14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 17ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 131 ರನ್ಗಳ ಸಾಧಾರಣ ಮೊತ್ತವನ್ನು ಗಳಿಸಿತು. 132 ರನ್ಗಳ ಗುರಿಯನ್ನು ಬೆನ್ನತ್ತಿದ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡದ ಪರ ಕೆ ಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಮತ್ತು ಕ್ರಿಸ್ ಗೇಲ್ ಜವಾಬ್ದಾರಿಯುತ ಆಟವನ್ನಾಡಿದರು.
ಪಂಜಾಬ್ ಕಿಂಗ್ಸ್ ತಂಡ 17.4 ಓವರ್ಗಳಲ್ಲಿ 132 ರನ್ಗಳ ಗುರಿಯನ್ನು ಮುಟ್ಟುವುದರ ಮೂಲಕ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಸದೆಬಡಿಯಿತು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ ಪ್ರಸ್ತುತ ಟೂರ್ನಿಯಲ್ಲಿ ಮೂರನೇ ಸೋಲನ್ನನುಭವಿಸಿತು. ಇದುವರೆಗೂ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ಪಂದ್ಯಗಳನ್ನಾಡಿದ್ದು 2 ಪಂದ್ಯಗಳಲ್ಲಿ ಗೆದ್ದು, 3 ಪಂದ್ಯಗಳಲ್ಲಿ ಸೋಲುಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲಿನ ಬಳಿಕ ಮಾತನಾಡಿದ ರೋಹಿತ್ ಶರ್ಮಾ ಸೋಲಿಗೆ ಕಾರಣವನ್ನು ತಿಳಿಸಿದರು.
ನಮ್ಮ ತಂಡದ ಬ್ಯಾಟಿಂಗ್ ಸಾಲಿನಲ್ಲಿ ಏನೋ ಕೊರತೆಯಿದೆ, 20 ಓವರ್ಗಳವರೆಗೆ ಬ್ಯಾಟಿಂಗ್ ಮಾಡಿದರೂ ಸಹ ನಮಗೆ ಬೇಕಾದಂತಹ ರನ್ ಮೊತ್ತವನ್ನು ಗಳಿಸಲಾಗುತ್ತಿಲ್ಲ, ಈ ಕೊರತೆಗೆ ಏನು ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದು ರೋಹಿತ್ ತಿಳಿಸಿದರು. ಪಂಜಾಬ್ ಕಿಂಗ್ಸ್ ತಂಡ ಕೂಡ 9 ವಿಕೆಟ್ಗಳು ಕೈನಲ್ಲಿದ್ದರೂ ಯಾವ ರೀತಿ ಬ್ಯಾಟಿಂಗ್ ಮಾಡಿದರು ಎಂಬುದನ್ನು ನೀವು ನೋಡಿದ್ದೀರಿ, ನಾವು ಕಳೆದುಕೊಂಡ ವಿಕೆಟ್ಗೆ 150-160 ರನ್ ಗಳಿಸಿದರೂ ಸಾಕು ಪಂದ್ಯವನ್ನು ಗೆಲ್ಲಬಹುದು. ಇದೇ ತಪ್ಪನ್ನು ನಾವು ಕಳೆದ ಎರಡೂ ಪಂದ್ಯಗಳಲ್ಲಿ ಮಾಡಿದೆವು,ಈ ಹಿಂದೆ ಪವರ್ಪ್ಲೇನಲ್ಲಿ ಉತ್ತಮ ಆಟವನ್ನು ಆಡುತ್ತಿದ್ದೆವು ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅದರಲ್ಲಿಯೂ ವಿಫಲರಾದೆವು ಎಂದು ತಮ್ಮ ಬ್ಯಾಟಿಂಗ್ ಸಾಲಿನಲ್ಲಿರುವ ಕೊರತೆಯನ್ನು ರೋಹಿತ್ ಶರ್ಮಾ ಹೊರಹಾಕಿದರು.