ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಿರ್ಣಾಯಕ ಪಂದ್ಯವನ್ನು ಪಂಜಾಬ್ ಕಿಂಗ್ಸ್ ತಂಡ 17 ರನ್ಗಳ ಅಂತರದಿಂದ ಸೋಲು ಅನುಭವಿಸಿತು. ಪ್ಲೇಆಫ್ ಹಂತಕ್ಕೇರಬೇಕಾದರೆ ಈ ಪಂದ್ಯವನ್ನು ಪಂಜಾಬ್ ಕಿಂಗ್ಸ್ ಗೆಲ್ಲಲೇಬೇಕಾಗಿತ್ತು ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲು ಪಂಜಾಬ್ ಕಿಂಗ್ಸ್ ತಂಡಕ್ಕೆ ದೊಡ್ಡ ಆಘಾತ ನೀಡಿದೆ. ಈ ಸೋಲಿನ ಬಳಿಕ ಪಂಜಾಬ್ ಕಿಂಗ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಹೇಳಿಕೆಯನ್ನು ನೀಡಿದ್ದು ತಂಡದ ಸೋಲಿನ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 159 ರನ್ಗಳನ್ನು ಗಳಿಸಲಷ್ಟೇ ಶಕ್ತವಾಗಿತ್ತು. ಭಾರೀ ಹಿನ್ನಡೆ ಅನುಭವಿಸಿದ್ದ ಡೆಲ್ಲಿ ಕ್ಯಾಪಿಟಲ್ಸ ತಂಡಕ್ಕೆ ಸತತ ಎರಡನೇ ಅರ್ಧ ಶತಕ ಬಾರಿಸಿ ಶಾನ್ ಮಾರ್ಶ್ ಆಸರೆಯಾದರು. ಹೀಗಾಗಿ ಡಿಸಿ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಗಿತ್ತು. ಆದರೆ ಈ ಮೊತ್ತವನ್ನು ಬೆನ್ನಟ್ಟಲು ಸಾಧ್ಯವಾಗದೆ 17 ರನ್ಗಳ ಅಂತರದ ಸೋಲು ಅನುಭವಿಸಿದೆ ಪಂಜಾಬ್ ಕಿಂಗ್ಸ್.
ಈ ಪಂದ್ಯದಲ್ಲಿ ತಮ್ಮ ತಂಡ ಬ್ಯಾಟಿಂಗ್ನಲ್ಲಿ ಇನ್ನೂ ಉತ್ತಮ ಪ್ರದರ್ಶನವನ್ನು ನೀಡಬಹುದಾಗಿತ್ತು ಎಂದಿದ್ದಾರೆ ಮಯಾಂಕ್ ಅಗರ್ವಾಲ್. "ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಐದರಿಂದ ಹತ್ತು ಓವರ್ಗಳ ಅಂತರದಲ್ಲಿ ನಾವು ಸಾಕಷ್ಟು ವಿಕೆಟ್ಗಳನ್ನು ಕಳೆದುಕೊಂಡೆವು. ಅಲ್ಲಿಯೇ ನಾವು ಪಂದ್ಯವನ್ನು ಕಳೆದುಕೊಂಡೆವು. ನಮ್ಮಲ್ಲಿರುವ ಬ್ಯಾಟಿಂಗ್ ಪಡೆಯನ್ನು ನೋಡಿ ನಾವು ಈ ಮೊತ್ತವನ್ನು ಬೆನ್ನಟ್ಟಬಹುದು ಎಂದು ಭಾವಿಸಿದ್ದೆ. ಪಿಚ್ ಕೂಡ ಚೆನ್ನಾಗಿತ್ತು." ಎಂದು ಮಯಾಂಕ್ ಅಗರ್ವಾಲ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಾವು ಇನ್ನು ಕೂಡ ಒಂದು ಪಂದ್ಯವನ್ನು ಆಡಬೇಕಿದ್ದು ಅಲ್ಲಿ ಗೆಲುವು ಸಾಧಿಸಲೇಬೇಕಿದೆ. ಆ ಎರಡು ಅಂಕಗಳು ನಮಗೆ ಬಹಳ ನಿರ್ಣಾಯವಾಗಿದೆ. ಆ ಪಂದ್ಯದಲ್ಲಿ ನಾವು ಅತ್ಯುತ್ತಮ ಆಟವನ್ನು ಪ್ರದರ್ಶಿಸಲಿದ್ದೇವೆ. ನಮ್ಮ ತಂಡದ ಸಂಪೂರ್ಣ ಸಾಮರ್ಥ್ಯ ಈವರೆಗೆ ಬಂದಿಲ್ಲ. ಅಂತಿಮ ಪಂದ್ಯದಲ್ಲಿ ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸುವ ವಿಶ್ವಾಸದಲ್ಲಿ ನಾವಿದ್ದೇನೆ ಎಂದಿದ್ದಾರೆ ಮಯಾಂಕ್ ಅಗರ್ವಾಲ್.
ಇನ್ನು ಈ ಸೋಲಿನ ಬಳಿಕ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿಯೇ ಮುಂದುವರಿದಿದೆ. 13 ಪಂದ್ಯಗಳನ್ನು ಆಡಿರುವ ಪಂಜಾಬ್ ಕಿಂಗ್ಸ್ ತಂಡ 6 ಪಂದ್ಯಗಳಲ್ಲಿ ಗೆದ್ದಿದ್ದು 7 ಪಂದ್ಯಗಳಲ್ಲಿ ಸೋತಿದೆ. ಈ ಮೂಲಕ 12 ಅಂಕಗಳನ್ನು ಹೊಂದಿದೆ. ಅಂತಿಮ ಪಂದ್ಯವನ್ನು ಗೆದ್ದರೆ 14 ಅಂಕಗಳನ್ನು ಪಂಜಾಬ್ ಕಿಂಗ್ಸ್ ತಂಡ ಗಳಿಸಲಿದ್ದು ಭಾರೀ ಅಂತರದಿಂದ ಗೆಲುವು ಸಾಧಿಸಿ ನೆಟ್ರನ್ರೇಟ್ ಕೂಡ ಉತ್ತಮ ಪಡಿಸಿಕೊಂಡರೆ ಸಣ್ಣ ಅವಕಾಶವೊಂದು ಪಂಜಾಬ್ ಕಿಂಗ್ಸ್ ಮುಂದಿದೆ. ಹೀಗಾಗಿ ಅಧಿಕೃತವಾಗಿ ಪ್ಲೇಆಫ್ ರೇಸ್ನಿಂದ ಪಂಜಾಬ್ ಕಿಂಗ್ಸ್ ಇನ್ನೂ ಹೊರಬಿದ್ದಿಲ್ಲ.