ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ತಂಡದ ಆರಂಭಿಕ ಆಟಗಾರ ಧವನ್ ಭರ್ಜರಿ ಬ್ಯಾಟಿಂಗ್ ನಡೆಸಿ ಡೆಲ್ಲಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ. ಫೈನಲ್ ಹಂತಕ್ಕೇರಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತಾ ಪ್ರದರ್ಶನ ನೀಡಿತು. ಅದರಲ್ಲೂ ಆರಂಭಿಕ ಜೋಡಿ ಮೊದಲ ವಿಕೆಟ್ಗೆ 86 ರನ್ಗಳ ಜೊತೆಯಾಟವನ್ನು ನೀಡಿ 189 ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾದರು.
ಡೆಲ್ಲಿ ಬ್ಯಾಟಿಂಗ್ ಸಂದರ್ಭದಲ್ಲಿ ಹೈಲೈಟ್ ಆಗಿದ್ದು ಶಿಖರ್ ಧವನ್ ಪ್ರದರ್ಶನ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಧವನ್ ಕಳೆದ ಕೆಲ ಪಂದ್ಯಗಳಲ್ಲಿ ಮತ್ತೆ ಕಳೆಗುಂದಿದಂತೆ ಕಂಡುಬಂದಿದ್ದರು. ಆದರೆ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಟೂರ್ನಿಯಲ್ಲಿ 6ನೇ ಅರ್ಧಶತಕ ಬಾರಿಸಿ ಮತ್ತೆ ಫಾರ್ಮ್ ಕಂಡುಕೊಂಡರು.
ಐಪಿಎಲ್ 2020: ಹೈದರಾಬಾದ್ ವಿರುದ್ಧ ಜಯಗಳಿಸಿ ಫೈನಲ್ಗೆ ಲಗ್ಗೆಯಿಟ್ಟ ಡೆಲ್ಲಿ
ಕಳೆದ ಐದು ಪಂದ್ಯಗಳಲ್ಲಿ ಧವನ್ 3 ಶೂನ್ಯ ಸಂಪಾದನೆಯೊಂದಿಗೆ 6 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ ಹೈದರಾಬಾದ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಧವನ್ ಮತ್ತೆ ಫಾರ್ಮ್ ಕಂಡುಕೊಂಡರು, ಈ ಮೂಲಕ ಟೂರ್ನಿಯಲ್ಲಿ 600 ರನ್ಗಳನ್ನು ದಾಖಲಿಸಿದ ಆಟಗಾರನಾಗಿದ್ದಾರೆ.
ಆದರೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಈ ಅದ್ಭುತ ಪ್ರದರ್ಶನವನ್ನು ಮೆಚ್ಚಿಕೊಳ್ಳುತ್ತಲೇ ಧವನ್ ಕಾಲೆಳೆದಿದ್ದಾರೆ. ಶಿಖರ್ ಧವನ್ ಎಲ್ಬಿಡಬ್ಲ್ಯೂಗೆ ಬಲಿಯಾದ ತಕ್ಷಣವೇ ಕ್ಷಣವೂ ಯೋಚಿಸದೆ ಕ್ರಿಸ್ ಬಿಟ್ಟುಹೊರನಡೆದಿದ್ದರು. ಈ ಸಂದರ್ಭದಲ್ಲಿ ಧವನ್ ಡಿಆರ್ಎಸ್ ಪಡೆಯಬಹುದು ಎಂದುಕೊಂಡಿದ್ದ ಎಲ್ಲರೂ ಅಚ್ಚರಿ ಪಟ್ಟಿದ್ದರು. ಇದೇ ವಿಚಾರಕ್ಕೆ ಯುವಿ ತಮಾಷೆ ಮಾಡಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಮಡದ ಬೌಲರ್ಗಳು ಅಂತಿಮ ಎರಡು ಓವರ್ಗಳಲ್ಲಿ ರನ್ ನಿಯಂತ್ರಣ ಮಾಡಿ ನಡೆಸಿದ ಬೌಲಿಂಗ್ ದಾಳಿಯನ್ನು ಮೊದಲಿಗೆ ಯುವರಾಜ್ ಸಿಂಗ್ ಕೊಂಡಾಡಿದ್ದಾರೆ. ಬಳಿಕ ಧವನ್ ಬ್ಯಾಟಿಂಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ "ಯಾಕೆ ಡಿಆರ್ಎಸ್ ತೆಗೆದುಕೊಂಡಿಲ್ಲ ಸೋದರ? ಎಂದಿನಂತೆ ನೀನು ಮರೆತಿರಬೇಕು" ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ.