
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ತಮ್ಮ ಹಿಂದಿನ ಪ್ರದರ್ಶನ ನೀಡಲು ವಿಫಲವಾಗುತ್ತಿದ್ದಾರೆ. ಸತತ ವೈಫಲ್ಯವನ್ನು ಅನುಭವಿಸಿದ ಬಳಿಕ ವಿರಾಟ್ ಕೊಹ್ಲಿ ಎರಡು ಪಂದ್ಯಗಳಲ್ಲಿ ಉತ್ತಮ ರನ್ಗಳಿಸಲು ಸಫಲವಾದರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದ ವಿರಾಟ್ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ 30 ರನ್ಗಳಿಸಿದ್ದಾರೆ.
ಈ ಹಿಂದಿನ ಎರಡು ಪಂದ್ಯಗಳಲ್ಲಿನ ಪ್ರದರ್ಶನವನ್ನು ಗಮನಿಸಿದರೆ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ಗೆ ಮರಳಿರುವುದು ಭಾಸವಾಗುತ್ತದೆ. ಹಾಗಿದ್ದರೂ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಇಯಾನ್ ಬಿಷಪ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಚಾರವಾಗಿ ಕಳವಳ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಈ ಬಾರಿಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿದ್ದು ವಿಭಿನ್ನ ರೀತಿಯ ಬೌಲರ್ಗಳಿಗೆ ವಿಕೆಟ್ ಒಪ್ಪಿಸುತ್ತಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಈ ಟೂರ್ನಿಯಲ್ಲಿ ಈವರೆಗೆ 175 ರನ್ಗಳನ್ನು ಮಾತ್ರವೇ ಗಳಿಸಿದ್ದು 111.09ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇದು ಇದು ಕನಿಷ್ಠ 150 ರನ್ಗಳಿಸಿದ ಬ್ಯಾಟರ್ಗಳ ಪೈಕಿ 3ನೇ ಕನಿಷ್ಠ ಸ್ಟ್ರೈಲ್ರೇಟ್ ಆಗಿದೆ. ಇದೇ ಕಾರಣಕ್ಕೆ ವಿಂಡೀಸ್ ಮಾಜಿ ವೇಗಿ ಇಯಾನ್ ಬಿಷಪ್ ಕಳವಳ ವ್ಯಕ್ತಪಡಿಸಿದ್ದಾರೆ.
"ಈ ಹಿಂದೆ ವಿರಾಟ್ ಕೊಹ್ಲಿ 10-15 ರನ್ಗಳನ್ನು ಗಳಿಸಲು ಎಸೆತಕ್ಕೊಂದರಂತೆ ರನ್ ಗಳಿಸುತ್ತಿರಲಿಲ್ಲ. ಆದರೆ ಈಗ ಅವರು ಎಸೆತಕ್ಕೊಂದರಂತೆ ರನ್ಗಳಿಸುತ್ತಿದ್ದಾರೆ. ಅವರು ಎಸೆತಗಳಿಗಿಂತ ಹೆಚ್ಚು ರನ್ಗಳನ್ನು ಗಳಿಸುತ್ತಿಲ್ಲ. ಅಲ್ಲದೆ ಹಿಂದಿನಂತೆ ಹೆಚ್ಚು ತೀವ್ರತೆಯೂ ಕಾಣಿಸುತ್ತಿಲ್ಲ. ಆತ ವೇಗದ ಬೌಲರ್ನ ಒಮದು ಎಸೆತವನ್ನು ಸಿಕ್ಸರ್ಗೆ ಅಟ್ಟಿದ್ದಾರೆ. ಈ ಸಂದರ್ಭದಲ್ಲಿ ಮಾತ್ರವೇ ಎಸೆತಗಳಿಗಿಂತ ಹೆಚ್ಚಿನ ರನ್ಗಳಿಸಿದ್ದರು. ಆದರೆ ಮತ್ತೆ ಅವರು ಹಿಂದುಳಿದರು" ಎಂದಿದ್ದಾರೆ ಇಯಾನ್ ಬಿಷಪ್.
"ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ಈ ರೀತಿ ನಾವು ನೋಡುತ್ತಿರುವುದು ಈ ಆವೃತ್ತಿಯಲ್ಲಿ ಮಾತ್ರವಲ್ಲ. ಕಳೆದ ಆವೃತ್ತಿಯಲ್ಲಿಯೂ ಹೀಗಾಗಿತ್ತು. ಅಲ್ಲದೆ ಕೆಲ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿಯೂ ಅವರು ಹೀಗೆಯೇ ಎಡವಿದ್ದರು. ಅವರು ಸ್ಪೋಟಕ ಆಟವವನ್ನು ಪ್ರದರ್ಶಿಸಬಹುದು. ಆದರೆ ಇಂದು ಅವರಿಂದ ಅದು ಸಾಧ್ಯವಾಗಲಿಲ್ಲ. ಅವರು ಮತ್ತೊಮ್ಮೆ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದಾರೆ. ಹಾಗಾಗಿ ನಾನು ಅವರ ಬ್ಯಾಟಿಂಗ್ ಬಗ್ಗೆ ಕಳವಳಗೊಂಡಿದ್ದೇನೆ" ಎಂದಿದ್ದಾರೆ ಇಯಾನ್ ಬಿಷಪ್. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 16 ಡಾಟ್ ಬಾಲ್ಗಳನ್ನು ಆಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲ್ಲಾ ವಿಭಾಗದಲ್ಲಿಯೂ ಸಿಎಸ್ಕೆ ತಂಡಕ್ಕಿಂತ ಮೇಲುಗೈ ಸಾಧಿಸಿತು. ಮೊದಲಿಗೆ ಬ್ಯಾಟಿಂಗ್ನಲ್ಲಿ 174 ರನ್ಗಳ ಸವಾಲಿನ ಗುರಿ ನೀಡಿದ ಆರ್ಸಿಬಿ ನಂತರ ಬೌಲಿಂಗ್ನಲ್ಲಿಯೂ ಸಂಪೂರ್ಣ ಮೇಲುಗೈ ಸಾಧಿಸಿತು. ಬ್ಯಾಟಿಂಗ್ ವಿಭಾಗದಲ್ಲಿ ಲೋಮ್ರೋರ್, ಡುಪ್ಲೆಸಿಸ್, ದಿನೇಶ್ ಕಾರ್ತಿಕ್ ಅಮೂಲ್ಯ ಕೊಡುಗೆ ನೀಡಿದರೆ ಬೌಲಿಂಗ್ನಲ್ಲಿ ಹರ್ಷಲ್ ಪಟೇಲ್, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಹೇಜಲ್ವುಡ್ ಅವರಿಂದ ಅದ್ಭುತ ಪ್ರದರ್ಶನ ಬಂದಿತು. ಹೀಗಾಗಿ ಆರ್ಸಿಬಿ ಈ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.