
ಪ್ರಶ್ನೆ ಕೇಳಿದ ಕೂಡ ನಕ್ಕ ಡಿಕೆ ಕೊಟ್ಟ ಉತ್ತರವಿದು
ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ಟ್ರೋಫಿ ಗೆಲ್ಲಲಾಗದೇ ಇರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಟ್ರೋಫಿ ಗೆಲ್ಲುತ್ತಾ ಎಂಬ ಪ್ರಶ್ನೆಯನ್ನು ಸಂದರ್ಶಕರು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಆರಂಭಕ್ಕೂ ಮುನ್ನ ದಿನೇಶ್ ಕಾರ್ತಿಕ್ಗೆ ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಕಾರ್ತಿಕ್ ಆರಂಭದಲ್ಲಿಯೇ ನಕ್ಕು, ಭವಿಷ್ಯದಲ್ಲಿ ತಂಡ ಟ್ರೋಫಿ ಗೆಲ್ಲುತ್ತಾ ಎಂಬುದನ್ನು ತಿಳಿಸಲು ನಾನು ಊಹೆಗಾರನಲ್ಲ ಎಂದಿದ್ದಾರೆ. ಈ ಮೂಲಕ ಟ್ರೋಫಿ ಗೆಲ್ಲುವ ಕುರಿತ ಪ್ರಶ್ನೆಗೆ ಉತ್ತರಿಸದೇ ದಿನೇಶ್ ಕಾರ್ತಿಕ್ ಆ ಪ್ರಶ್ನೆಯನ್ನು ತಳ್ಳಿಹಾಕಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿರುವ ದಿನೇಶ್ ಕಾರ್ತಿಕ್ ಪ್ರಸ್ತುತ ತಮ್ಮ ತಂಡ ಉತ್ತಮ ಹಂತದಲ್ಲಿದ್ದು, ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಮೊದಲ 4 ಪಂದ್ಯಗಳಲ್ಲಿ ಅಜೇಯನಾಗಿ ಉಳಿದಿದ್ದ ಕಾರ್ತಿಕ್
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 14 ಎಸೆತಗಳಿಗೆ 34 ರನ್ ಗಳಿಸಿರುವ ದಿನೇಶ್ ಕಾರ್ತಿಕ್ ಇದಕ್ಕೂ ಮುನ್ನ ಕಣಕ್ಕಿಳಿದಿದ್ದ ಮೊದಲ 4 ಪಂದ್ಯಗಳಲ್ಲಿ ಕ್ರಮವಾಗಿ ಅಜೇಯ 32 ರನ್, ಅಜೇಯ 14 ರನ್, ಅಜೇಯ 44 ರನ್ ಹಾಗೂ ಅಜೇಯ 7 ರನ್ ಕಲೆಹಾಕಿದ್ದರು. ಇನ್ನು ಈ ಬಾರಿಯ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಲವು ಬಾರಿ ಆಸರೆಯಾಗಿರುವ ದಿನೇಶ್ ಕಾರ್ತಿಕ್ 5 ಪಂದ್ಯಗಳನ್ನಾಡಿ 131 ರನ್ ಗಳಿಸಿದ್ದಾರೆ.

ಕಾರ್ತಿಕ್ ಆಟಕ್ಕೆ ಎಲ್ಲೆಡೆ ಮೆಚ್ಚುಗೆ
ಇನ್ನು ದಿನೇಶ್ ಕಾರ್ತಿಕ್ ಜವಾಬ್ದಾರಿಯುತ ಪ್ರದರ್ಶನಕ್ಕೆ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ದಿನೇಶ್ ಕಾರ್ತಿಕ್ ಸಾಲು ಸಾಲು ಉತ್ತಮ ಪ್ರದರ್ಶನ ನೀಡಿದ್ದು, ಟೀಮ್ ಇಂಡಿಯಾದಲ್ಲಿ ಅವರಿಗೆ ಸ್ಥಾನ ನೀಡಬಹುದು ಎಂದು ಫಾಫ್ ಡು ಪ್ಲೆಸಿಸ್ ಹೇಳಿಕೆ ನೀಡಿದ್ದರು. ಇನ್ನು ದಿನೇಶ್ ಕಾರ್ತಿಕ್ ಆಟಕ್ಕೆ ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪರಿಣಿತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದಿನೇಶ್ ಕಾರ್ತಿಕ್ ಅವರೇ ಆಪತ್ಬಾಂದವ ಎಂದು ಹೊಗಳಿದ್ದಾರೆ.


Click it and Unblock the Notifications
