ 19 ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಭಾರತದ ಪರ ಆಡಿರುವ ರವಿ ಬಿಷ್ನೋಯಿ ಅವರು ಆರ್ ಸಿಬಿ ಬಲಿಷ್ಠ ಬ್ಯಾಟಿಂಗ್ ಎದುರು 4 ಒವರ್ ಗಳಲ್ಲಿ 32 ರನ್ನಿತ್ತು 3 ವಿಕೆಟ್ ಗಳಿಸಿ ಗಮನ ಸೆಳೆದರು. 207ರನ್ ಬೃಹತ್ ಮೊತ್ತ ಬೆನ್ನು ಹತ್ತಿದ ಆರ್ ಸಿಬಿ 17 ಓವರ್ ಗಳಲ್ಲಿ 109ರನ್ ಗಳಿಗೆ ಸರ್ವಪತನ ಕಂಡಿತು.
ಕೆಎಲ್ ರಾಹುಲ್ ನಾಯಕತ್ವ ಹಾಗೂ ಕುಂಬ್ಳೆ ಅವರ ಮಾರ್ಗದರ್ಶನ ತಂಡಕ್ಕೆ ಉತ್ತಮ ಫಲಿತಾಂಶ ತರುತ್ತಿದೆ. ಎದುರಾಳಿ ಆಟಗಾರನಿಗೆ ತಕ್ಕಂತೆ ತಂತ್ರಗಾರಿಕೆ ರೂಪಿಸಲಾಗುತ್ತಿದೆ ಎಂದು 20 ವರ್ಷ ವಯಸ್ಸಿನ ಆಟಗಾರ ಹೇಳಿದರು.