
ಕಳೆದ 2-3 ಐಪಿಎಲ್ನಲ್ಲಿ ಸ್ಥಿರವಾಗಿ ಪ್ರದರ್ಶನ ನಿಡಿ ಮಿಂಚುಹರಿಸಿದ್ದ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಈ ಬಾರಿಯ ಐಪಿಎಲ್ನಲ್ಲಿ ಭಾರೀ ವೈಫಲ್ಯವನ್ನು ಅನುಭವಿಸಿದ್ದಾರೆ. ಅದರಲ್ಲೂ ಇಶಾನ್ ಕಿಶನ್ ಆಡುವ ಬಳಗದಿಂದಲೇ ಹೊರ ಬಿದ್ದು ನಿರಾಸೆ ಅನುಭವಿಸಿದ್ದಾರೆ. ಆದರೆ ಈ ಇಬ್ಬರು ಆಟಗಾರರು ಕೂಡ ಈ ಬಾರಿಯ ಟಿ20 ವಿಶ್ವಕಪ್ನ ತಂಡದಲ್ಲಿ ಸ್ಥಾನವನ್ನು ಪಡೆಕೊಂಡಿರುವ ಕಾರಣ ಟೀಮ್ ಇಂಡಿಯಾದ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಮಧ್ಯೆ ಈ ಇಬ್ಬರು ಆಟಗಾರರ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಟು ಮಾತುಗಳಿಂದ ತಿವಿದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ಮನ್ಗಳಾದ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಐಪಿಎಲ್ 2021ರ ಆವೃತ್ತಿಯ ಎರಡನೇ ಚರಣದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನಿಡಿರುವ ವಿಚಾರವಾಗಿ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ಈ ಇಬ್ಬರು ಆಟಗಾರರು ಕೂಡ ಟೀಮ್ ಇಂಡಿಯಾದದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಕಾರಣದಿಂದಾಗಿ ನಿರಾಳರಾದಂತೆ ಕಂಡು ಬರುತ್ತಿದೆ. ಇಬ್ಬರಲ್ಲಿಯೂ ಈ ಹಿಂದೆಯಿಂದ ಆ ರನ್ ದಾಹ ಕಾಣಿಸುತ್ತಿಲ್ಲ ಎಂದಿದ್ದಾರೆ ಸುನಿಲ್ ಗವಾಸ್ಕರ್.
ಈ ಬಾರಿಯ ಐಪಿಎಲ್ನ ಯುಎಇ ಚರಣದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ ಒಂದು ಬಾರಿ ಮಾತ್ರವೇ ಎರಡಂಕಿಯನ್ನು ತಲುಪಿದ್ದಾರೆ. ಸೂರ್ಯಕುಮಾರ್ ಯಾದವ್ ಕಳೆದ ಐದು ಪಂದ್ಯಗಳಲ್ಲಿ ಗಳಿಸಿದ ರನ್ ಹೀಗಿದೆ; 3, 5, 8, 0 ಮತ್ತು 33. ಮತ್ತೊಂದೆಡೆ ಯುವ ಬ್ಯಾಟ್ಸ್ಮನ್ ಇಶಾನ್ ಕಿಶನ್ ಸತತ ಮೂರು ವೈಫಲ್ಯಗಳನ್ನು ಕಂಡ ಬಳಿಕ ಆಡುವ ಬಳಗದಿಮದ ಹೊರಬಿದ್ದಿದ್ದಾರೆ. ಆಡಿದ ಅಂತಿಮ ಮೂರು ಇನ್ನಿಂಗ್ಸ್ನಲ್ಲಿ ಇಶಾನ್ ಕಿಶನ್ 11, 14 ಹಾಗೂ 9 ರನ್ಗಳನ್ನು ಮಾತ್ರವೇ ಗಳಿಸಲು ಶಕ್ತರಾಗಿದ್ದರು. ಇಶಾನ್ ಕಿಶನ್ ಬದಲಿಗೆ ಸೌರಬ್ ತಿವಾರಿ ಮುಂಬೈ ಇಂಡಿಯನ್ಸ್ ತಂಡದ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಸುನಿಲ್ ಗವಾಸ್ಕರ್ ಈ ಬಗ್ಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ. "ಟೀಮ್ ಇಂಡಿಯಾದ ಕ್ಯಾಪ್ ಪಡೆದುಕೊಂಡ ನಂತರ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ನಿರಾಳರಾದಂತೆ ನನಗೆ ಭಾಸವಾಗುತ್ತಿದ್ದಾರೆ. ಅವರು ಹಾಗಿಲ್ಲದಿರಬಹುದು, ಆದರೆ ಅವರಾಡುತ್ತಿರುವ ಕೆಲ ದೊಡ್ಡ ಹೊಡೆತಗಳು ಇಂಡಿಯಾದ ಆಟಗಾರರು ಎಂಬಂತೆ ವ್ಯಕ್ತಪಡಿಸಲು ಆಡುತ್ತಿರುವಂತೆ ಅನಿಸುತ್ತಿದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.
"ಕೆಲ ಸಂದರ್ಭಗಳಲ್ಲಿ ನೀವು ಕ್ರೀಸ್ನಲ್ಲಿ ನೆಲ ಕಚ್ಚಲು ಕೆಲ ಸಮಯಗಳನ್ನು ನೀಡಬೇಕಾಗುತ್ತದೆ. ಅದಾದ ಬಳಿಕ ನೀವು ಸರಿಯಾದ ಶಾಟ್ ಸೆಲೆಕ್ಷನ್ ಮಾಡಲು ಸಾಧ್ಯವಾಗುತ್ತದೆ. ಈ ಇಬ್ಬರು ಆಟಗಾರರಲ್ಲಿಯೂ ಅದು ಈ ಬಾರಿ ಕಾಣಿಸುತ್ತಿಲ್ಲ. ಅವರ ಹೊಡೆತದ ಆಯ್ಕೆಗಳು ತಪ್ಪಾಗುತ್ತಿರುವ ಕಾರಣದಿಮದಾಗಿಯೇ ಈ ಇಬ್ಬರು ಆಟಗಾರರು ಕೂಡ ಅಲ್ಪ ಮೊತ್ತಕ್ಕೆ ಔಟಾಗುತ್ತಿದ್ದಾರೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಇನ್ನು ಇದೇ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೆ ಇರುವುದು ಮುಂಬೈ ಇಂಡಿಯನ್ಸ್ ತಂಡಕ್ಕಾದ ದೊಡ್ಡ ಹಿನ್ನಡೆ ಎಂದು ಅಭಿಪ್ರಾಯಪಟ್ಟಿದ್ದಾರೆ. "ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿರಿವುದು ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾತ್ರವಲ್ಲದೆ ಭಾರತ ತಂಡಕ್ಕೂ ಹಿನ್ನಡೆಯಾಗಿದೆ. ಯಾಕೆಂದರೆ ಆತನನ್ನು ಆಲ್ರೌಂಡರ್ ಎಂದು ಪರಿಗಳಿಸಿ ಆಯ್ಕೆ ಮಾಡಲಾಗಿರುತ್ತದೆ. 6 ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ನೀವು ಬೌಲಿಂಗ್ ಮಾಡಲು ಅಸಮರ್ಥರಾದರೆ ಅದು ನಾಯಕನಾದವನಿಗೆ ಹಿನ್ನಡೆಯಾಗುತ್ತದೆ. ಹಾಗಾಗಿ ಆತನ ಬದಲಿಗೆ ಆರು ಅಥವಾ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ಬೌಲಿಂಗ್ ಮಾಡುವ ಸಾಮರ್ಥ್ಯವಿರುವ ಬೇರೊಬ್ಬ ಆಟಗಾರನಿಗೆ ಅವಕಾಶ ನೀಡುವ ಅಗತ್ಯವಿದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಮುಂಬೈ ಇಂಡಿಯನ್ಸ್ ತಂಡ ಮಂಗಳವಾರ ಪಂಜಾಬ್ ಕಿಂಗ್ಸ ತಂಡದ ವಿರುದ್ಧ ಕಣಕ್ಕಿಳಿಯಲಿದ್ದು ಈ ಪಂದ್ಯದಲ್ಲಿ ಗೆದ್ದರೆ ಮಾತ್ರವೇ ಪ್ಲೇಆಫ್ಗೆ ಏರುವ ಸ್ಪರ್ಧೆಯಲ್ಲಿ ಮುಂದುವರಿಯಲಿದೆ. ಹೀಗಾಗಿ ಇಂದಿನ ಪಂದ್ಯ ಮುಂಬೈ ಇಂಡಿಯನ್ಸ್ ಪಾಲಿಗೆ ಬಹಳ ಮಹತ್ವದ್ದು.
ಮುಂಬೈ ಇಂಡಿಯನ್ಸ್ ಸಂಪೂರ್ಣ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಆಡಮ್ ಮಿಲ್ನೆ, ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅನುಕುಲ್ ರಾಯ್, ಅರ್ಜುನ್ ತೆಂಡುಲ್ಕರ್, ಕ್ರಿಸ್ ಲಿನ್, ಧವಳ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜೇಮ್ಸ್ ನೀಶಮ್, ಜಸ್ಪ್ರೀತ್ ಬೂಮ್ರಾ, ಜಯಂತ್ ಯಾದವ್, ಕಿರಾನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಮಾರ್ಕೊ ಜಾನ್ಸೆನ್, ಮೊಹ್ಸಿನ್ ಖಾನ್, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೌರಭ್ ತಿವಾರಿ, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೋಲ್ಟ್, ಯುಧ್ವೀರ್ ಸಿಂಗ್.