
ಮುಂಬರುವ ಐಪಿಎಲ್ಗೂ ಮುನ್ನ ಮಹಾ ಹರಾಜು ಪ್ರಕ್ರಿಯೆ ನಡೆಯಲಿರುವ ಕಾರಣ ಮುಂದಿನ ಆವೃತ್ತಿಯಲ್ಲಿ ಎಲ್ಲಾ ತಂಡಗಳು ಕೂಡ ಬಹುತೇಕ ಬದಲಾಗಿರುತ್ತದೆ. ಅದರಲ್ಲೂ ಟೂರ್ನಿಗೆ ಮತ್ತೆರಡು ತಂಡಗಳು ಸೇರ್ಪಡೆಯಾಗುತ್ತಿರುವುದು ಕುತೂಹಲ ಹೆಚ್ಚಿಸಿದೆ. ಈ ಮಧ್ಯೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮುಂದಿನ ಆವೃತ್ತಿಗೆ ತಂಡದಲ್ಲಿ ಉಳಿಯುವ ಸಾಧ್ಯತೆ ಬಹುತೇಕ ಇಲ್ಲ. ಈ ಬಗ್ಗೆ ಫ್ರಾಂಚೈಸಿ ಅಥವಾ ಕೆಎಲ್ ರಾಹುಲ್ ಕಡೆಯಿಂದ ಅಧಿಕೃತ ಮಾಹಿತಿಗಳು ಈವರೆಗೆ ಇಲ್ಲವಾದರೂ ನಡೆಯುತ್ತಿರುವ ಬೆಳವಣಿಗೆ ಇದಕ್ಕೆ ಪೂರಕವಾಗಿದೆ.
ಈ ಮಧ್ಯೆ ಪಂಜಾಬ್ ಕಿಂಗ್ಸ್ ತಂಡ ಇಂದು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಸಾಕಷ್ಟು ಕುತೂಹಲ ಮೂಡಿಸಿದೆ. ತಂಡದ ಬ್ಯಾಟಿಂಗ್ ಆಧಾರಸ್ಥಂಭವಾಗಿರುವ ಮಯಾಂಕ್ ಅಗರ್ವಾಲ್ ಅವರ ವಿಡಿಯೋವನ್ನು ಪಂಜಾಬ್ ಕಿಂಗ್ಸ್ ಹಂಚಿಕೊಂಡಿದೆ. ಈ ಮೂಲಕ ಮುಂದಿನ ಮಹಾ ಹರಾಜಿಗೂ ಮುನ್ನ ಫ್ರಾಂಚೈಸಿ ಪ್ರಮುಖ ಸುಳಿವೊಂದನ್ನು ಬಿಟ್ಟುಕೊಟ್ಟಿದೆ.
ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತೊರೆಯುವುದು ಖಚಿತ: ಮಹಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೂ ತಮ್ಮ ತಂಡದಲ್ಲಿರುವ ಗರಿಷ್ಠ ನಾಲ್ಕು ಆಟಗಾರರನ್ನು ತಂಡದಲ್ಲಿಯೇ ಉಳಿಸಿಕೊಳ್ಳುವ ರೀಟೆನ್ಶನ್ ಅಧಿಕಾರವನ್ನು ನೀಡಲಾಗಿದೆ. ಕೆಲ ನಿಯಮಗಳೊಂದಿಗೆ ಗರಿಷ್ಠ ನಾಲ್ಕು ಆಟಗಾರರನ್ನು ಈ ರೀಟೆನ್ಶನ್ ಬಳಸಿಕೊಂಡು ತಂಡದಲ್ಲಿಯೇ ಉಳಿಸಿಕೊಳ್ಳಬಹುದು. ಈ ಅಧಿಕಾರವನ್ನು ಬಳಸಿಕೊಂಡು ಎಲ್ಲಾ ತಂಡಗಳು ಕೂಡ ತಂಡದ ಪ್ರಮುಖ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳುತ್ತಾರೆ. ಆದರೆ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ತಂಡದಲ್ಲಿ ಮುಂದುವರಿಯಲು ಬಯಸಿಲ್ಲ ಎನ್ನಲಾಗಿದೆ. ಹೀಗಾಗಿ ಅವರನ್ನು ಫ್ರಾಂಚೈಸಿ ರೀಟೆನ್ಶನ್ ಮಾಡಿಕೊಳ್ಳುವ ಸಾಧ್ಯತೆಯಿಲ್ಲ. ಇತ್ತೀಚಿಗಿನ ಸಾಮಾಜಿಕ ಜಾಲತಾಣದ ಪೋಸ್ಟ್ಗಳಲ್ಲಿಯೂ ಕೆಎಲ್ ರಾಹುಲ್ ಅವರನ್ನು ಉಲ್ಲೇಖಿಸದೇ ಇರುವುದು ಕೂಡ ಗಮನಾರ್ಹ ಸಂಗತಿಯಾಗಿದೆ.
ಮಯಾಂಕ್ ಅಗರ್ವಾಲ್ ವಿಡಿಯೋ ಹಂಚಿಕೊಂಡ ಪಂಜಾಬ್ ಕಿಂಗ್ಸ್: ಈ ಮಧ್ಯೆ ಇಂದು ಪಂಜಾಬ್ ಕಿಂಗ್ಸ ಫ್ರಾಂಚೈಸಿ ಮಯಾಂಕ್ ಅಗರ್ವಾಲ್ ಅವರ ವಿಡಿವೊಂದನ್ನು ಹಂಚಿಕೊಂಡಿದೆ. ಕಳೆದ ಕೆಲ ಆವೃತ್ತಿಗಳಿಮದ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಆಟಗಾರನಾಗಿರುವ ಮಯಾಂಕ್ ನಿರಂತರವಾಗಿ ಅತ್ಯುತ್ತಮ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಮಯಾಂಕ್ ಅವರ ವಿಡಿಯೋ ಹಂಚಿಕೊಂಡಿರುವ ಫ್ರಾಂಚೈಸಿ "ಮಯಾಂಕ್ ಅಗರ್ವಾಲ್ ಪರವಾಗಿ ಸದ್ದು ಮಾಡಿ" ಎಂದು ಬರೆದುಕೊಂಡಿದೆ. ಇದು ಕುತೂಹಲ ಮೂಡಿಸಿದೆ.
ನಾಯಕನಾಗಲಿದ್ದಾರಾ ಮಯಾಂಕ್: ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತೊರೆಯುವ ಕಾರಣದಿಂದಾಗಿ ತಂಡದ ಮುಂದಿನ ನಾಯಕ ಯಾರಾಗಲಿದ್ದಾರೆ ಎಂಬ ಕುತೂಲ ಮೂಡಿಸಿದೆ. ಇದಕ್ಕೆ ಮಯಾಂಕ್ ಅಗರ್ವಾಲ್ ಅವರು ಸಮರ್ಥ ಆಟಗಾರನೂ ಆಗಿದ್ದಾರೆ. ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತನ್ನ ಟ್ವಿಟ್ಟರ್ ಪೋಸ್ಟ್ನಲ್ಲಿ ಇದೇ ಸುಳಿವನ್ನು ನೀಡುತ್ತಿದೆಯಾ ಎಂಬ ಕುತೂಹಲ ಅಭಿಮಾನಿಗಳದ್ದಾಗಿದೆ. ಪಂಜಾಬ್ ಕಿಂಗ್ಸ್ ತಂಡದ ಕೆಲ ಅಭಿಮಾನಿಗಳು ಮಯಾಂಕ್ ಅಗರ್ವಾಲ್ ಅವರನ್ನು ಮುಂದಿನ ನಾಯಕನನ್ನಾಗಿ ಮಾಡಿ ಎಂಬ ಅಭಿಪ್ರಾಯವನ್ನು ವ್ಯಕ್ತೊಡಿಸುತ್ತಿದ್ದಾರೆ.