ಈ ಬಾರಿ ಆರ್ಸಿಬಿ ಕಪ್ ಗೆಲ್ಲುತ್ತಾ ಎಂದು ಪ್ರಶ್ನೆ ಕೇಳಿದ ಕೂಡಲೇ ನಕ್ಕ ದಿನೇಶ್ ಕಾರ್ತಿಕ್ ಕೊಟ್ಟ ಉತ್ತರವಿದು!

ಸದ್ಯ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ನೂತನ ನಾಯಕ ಫಾಫ್ ಡು ಪ್ಲೆಸಿಸ್ ನಾಯಕತ್ವದಡಿಯಲ್ಲಿ ಕಣಕ್ಕಿಳಿದಿದ್ದು, ಮೊದಲ ಪಂದ್ಯದಲ್ಲಿ ಸೋತು ನಂತರ ನಡೆದ ಮೂರು ಪಂದ್ಯಗಳಲ್ಲಿ ಸಾಲು ಸಾಲು ಗೆಲುವನ್ನು ಕಂಡು ಹ್ಯಾಟ್ರಿಕ್ ಜಯ ಸಾಧಿಸಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್ ಪ್ರವೇಶಿಸಲಿರುವ ತಂಡ ಎಂಬ ಭರವಸೆಯನ್ನು ಮೂಡಿಸಿತ್ತು. ಹೀಗೆ ಹ್ಯಾಟ್ರಿಕ್ ಜಯ ಸಾಧಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ನಾಗಾಲೋಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಬ್ರೇಕ್ ಹಾಕಿದೆ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಮ್ಮ ಐದನೇ ಪಂದ್ಯದಲ್ಲಿ ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಕ್ರಿಕೆಟ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ರಾಬಿನ್ ಉತ್ತಪ್ಪ ಮತ್ತು ಶಿವಮ್ ದುಬೆ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 216 ರನ್ ಕಲೆಹಾಕಿ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 217 ರನ್ಗಳ ಗುರಿಯನ್ನು ನೀಡಿತು. ಹೀಗೆ ಈ ಬೃಹತ್ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಶಕ್ತವಾಯಿತು ಹಾಗೂ 23 ರನ್ಗಳ ಸೋಲನ್ನು ಅನುಭವಿಸಿತು.
ಇನ್ನು ಈ ಪಂದ್ಯದಲ್ಲಿಯೂ ಅಂತಿಮ ಹಂತದಲ್ಲಿ ಅಬ್ಬರಿಸಿದ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲುವು ತಂದುಕೊಡುವ ಭರವಸೆಯನ್ನು ಹುಟ್ಟುಹಾಕಿದ್ದರು. ಆದರೆ 14 ಎಸೆತಗಳಿಗೆ 34 ರನ್ ಗಳಿಸಿ ತಮ್ಮ ಅಬ್ಬರ ಮುಂದುವರೆಸಿದ ದಿನೇಶ್ ಕಾರ್ತಿಕ್ ಈ ಬಾರಿಯ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ವಿಕೆಟ್ ಒಪ್ಪಿಸಿದರು. ಹೀಗೆ ಟೂರ್ನಿಯಲ್ಲಿ ಸಾಲು ಸಾಲು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಸರೆಯಾಗಿರುವ ದಿನೇಶ್ ಕಾರ್ತಿಕ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿದ್ದು, ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುತ್ತಾ ಎಂಬ ಪ್ರಶ್ನೆಗೆ ಈ ಕೆಳಕಂಡಂತೆ ಉತ್ತರಿಸಿದ್ದಾರೆ.

ಪ್ರಶ್ನೆ ಕೇಳಿದ ಕೂಡ ನಕ್ಕ ಡಿಕೆ ಕೊಟ್ಟ ಉತ್ತರವಿದು
ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ಟ್ರೋಫಿ ಗೆಲ್ಲಲಾಗದೇ ಇರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಟ್ರೋಫಿ ಗೆಲ್ಲುತ್ತಾ ಎಂಬ ಪ್ರಶ್ನೆಯನ್ನು ಸಂದರ್ಶಕರು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಆರಂಭಕ್ಕೂ ಮುನ್ನ ದಿನೇಶ್ ಕಾರ್ತಿಕ್ಗೆ ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಕಾರ್ತಿಕ್ ಆರಂಭದಲ್ಲಿಯೇ ನಕ್ಕು, ಭವಿಷ್ಯದಲ್ಲಿ ತಂಡ ಟ್ರೋಫಿ ಗೆಲ್ಲುತ್ತಾ ಎಂಬುದನ್ನು ತಿಳಿಸಲು ನಾನು ಊಹೆಗಾರನಲ್ಲ ಎಂದಿದ್ದಾರೆ. ಈ ಮೂಲಕ ಟ್ರೋಫಿ ಗೆಲ್ಲುವ ಕುರಿತ ಪ್ರಶ್ನೆಗೆ ಉತ್ತರಿಸದೇ ದಿನೇಶ್ ಕಾರ್ತಿಕ್ ಆ ಪ್ರಶ್ನೆಯನ್ನು ತಳ್ಳಿಹಾಕಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿರುವ ದಿನೇಶ್ ಕಾರ್ತಿಕ್ ಪ್ರಸ್ತುತ ತಮ್ಮ ತಂಡ ಉತ್ತಮ ಹಂತದಲ್ಲಿದ್ದು, ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಮೊದಲ 4 ಪಂದ್ಯಗಳಲ್ಲಿ ಅಜೇಯನಾಗಿ ಉಳಿದಿದ್ದ ಕಾರ್ತಿಕ್
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 14 ಎಸೆತಗಳಿಗೆ 34 ರನ್ ಗಳಿಸಿರುವ ದಿನೇಶ್ ಕಾರ್ತಿಕ್ ಇದಕ್ಕೂ ಮುನ್ನ ಕಣಕ್ಕಿಳಿದಿದ್ದ ಮೊದಲ 4 ಪಂದ್ಯಗಳಲ್ಲಿ ಕ್ರಮವಾಗಿ ಅಜೇಯ 32 ರನ್, ಅಜೇಯ 14 ರನ್, ಅಜೇಯ 44 ರನ್ ಹಾಗೂ ಅಜೇಯ 7 ರನ್ ಕಲೆಹಾಕಿದ್ದರು. ಇನ್ನು ಈ ಬಾರಿಯ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಲವು ಬಾರಿ ಆಸರೆಯಾಗಿರುವ ದಿನೇಶ್ ಕಾರ್ತಿಕ್ 5 ಪಂದ್ಯಗಳನ್ನಾಡಿ 131 ರನ್ ಗಳಿಸಿದ್ದಾರೆ.

ಕಾರ್ತಿಕ್ ಆಟಕ್ಕೆ ಎಲ್ಲೆಡೆ ಮೆಚ್ಚುಗೆ
ಇನ್ನು ದಿನೇಶ್ ಕಾರ್ತಿಕ್ ಜವಾಬ್ದಾರಿಯುತ ಪ್ರದರ್ಶನಕ್ಕೆ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ದಿನೇಶ್ ಕಾರ್ತಿಕ್ ಸಾಲು ಸಾಲು ಉತ್ತಮ ಪ್ರದರ್ಶನ ನೀಡಿದ್ದು, ಟೀಮ್ ಇಂಡಿಯಾದಲ್ಲಿ ಅವರಿಗೆ ಸ್ಥಾನ ನೀಡಬಹುದು ಎಂದು ಫಾಫ್ ಡು ಪ್ಲೆಸಿಸ್ ಹೇಳಿಕೆ ನೀಡಿದ್ದರು. ಇನ್ನು ದಿನೇಶ್ ಕಾರ್ತಿಕ್ ಆಟಕ್ಕೆ ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪರಿಣಿತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದಿನೇಶ್ ಕಾರ್ತಿಕ್ ಅವರೇ ಆಪತ್ಬಾಂದವ ಎಂದು ಹೊಗಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications