ಐಪಿಎಲ್ 2022ರ ಮೆಗಾ ಹರಾಜು ಪ್ರಕ್ರಿಯೆ ಈಗಾಗಲೇ ಅಂತ್ಯವಾಗಿದೆ. ಈ ಮೆಗಾ ಹರಾಜಿನಲ್ಲಿ ಎಲ್ಲಾ ತಂಡಗಳು ಕೂಡ ಸಂಪೂರ್ಣ ಸ್ಕ್ವಾಡ್ ಕಟ್ಟಿಕೊಂಡಿದೆ. ಈ ತಂಡಗಳ ಪೈಕಿ ಕೊಲ್ಕತ್ತಾ ನೈಟ್ ರೈಡರ್ಸ್ ಮುಂದಿನ ಆವೃತ್ತಿಗೆ ನೂತನ ನಾಯಕನನ್ನು ನೇಮಕಗೊಳಿಸಿದೆ. ಬುಧವಾರ ಈ ಬಗ್ಗೆ ಕೆಕೆಆರ್ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಘೋಷಣೆ ಮಾಡಿದೆ.
ಕೆಕೆಆರ್ಗೆ ಶ್ರೇಯಸ್ ಐಯ್ಯರ್ ನಾಯಕ: ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಿರೀಕ್ಷೆಯಂತೆಯೇ ಈ ಬಾರಿಯ ಐಪಿಎಲ್ ಆವೃತ್ತಿಗೆ ಶ್ರೇಯಸ್ ಐಯ್ಯರ್ ಅವರನ್ನು ತಂಡದ ನೂತನ ನಾಯಕನನ್ನಾಗಿ ನೇಮಕ ಮಾಡಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಂದಿರುವ ಶ್ರೇಯಸ್ ಐಯ್ಯರ್ ನೂತನ ತಂಡದ ಹೊಣೆಗಾರಿಕೆ ಹೊತ್ತುಕೊಳ್ಳಲಿದ್ದಾರೆ.
ಭಾರತ vs ಶ್ರೀಲಂಕಾ: ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: ಬೆಂಗಳೂರಿನಲ್ಲಿ ಡೇ-ನೈಟ್ ಟೆಸ್ಟ್
ಟ್ವಿಟ್ಟರ್ನಲ್ಲಿ ಘೋಷಿಸಿದ ಕೆಕೆಆರ್: ಕೊಲ್ಕತ್ತಾ ಮೂಲದ ಫ್ರಾಂಚೈಸಿ ಟ್ವಿಟ್ಟರ್ ಖಾತೆಯಲ್ಲಿ ನೂತನ ನಾಯಕನನ್ನು ವಿಭಿನ್ನವಾಗಿ ಘೋಷಣೆ ಮಾಡಿದೆ. "ಮಹಿಳೆಯರೇ ಮತ್ತು ಪುರುಷರೇ, ಹುಡುಗ ಹುಡುಗಿಯರೇ, ಗ್ಯಾಲ್ಯಾಕ್ಸಿ ಆಫ್ ನೈಟ್ಸ್ನ ನೂತನ ನಾಯಕನಿಗೆ ಹಲೋ ಹೇಳಿ" ಎಂದು ಬರೆದುಕೊಂಡಿರುವ ಕೆಕೆಆರ್ ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಿದ ನಾಯಕರ ಫೋಟೋದೊಂದಿಗೆ ಶ್ರೇಯಸ್ ಐಯ್ಯರ್ ಚಿತ್ರವನ್ನು ಸೇರಿಸಿ ಹಂಚಿಕೊಂಡಿದೆ.
ನಾಯಕನನ್ನು ಹರಾಜಿಗೆ ಬಿಡುಗಡೆಗೊಳಿಸಿದ್ದ ಕೆಕೆಆರ್: ಕಳೆದ ಆವೃತ್ತಿಯಲ್ಲಿ ಮೊದಲಾರ್ಧದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಕೆಕೆಆರ್ ದ್ವಿತೀಯಾರ್ಧದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ತಿರುಗಿಬೀಳುವಲ್ಲಿ ಯಶಸ್ವಿಯಾಗಿತ್ತು. ಇದರ ಪರಿಣಾಮವಾಗಿ ಕೆಕೆಆರ್ ಫೈನಲ್ಗೆ ಪ್ರವೇಶಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಕೆಕೆಆರ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಇಯಾನ್ ಮಾರ್ಗನ್ ಪ್ರದರ್ಶನ ಮಾತ್ರ ಅತ್ಯಂತ ಕಳಪೆಯಾಗಿತ್ತು. ಹೀಗಾಗಿ ಕೆಕೆಆರ್ ಫ್ರಾಂಚೈಸಿ ನಾಯಕ ಇಯಾನ್ ಮಾರ್ಗನ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳದೆ ಹರಾಜಿಗೆ ಬಿಡುಗಡೆಗೊಳಿಸಿತ್ತು.
ನಾಯಕತ್ವದ ಮೇಲೆ ಕಣ್ಣಿಟ್ಟಿದ್ದ ಐಯ್ಯರ್: ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದು ಎರಡು ಆವೃತ್ತಿಗಳಲ್ಲಿ ನಾಯಕತ್ವ ವಹಿಸಿ ಅದ್ಭುತವಾಗಿ ಮುನ್ನಡೆಸಿದ್ದ ಶ್ರೇಯಸ್ ಐಯ್ಯರ್ ಕಳೆದ ಆವೃತ್ತಿಯ ಮೊದಲಾರ್ಧದ ಪಂದ್ಯಗಳಿಗೆ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ರಿಷಭ್ ಪಂತ್ಗೆ ನಾಯಕತ್ವ ವಹಿಸಿತ್ತು. ಟೂರ್ನಿ ದ್ವಿತೀಯಾರ್ಧಕ್ಕೆ ಐಯ್ಯರ್ ಲಭ್ಯವಿದ್ದರೂ ಪಂತ್ ನಾಯಕತ್ವಕ್ಕೆ ಡಿಸಿ ಮ್ಯಾನೇಜ್ಮೆಂಟ್ ಬೆಂಬಲ ವ್ಯಕ್ತಪಡಿಸಿತ್ತು. ಹೀಗಾಗಿ ಯಾವುದಾದರೂ ತಂಡದ ನಾಯಕತ್ವ ವಹಿಸಿಕೊಳ್ಳಬೇಕೆಂದು ಐಯ್ಯರ್ ಸ್ವತಃ ಹರಾಜು ಪಟ್ಟಿಗೆ ಬಿಡುಗಡೆಯಾಗಿದ್ದರು.
ಭಾರತ vs ವೆಸ್ಟ್ ಇಂಡೀಸ್: ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ: ಭಾರತದ ಸಂಭಾವ್ಯ ಆಡುವ ಬಳಗ ಹೀಗಿದೆ!
ಐಯ್ಯರ್ಗಾಗಿ ಹರಾಜಿನಲ್ಲಿ ತೀವ್ರ ಪೈಪೋಟಿ: ಹೀಗೆ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಶ್ರೇಯಸ್ ಐಯ್ಯರ್ ಅವರನ್ನು ಖರೀದಿಸಲು ಹಲವು ತಂಡಗಳು ಗುರಿ ಮಾಡಿಕೊಂಡಿದ್ದವು. ಸ್ವತಃ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಶ್ರೇಯಸ್ ಐಯ್ಯರ್ ಅವರನ್ನು ಮತ್ತೊಮ್ಮೆ ತಂಡಕ್ಕೆ ಸೇರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿತ್ತು. ಅಲ್ಲದೆ ಆರ್ಸಿಬಿ, ಲ್ಕನೋ ಸೂಪರ್ ಜೈಂಟ್ಸ್, ಗುಜರಾತ್ ಟೈಟನ್ಸ್ ತಂಡಗಳು ಕೂಡ ಕೆಕೆಆರ್ ಜೊತೆಗೆ ಸಾಕಷ್ಟು ಪೈಪೋಟಿ ನಡೆಸಿತು. ಅಂತಿಮವಾಗಿ ಕೆಕೆಆರ್ ಫ್ರಾಂಚೈಸಿ 12.25 ಕೋಟಿಗೆ ಖರೀದಿಸಲು ಯಶಸ್ವಿಯಾಯಿತು.