
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಹೊಸ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದೆ. ಈ ಹಿಂದಿನ ಆವೃತ್ತಿಯಲ್ಲಿ ನಾಯಕನಾಗಿದ್ದ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡದಿಂದ ಹೊರಬಿದ್ದಿದ್ದು ಟೂರ್ನಿಗೆ ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ಸೂಪರ್ ಜೆಂಟ್ಸ್ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ಮಯಾಂಕ್ ಅಗರ್ವಾಲ್ ಹೆಗಲೇರಿದೆ. ಅನಿಲ್ ಕುಂಬ್ಳೆ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಆಗಿ ಮುಂದುವರಿದಿದ್ದಾರೆ. ಆದರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕನಿಗೆ ಈ ಬಾರಿಯ ಹಾದಿ ಸುಗಮವಾಗಿಲ್ಲ ಎಂದು ಎಚ್ಚರಿಸಿದ್ದಾರೆ.
ಕಳೆದ 14 ಆವೃತ್ತಿಗಳಲ್ಲಿ ಮೊಹಾಲಿ ಮೂಲದ ಪ್ರಾಂಚೈಸಿ ಕೇವಲ ಎರಡು ಬಾರಿ ಮಾತ್ರವೇ ಫ್ಲೇಆಫ್ಗೆ ಪ್ರವೇಶ ಪಡೆದುಕೊಂಡಿದೆ. 7ನೇ ಆವೃತ್ತಿಯಲ್ಲಿ ರನ್ನರ್ ಅಪ್ ತಂಡವಾಗಿ ಹೊರಹೊಮ್ಮಿತ್ತು. ಇದನ್ನು ಹೊರತುಪಡಿಸಿ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿಕೊಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಾಯಕನಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುವುದು ಮಯಾಂಕ್ ಅಗರ್ವಾಲ್ ಪಾಲಿಗೆ ಎಷ್ಟು ಕಠಿಣ ಎಂಬ ಅಂಶವನ್ನು ವಿವರಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್ ಪಂಜಾಬ್ ಕಿಂಗ್ಸ್ ತನ್ನಲ್ಲಿರುವ ಪ್ರತಿಭಾವಂತ ಆಟಗಾರರನ್ನು ಬಳಸಿಕೊಳ್ಳಲು ಹೆಣಗಾಡುತ್ತಿರುವ ಕಾರಣ ನಾಯಕತ್ವದ ಜವಾಬ್ಧಾರಿ ಬಹಳ ಕಠಿಣ ಎಂದಿದ್ದಾರೆ ಸುನಿಲ್ ಗವಾಸ್ಕರ್.
"ಇದು ಸುಲಭದ ಕೆಲಸವಲ್ಲ. ಅವರು ಒಂದು ತಂಡವಾಗಿದ್ದು ಕಳೆದ ಕೆಲ ವರ್ಷಗಳಿಂದ ತನ್ನಲ್ಲಿರುವ ಪ್ರತಿಭೆಗಳಿಗೆ ತಕ್ಕ ನ್ಯಾಯ ನೀಡಲು ವಿಫಲವಾಗಿದ್ದಾರೆ. ಅದಕ್ಕಿರುವ ಕಾರಣ ನಮಗೆ ತಿಳಿದಿಲ್ಲ. ಟಿ20 ಕ್ರಿಕೆಟ್ನಲ್ಲಿ ಅದೃಷ್ಟವು ಕೂಡ ಸಾಥ್ ನೀಡಬೇಕಾಗುತ್ತದೆ. ಅವರಿನ್ನೂ ಫೈನಲ್ಗೆ ಪ್ರವೇಶ ಪಡೆದುಕೊಂಡಿಲ್ಲದ ಕಾರಣ ಅವರ ಮುಂದೆ ಸವಾಲಿದೆ. ಅವರು ನಾಕ್ಔಟ್ ಅಥವಾ ಫೈನಲ್ ಹಂತಕ್ಕೆ ಪ್ರವೇಶ ಪಡೆಯ ಬೇಕಿದೆ. ಆ ಹಂತಕ್ಕೆ ಅವರು ತಲುಪಿದ ಬಳಿಕ ಟ್ರೋಫು ಗೆಲ್ಲುವುದು ಅವರಿಗೆ ಸಾಧ್ಯವಾಗಲೂ ಬಹುದು" ಎಂದು ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.
ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಕೆಲ ಅದ್ಭುತ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಕಗಿಸೋ ರಬಾಡ, ಜಾನಿ ಬೈರ್ಸ್ಟೋವ್, ಲಿಯಾಮ್ ಲಿವಿಂಗ್ಸ್ಟನ್, ಶಿಖರ್ ಧವನ್ ಮತ್ತು ಶಾರೂಕ್ ಖಾನ್ ಅವರಂತಾ ಆಟಗಾರರನ್ನು ಪಂಜಾಬ್ ಕಿಂಗ್ಸ್ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.