1. ಮೊಹಮ್ಮದ್ ಸಿರಾಜ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೆಚ್ಚು ಬೆಂಬಲವನ್ನು ಪಡೆದುಕೊಂಡಿರುವ ಆಟಗಾರನೆಂದರೆ ಅದು ಮೊಹಮ್ಮದ್ ಸಿರಾಜ್. ಕಳಪೆ ಪ್ರದರ್ಶನ ನೀಡಿದರೂ ಮತ್ತೆ ಮತ್ತೆ ಅವಕಾಶ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸಿರಾಜ್ 2020 ಮತ್ತು 2021ರ ಐಪಿಎಲ್ ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್ 15 ಪಂದ್ಯಗಳನ್ನಾಡಿ ಕೇವಲ 9 ವಿಕೆಟ್ ಪಡೆದು 10.07 ಎಕಾನಮಿಯಲ್ಲಿ ರನ್ ನೀಡಿ ದುಬಾರಿಯಾದರು. ಹೀಗೆ ತೀರಾ ಕಳಪೆ ಪ್ರದರ್ಶನ ನೀಡಿದ್ದರೂ ಸಹ ಮೊಹಮ್ಮದ್ ಸಿರಾಜ್ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕಳೆದ ವರ್ಷಗಳಂತೆ ಈ ವರ್ಷವೂ ಸಹ ಬೆಂಬಲ ನೀಡಿ ತಂಡದಲ್ಲಿಯೇ ಉಳಿಸಿಕೊಳ್ಳುವ ಸಾಧ್ಯತೆಗಳಿವೆ.
2. ಆಕಾಶ್ ದೀಪ್
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಪದಾರ್ಪಣೆ ಮಾಡಿದ ಆಕಾಶ್ ದೀಪ್ 5 ಪಂದ್ಯಗಳನ್ನಾಡಿ 5 ವಿಕೆಟ್ ಪಡೆದರು ಹಾಗೂ ಒಂದು ಮೇಡನ್ ಓವರ್ ಕೂಡ ಹಾಕಿದರು. ಆದರೆ ಆಕಾಶ್ ದೀಪ್ 10.88ರ ಎಕಾನಮಿಯಲ್ಲಿ ರನ್ ನೀಡಿದ್ದು ದುಬಾರಿಯಾದರು. ಆದರೂ ಸಹ ಈ ಯುವ ಕ್ರಿಕೆಟಿಗನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಅವಕಾಶ ನೀಡಿ ತಂಡದಲ್ಲಿಯೇ ಉಳಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
3. ಸಿದ್ಧಾರ್ಥ್ ಕೌಲ್
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಸಿದ್ಧಾರ್ಥ್ ಕೌಲ್ ಇಡೀ ಟೂರ್ನಿಯಲ್ಲಿ ಕೇವಲ 1 ಪಂದ್ಯದಲ್ಲಿ ಮಾತ್ರ ಅವಕಾಶ ಪಡೆದರು. ತಂಡದ ಲೀಗ್ ಹಂತದ ಅಂತಿಮ ಪಂದ್ಯ ಗುಜರಾತ್ ಟೈಟನ್ಸ್ ವಿರುದ್ಧ ಇತ್ತು ಹಾಗೂ ಈ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ರಮುಖವಾಗಿತ್ತು. ಹೀಗಾಗಿ ಆ ಪಂದ್ಯದಲ್ಲಿ ವಿಕೆಟ್ ಕಬಳಿಸುವ ಸಲುವಾಗಿ ಮೊಹಮ್ಮದ್ ಸಿರಾಜ್ ಬದಲು ಸಿದ್ಧಾರ್ಥ್ ಕೌಲ್ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬ ಹೇಳಿಕೆಯನ್ನು ನಾಯಕ ಫಾಫ್ ಡು ಪ್ಲೆಸಿಸ್ ನೀಡಿದ್ದರು. ಆದರೆ ಈ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದೇ ಸಿದ್ಧಾರ್ಥ್ ಕೌಲ್ 43 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಆದರೆ ಸಿದ್ಧಾರ್ಥ್ ಕೌಲ್ ಐಪಿಎಲ್ ಲೀಗ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕಾರಣದಿಂದಾಗಿ ಮುಂದಿನ ಆವೃತ್ತಿಗೆ ಈತನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಂಡದಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.