ತಂಡದ ಯಶಸ್ಸಿಗೆ ಸಾಂಘಿಕ ಪ್ರದರ್ಶನ ಕಾರಣ
ಐಪಿಎಲ್ 15ನೇ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡ ಈವರೆಗೆ ಯಶಸ್ಸು ಸಾಧಿಸಿದ್ದು ಇದಕ್ಕೆ ತಂಡದ ಸಾಂಘಿಕ ಪ್ರದರ್ಶನ ಕಾರಣ ಎಂದಿದ್ದಾರೆ. ಅಲ್ಲದೆ ಹಾರ್ದಿಕ್ ಪಾಂಡ್ಯ ನಾಯಕತ್ವ ಹಾಗೂ ಆಶಿಶ್ ನೆಹ್ರಾ ಕೋಚ್ ಆಗಿ ತಂಡವನ್ನು ಮುನ್ನಡೆಸಿದ ರೀತಿ ಎಲ್ಲರಿಗೂ ಅಚ್ಚರಿಯ ಸಂಗತಿಯಾಗಿದೆ ಎಂದಿದ್ದಾರೆ ರಾಹುಲ್ ತೆವಾಟಿಯಾ.
ಯಶಸ್ಸಿಗೆ ಕಾರಣ ತಿಳಿಸಿದ ತೆವಾಟಿಯಾ
ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ರಾಹುಲ್ ತೆವಾಟಿಯಾ ತಂಡದ ಯಶಸ್ಸಿಗೆ ಖಾರಣವಾದ ಒಂದು ಪ್ರಮುಖ ಅಂಶವನ್ನು ಬಹಿರಂಗಪಡಿಸಿದ್ದಾರೆ. "ನಮ್ಮ ತಂಡ ಯಾವುದೇ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗಿಲ್ಲ. ಇಡೀ ತಂಡವಾಗಿ ನಾವು ಆಡುತ್ತಿದ್ದೇವೆ. ಆ ಕಾರಣದಿಂದಾಗಿಯೇ ನಾವು ಟೂರ್ನಿಯಲ್ಲಿ ಯಶಸ್ಸು ಸಾಧಿಸಿದೆವು. ತಂಡದ ವಾತಾವರಣ ಬಹಳ ನಿರಾಳವಾಗಿದ್ದು ಎಲ್ಲರು ಉತ್ಸಾಹದಿಂದಿದ್ದಾರೆ. ಈ ಕಾರಣದಿಂದಾಗಿಯೇ ಈ ರೀತಿಯ ಪ್ರದರ್ಶನ ನೀಡಲು ಸಾಧ್ಯವಾಯಿತು" ಎಂದಿದ್ದಾರೆ ರಾಹುಲ್ ತೆವಾಟಿಯಾ.
ಉತ್ತಮ ಪ್ರದರ್ಶನ ನೀಡಿ ಮಿಂಚಿರುವ ತೆವಾಟಿಯಾ
ಈ ಬಾರಿಯ ಐಪಿಎಲ್ನಲ್ಲಿ ರಾಹುಲ್ ತೆವಾಡಿಯಾ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. 12 ಇನ್ನಿಂಗ್ಸ್ಗಳಲ್ಲಿ ಆಡಿರುವ ತೆವಾಟಿಯಾ ಕೆಳ ಕ್ರಮಾಂಕದಲ್ಲಿ ಕೆಲ ಅದ್ಭುತ ಪ್ರದರ್ಶನಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 217 ರನ್ಗಳನ್ನು ಗಳಿಸಿರುವ ತೆವಾಟಿಯಾ 147.62 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದು ಕೆಲ ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸುವಂತಾ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ಇನ್ನು ಒತ್ತಡದ ಸಂದರ್ಭದಲ್ಲಿಯೂ ಬ್ಯಾಟಿಂಗ್ ನಡೆಸಿ ಮಿಂಚಿರುವ ತೆವಾಡಿಯಾ "ನಾನು ಒತ್ತಡದಲ್ಲಿ ಆಡುವುದನ್ನು ಇಷ್ಟಪಡುತ್ತೇನೆ. ಆ ಸಂದರ್ಭದಲ್ಲಿ ನನ್ನಿಂದ ಅತ್ಯುತ್ತಮ ಪ್ರದರ್ಶನ ಬರುತ್ತದೆ" ಎಂದಿದ್ದಾರೆ.
ಟೀಮ್ ಇಂಡಿಯಾ ಪರ ಆಡುವ ಕನಸು
ಇನ್ನು ಈ ಸಂದರ್ಭದಲ್ಲಿ ರಾಹುಲ್ ತೆವಾಟಿಯಾ ಭಾರತ ತಂಡದ ಪರವಾಗಿ ಆಡುವ ತಮ್ಮ ಕನಸನ್ನು ಹಂಚಿಕೊಂಡಿದ್ದಾರೆ. ತನ್ನ ಕರ್ತವ್ಯವನ್ನು ತಾನು ಮುಂದೆಯೂ ಹೀಗೆಯೇ ನಿರ್ವಹಿಸಲಿದ್ದು ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ದೊರೆಯುವ ವಿಶ್ವಾಸವಿದೆ ಎಂದಿದ್ದಾರೆ. ನಂತರ ಈ ಬಾರಿಯ ಐಪಿಎಲ್ ಟೂರ್ನಿಯುದ್ದಕ್ಕೂ ತಮ್ಮ ತಂಡಕ್ಕೆ ಹಾಗೂ ತಮಗೆ ಬೆಂಬಲ ನೀಡಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದವನ್ನು ತಿಳಿಸಿದ್ದಾರೆ.