
ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ನುಚ್ಚುನೂರುಗೊಳಿಸಿದ್ದ ಮಿಯಾಂದಾದ್
ಏಪ್ರಿಲ್ 18, 1986 ಆಸ್ಟ್ರೇಲಿಯಾ-ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯ. ಮೊದಲು ಬ್ಯಾಟ್ ಮಾಡಿದ್ದ ಭಾರತ 245 ರನ್ ಪೇರಿಸಿತ್ತು. ಸುನಿಲ್ ಗವಾಸ್ಕರ್ 94, ಕೃಷ್ಣಮಾಚಾರಿ ಶ್ರೀಕಾಂತ್ 75 ರನ್ ಹೊಡೆದಿದ್ದರು. ಪಾಕ್ ಪರ ವಸೀಂ ಅಕ್ರಂ ಮೂರು ವಿಕೆಟ್ ಪಡೆದಿದ್ದರು. ಭಾರತದ ಮೊತ್ತ ಚೇಸ್ ಮಾಡಿದ ಪಾಕಿಸ್ತಾನಕ್ಕೆ ಕೊನೆಯ ಎಸೆತದಲ್ಲಿ ನಾಲ್ಕು ರನ್ ಬೇಕಿತ್ತು. ಚೇತನ್ ಶರ್ಮಾ ಬೌಲಿಂಗ್ ನಲ್ಲಿ ಜಾವೇದ್ ಮಿಯಾಂದಾದ್ ಸಿಕ್ಸ್ ಹೊಡೆಯುವ ಮೂಲಕ ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ನುಚ್ಚುನೂರುಗೊಳಿಸಿದ್ದರು.

ವಿ.ವಿ.ಎಸ್ ಲಕ್ಷ್ಮಣ್ ಅಭಿಪ್ರಾಯ
"ಶಾರ್ಜಾ ಮೈದಾನದಲ್ಲಿ ನಾನು ಹೆಚ್ಚಿನ ಪಂದ್ಯವನ್ನು ಆಡಲಿಲ್ಲ. 1998ರಲ್ಲಿ ನಾವು ಪ್ರಶಸ್ತಿ ಗೆದ್ದಿದ್ದಾಗ ಆ ತಂಡದ ಭಾಗವಾಗಿದ್ದೆ ಎನ್ನುವ ಖುಷಿಯಿದೆ. ಭಾರತದ ತಂಡಕ್ಕೆ ಪ್ರೇಕ್ಷಕರಿಂದ ಸಿಗುತ್ತಿದ್ದ ಬೆಂಬಲವನ್ನು ಮರೆಯಲು ಸಾಧ್ಯವಿಲ್ಲ. ಆದರೆ, ಪ್ರೇಕ್ಷಕರಿದ್ದರೇನೇ ಆಟಗಾರರಿಗೆ ಹುರುಪು ಸಿಗುತ್ತದೆ ಎನ್ನುವುದಕ್ಕೆ ನನ್ನ ಸಮರ್ಥನೆಯಿಲ್ಲ"ಎಂದು ವಿ.ವಿ.ಎಸ್ ಲಕ್ಷ್ಮಣ್ ಅಭಿಪ್ರಾಯ ಪಡುತ್ತಾರೆ.

ಶಾರ್ಜಾದಲ್ಲಿ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಕಮಾಲ್
ಶಾರ್ಜಾದಲ್ಲಿ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಒಂದು ಪಂದ್ಯವನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದನ್ನು ಕ್ರಿಕೆಟ್ ಪ್ರೇಮಿಗಳು ಇಂದಿಗೂ ಮರೆಯಲಾರರು. ಅದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೋಕೋ-ಕೋಲಾ ಕಪ್ ಫೈನಲ್ ಪಂದ್ಯ. ಮೊದಲು ಬ್ಯಾಟ್ ಮಾಡಿದ ಆಸೀಸ್ 272 ರನ್ ಹೊಡೆದಿತ್ತು. ಇದನ್ನು ಸಮರ್ಥವಾಗಿ ಬೆನ್ನಟ್ಟಿದ ಟೀಂ ಇಂಡಿಯಾ ಆರು ವಿಕೆಟ್ ನಿಂದ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಇದರಲ್ಲಿ ಸಚಿನ್ ಪಾಲು ಭರ್ಜರಿ 134 ರನ್. ಅದರಲ್ಲೂ ಪ್ರೇಕ್ಷಕರ ಗ್ಯಾಲರಿಗೆ ಸಚಿನ್ ಸಿಡಿಸಿದ ಮೂರು ಸಿಕ್ಸ್ ನೆನಪಿನಲ್ಲಿ ಉಳಿಯುವಂತದ್ದು.

ಮಾಜಿ ಆಸೀಸ್ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯ
"ಶಾರ್ಜಾದಲ್ಲಿ ಹಲವು ಪಂದ್ಯಗಳನ್ನು ನಾವು ಆಡಿದ್ದೇವೆ. ಅದರಲ್ಲಿ ಸಚಿನ್ ತಂಡೂಲ್ಕರ್ ಇನ್ನಿಂಗ್ಸ್ ಅನ್ನು ಮರೆಯಲು ಸಾಧ್ಯ. ಪಂದ್ಯ ಸೋತಿದ್ದಕ್ಕೆ ನೋವಿದೆ. ಇದೊಂದು ಒಳ್ಳೆಯ ಮೈದಾನ. ಪ್ರೇಕ್ಷಕರಿಲ್ಲದೇ ಪಂದ್ಯ ಆಡುತ್ತಿರುವುದರಿಂದ ಕೆಲವೊಂದು ಅನುಭವಗಳು ಆಟಗಾರರಿಗೆ ಆಗುವುದು ಸಹಜ. ಧೋನಿ-ಕೊಹ್ಲಿ ಮುಂತಾದ ಆಟಗಾರರಿಗೆ ಇದು ಮೊದಲ ಅನುಭವ" ಎಂದು ಮಾಜಿ ಆಸೀಸ್ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯ ಪಡುತ್ತಾರೆ.

ಮಾಜಿ ಕ್ರಿಕೆಟಿಗ ದಿಲೀಪ್ ವೆಂಗಸರ್ಕಾರ್
"ಪ್ರೇಕ್ಷಕರಿಲ್ಲದೇ ಪಂದ್ಯ ಆಡುವುದು ಊಹಿಸಲೂ ಕಷ್ಟ, ಯಾಕೆಂದರೆ ಕ್ರಿಕೆಟಿಗರಿಗೆ ಪ್ರೇಕ್ಷಕರೇ ಜೀವಾಳ. ಪ್ರೇಕ್ಷಕರಿಂದ ಆಟಗಾರರು ಇನ್ನಷ್ಟು ಹುರುಪನ್ನು ಪಡೆಯುತ್ತಾರೆ. ಈಗ, ಆಟಗಾರರು ಈ ಪರಿಸ್ಥಿತಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎನ್ನುವುದನ್ನು ಐಪಿಎಲ್ ನಿರ್ಧರಿಸುತ್ತದೆ"ಎಂದು ಮಾಜಿ ಕ್ರಿಕೆಟಿಗ ದಿಲೀಪ್ ವೆಂಗಸರ್ಕಾರ್ ಹೇಳುತ್ತಾರೆ.


Click it and Unblock the Notifications
