ಸೋಲಿಗೆ ಕಾರಣ
ಪಂದ್ಯದ ಮುಕ್ತಾಯದ ನಂತರ ಸೋಲಿನ ಬಗ್ಗೆ ಮಾತನಾಡಿದ ರಿಕಿ ಪಾಂಟಿಂಗ್ ಹಿನ್ನಡೆಗೆ ಕಾರಣವಾದ ಒಂದು ಅಂಶವನ್ನು ಒತ್ತಿ ಹೇಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಅನುಭವಿ ಆರ್ ಅಶ್ವಿನ್ ಅವರನ್ನು ಸಂಪೂರ್ಣವಾಗಿ ಬಳಸಿಕೊಳ್ಳದಿರುವುದು ಕಾರಣವಾಗಿರಬಹುದು ಎಂದಿದ್ದಾರೆ.
ಫಲಿತಾಂಶ ಬದಲಿಸಬಹುದಿತ್ತು
ಆರ್ ಅಶ್ವಿನ್ ರಾಜಸ್ಥಾನ್ ವಿರುದ್ಧದ ಬೌಲಿಂಗ್ ಸಂದರ್ಭದಲ್ಲಿ ಕೇವಲ 3 ಓವರ್ಗಳನ್ನು ಮಾತ್ರವೇ ಎಸೆದಿದ್ದರು. ಇದರಲ್ಲಿ ಅಶ್ವಿನ್ ಕೇವಲ 14 ರನ್ ಮಾತ್ರವೇ ನೀಡಿದ್ದರು. ಇದರಲ್ಲಿ ಅಶ್ವಿನ್ ಒಂದೇ ಒಂದು ಬೌಂಡರಿಯನ್ನು ಕೂಡ ನೀಡಿರಲಿಲ್ಲ. ಆರ್ ಅಶ್ವಿನ್ ನಾಲ್ಕು ಓವರ್ಗಳ ತಮ್ಮ ಕೋಟಾವನ್ನು ಪೂರ್ಣಗೊಳಿಸಿದ್ದರೆ ಪಂದ್ಯದ ಫಲಿತಾಂಶ ಬದಲಾಗುವ ಸಾಧ್ಯತೆಯಿತ್ತು ಎಂಬ ಅಭಿಪ್ರಾಯವನ್ನು ಪಾಂಟಿಂಗ್ ವ್ಯಕ್ತಡಿಸಿದ್ದಾರೆ.
ತಂಡದ ಜೊತೆ ಚರ್ಚಿಸುತ್ತೇನೆ
ಆರ್ ಅಶ್ವಿನ್ ತಮ್ಮ 3ನೇ ಓವರ್ಅನ್ನು ಅಂತ್ಯಗೊಳಿಸಿದಾಗ ರಾಜಸ್ಥಾನ್ ರಾಯಲ್ಸ್ಗೆ 54 ಎಸೆತಗಳಲ್ಲಿ 92 ರನ್ಗಳ ಅವಶ್ಯಕತೆಯಿತ್ತು. "ಆತ ಸುಂದರವಾಗಿ ಬೌಲಿಂಗ್ ಮಾಡಿದ್ದರು. 3 ಓವರ್ಗಳಲ್ಲಿ ವಿಕೆಟ್ ಪಡೆಯದೆ 14 ರನ್ ನೀಡಿದ್ದರು. ಮೊದಲ ಪಂದ್ಯದಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ ಸಾಕಷ್ಟು ಶ್ರಮ ಪಟ್ಟು ಆಟಕ್ಕೆ ಹೊಂದಿಕೊಂಡಿದ್ದರು. ಇಂದಿನ ಪಂದ್ಯದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಬಹುಶಃ ಈ ವಿಚಾರದಲ್ಲಿ ನಮ್ಮ ತಂಡ ತಪ್ಪೆಸಗಿದಂತಿದೆ. ಇದನ್ನು ತಂಡದ ಜೊತೆಗೆ ಮಾತನಾಡುವ ಅವಕಾಶ ದೊರೆತಾಗ ನಾನು ಚರ್ಚಿಸಲಿದ್ದೇನೆ" ಎಂದು ಪಾಂಟಿಂಗ್ ಹೇಳಿಕೊಂಡಿದ್ದಾರೆ.
ಮಾರಿಸ್ಗೆ ಸುಲಭದ ಎಸೆತಗಳು
ಇನ್ನು ಇದೇ ಸಂದರ್ಭದಲ್ಲಿ ಪಾಂಟಿಂಗ್ ಕ್ರಿಸ್ ಮಾರಿಸ್ ಅವರಿಗೆ ಸುಲಭದ ಎಸೆತಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಲಾಯಿತು ಎಂದಿದ್ದಾರೆ. ದೊಡ್ಡ ಹೊಡೆತಗಳನ್ನು ಬಾರಿಸಬಲ್ಲ ಸಾಮರ್ಥ್ಯ ಹೊಂದಿರುವ ಮಾರಿಸ್ಗೆ ನಮ್ಮ ಯೋಜನೆಯ ಪ್ರಕಾರ ಬೌಲಿಂಗ್ ದಾಳಿ ನಡೆಸಲಿಲ್ಲ ಎಂದಿದ್ದಾರೆ ಪಾಂಟಿಂಗ್. ಕ್ರಿಸ್ ಮಾರಿಸ್ 18 ಎಸೆತಗಳನ್ನು ಎದುರಿಸಿ 4 ಸಿಕ್ಸರ್ಗಳ ಸಹಿತ 36 ರನ್ ಗಳಿಸಿ ತಂಡಕ್ಕೆ ಗೆಲುವನ್ನು ನೀಡಿದರು.