ಕಳೆದ ಭಾನುವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಆರ್ಆರ್ ತಂಡದ ಅನುಭವಿ ಆಟಗಾರ ಆರ್ ಅಶ್ವಿನ್ ರಿಟೈರ್ಡ್ ಔಟ್ ಆಗಿ ಫೆವಿಲಿಯನ್ಗೆ ಸೇರಿಕೊಳ್ಳುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಫೆವಿಲಿಯನ್ಗೆ ಸೇರಿಕೊಂಡ ಆಟಗಾರ ಎನಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆದಿದೆ.
ಇದೀಗ ಸ್ವತಃ ಆರ್ ಅಶ್ವಿನ್ ತಮ್ಮ ರಿಟೈರ್ಡ್ ಔಟ್ ನಿರ್ಧಾರದ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಆ ಹಂತದಲ್ಲಿ ರಿಟೈರ್ಡ್ ಔಟ್ ನಿರ್ಧಾರವನ್ನು ತೆಗೆದುಕೊಳ್ಳಲು ಇದ್ದ ಲೆಕ್ಕಾಚಾರವನ್ನು ಆರ್ ಅಶ್ವಿನ್ ಬಹಿರಂಗಪಡಿಸಿದ್ದು ಕುತೂಹಲಕಾರಿ ಅಂಶವನ್ನು ಮುಂದಿಟ್ಟಿದ್ದಾರೆ.
ಕ್ರಿಕ್ಬಜ್ ಜೊತೆಗೆ ಮಾತನಾಡಿರುವ ಆರ್ ಅಶ್ವಿನ್ಗೆ ರಿಟೈರ್ಡ್ ಔಟ್ ನಿರ್ಧಾರ ತೆಗೆದುಕೊಂಡ ಕ್ಷಣದ ಬಗ್ಗೆ ಪ್ರಶ್ನೆ ಮುಂದಿಡಲಾಯಿತು. ಇದಕ್ಕೆ ಉತ್ತರಿಸಿದ ಅಶ್ವಿನ್ ಅದು ಆ ಕ್ಷಣದ ನಿರ್ಧಾರವಾಗಿತ್ತು ಎಂದಿದ್ದಾರೆ. ಮುಂದುವರಿದು ಮಾತನಾಡಿದ ಆರ್ ಅಶ್ವಿನ್ "ಟಿ20 ಕ್ರಿಕೆಟ್ ಒಂದು ತಂಡದ ಆಟವಾಗಿದ್ದು ನಾವು ಸಂಭ್ರಮದಲ್ಲಿ ಇದನ್ನು ಮರೆತುಬಿಡುತ್ತೇವೆ. ಇದು ಆಟದ ಪ್ರಮುಖ ಅಂಶವಾಗಿದ್ದು ನಾವು ಅದನ್ನು ಪರಿಗಣಿಸಿಯೇ ಇಲ್ಲ" ಎಂದು ಆರ್ ಅಶ್ವಿನ್ ರಿಟೈರ್ಡ್ ಔಟ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
SRH vs GT: ಸೋಲನ್ನೇ ಕಾಣದಿದ್ದ ಗುಜರಾತ್ಗೆ ಮಣ್ಣು ಮುಕ್ಕಿಸಿ ಸತತ ಎರಡನೇ ಗೆಲುವು ಕಂಡ ಸನ್ ರೈಸರ್ಸ್
ಫುಟ್ಬಾಲ್ ರೀತಿಯ ತಂಡದ ಆಟ ಟಿ20 ಕ್ರಿಕೆಟ್: ಮುಂದುವರಿದ ಆರ್ ಅಶ್ವಿನ್ ಟಿ20 ಕ್ರಿಕೆಟ್ ಫುಟ್ಬಾಲ್ ಪಂದ್ಯದಷ್ಟೇ ತಂಡದ ಆಟವಾಗಿದೆ ಎಂದು ಹೇಳಿದ್ದಾರೆ. "ಟಿ20 ಕ್ರಿಕೆಟ್ ನಾವು ಈಗ ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚಿನ ತಂಡದ ಆಟವಾಗಿದೆ. ಇದು ಫುಟ್ಬಾಲ್ ರೀತಿಯದ್ದೇ ಟೀಮ್ ಗೇಮ್ ಆಗಿದೆ. ಬ್ಯಾಟರ್ಗಳು ಹಾಗೂ ವಿಕೆಟ್ ಟೇಕರ್ಗಳು ಗೋಲ್ಸ್ಕೋರರ್ಗಳ ರೀತಿ. ಆದರೆ ನಿಮ್ಮ ಗೋಲ್ಕೀಪರ್ಗಳು ಮತ್ತು ಡಿಫೆಂಡರ್ಗಳು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿದ್ದರೆ ಮಾತ್ರ ಗೋಲ್ಸ್ಕೋರರ್ಗಳಿಗೆ ಬೆಲೆ ಬರುತ್ತದೆ" ಎಂದಿದ್ದಾರೆ ಆರ್ ಅಶ್ವಿನ್.
ಈ ಮೂಲಕ ಆರ್ ಅಶ್ವಿನ್ ರಿಟೈರ್ಡ್ ಔಟ್ ಅವಕಾಶವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಂಡಗಳು ಬಳಸಿಕೊಂಡರೆ ಪಂದ್ಯಗಳು ಮತ್ತಷ್ಟು ರೋಚಕವಾಗಿ ನಡೆಯಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ನಿಯಮದಲ್ಲಿ ಲಭ್ಯವಿರುವ ಈ ಅವಕಾಶವನ್ನು ಇತರ ತಂಡಗಳು ಕೂಡ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿದೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.
CSK vs RCB: ಈ ಮೈಲಿಗಲ್ಲುಗಳ ಮೇಲೆ ಕೊಹ್ಲಿ, ದಿನೇಶ್ ಕಾರ್ತಿಕ್ ಮತ್ತು ಧೋನಿ ಕಣ್ಣು
ಭಾನುವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಆರ್ಆರ್ ತಂಡ 165 ರನ್ಗಳನ್ನು ಗಳಿಸಲು ಯಶಸ್ವಿಯಾಯಿತು. ಇದನ್ನು ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 162 ರನ್ ಗಳಿಸಲು ಶಕ್ತವಾಗಿದ್ದು 3 ರನ್ಗಳ ಅಂತರದಿಂದ ಶರಣಾಗಿದೆ.
ಈ ಮೂಲಕ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮೂರು ಗೆಲುವು ಹಾಗೂ ಒಂದು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಗುರುವಾರ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಆಡಲಿದೆ.