ಫಾಫ್ ನಾಯಕತ್ವವನ್ನು ಹೊಗಳಿದ ಸೆಹ್ವಾಗ್
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಫಾಫ್ ಡು ಪ್ಲೆಸಿಸ್ ಮುನ್ನಡೆಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಆರ್ಸಿಬಿ ತಂಡವನ್ನು ಮುನ್ನಡೆಸುತ್ತಿರುವ ರೀತಿಗೆ ಸೆಹ್ವಾಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಾಯಕನಾಗಿ ಫಾಫ್ ಈ ಆವೃತ್ತಿಯಲ್ಲಿ ಯಶಸ್ಸು ಗಳಿಸುವ ಜೊತೆಗೆ ಆಟಗಾರನಾಗಿಯೂ ಮಿಂಚಿದ್ದಾರೆ. ಹೆಚ್ಚಿನ ಪಂದ್ಯಗಳಲ್ಲಿ ಆರ್ಸಿಬಿ ನಾಯಕನ ಬ್ಯಾಟರ್ನಿಂದ ಉತ್ತಮ ಪ್ರಮಾಣದಲ್ಲಿ ರನ್ ಹರಿದು ಬಂದಿದೆ.
ಫಾಫ್ ಹಾಗೂ ಸಂಜಯ್ ಬಂಗಾರ್ ಕೊಡುಗೆಯನ್ನು ಉಲ್ಲೇಖಿಸಿದ ಸೆಹ್ವಾಗ್
ಈ ಬಾರಿಯ ಟೂರ್ನಿಯಲ್ಲಿ ಆರ್ಸಿಬಿ ತಂಡಕ್ಕೆ ಹೆಡ್ ಕೋಚ್ ಆಗಿ ಸಂಜಯ್ ಬಂಗಾರ್ ನೇಮಕವಾಗಿದ್ದರೆ ನಾಯಕತ್ವ ಫಾಫ್ ಹೆಗಲೆರಿತ್ತು. ಈ ಇಬ್ಬರ ಆಗಮನದಿಂದಾಗಿ ಆರ್ಸಿಬಿ ತಂಡದ ಯೋಚನಾ ಶೈಲಿ ಬದಲಾಯಿತು ಎಂದಿದ್ದಾರೆ ಸೆಹ್ವಾಗ್. ಈ ಇಬ್ಬರ ಕಾರಣದಿಂದಾಗಿಯೇ ಆರ್ಸಿಬಿ ಬಹುತೇಕ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ಸೆಹ್ವಾಗ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಬದಲಾವಣೆ ಮಾಡದೆ ತಂಡ ಯಶಸ್ಸು
ಆರ್ಸಿಬಿ ಈ ಬಾರಿಯ ಆವೃತ್ತಿಯಲ್ಲಿ ಹೆಚ್ಚಿನ ಬದಲಾವಣೆ ಮಾಡದೆ ಬಹುತೇಕ ಪಂದ್ಯಗಳಲ್ಲಿ ಸ್ಥಿರ ತಂಡವನ್ನು ಉಳಿಸಿಕೊಂಡಿತ್ತು. ಇದು ತಂಡದ ಪ್ರದರ್ಶನಕ್ಕೆ ಪೂರಕವಾಯಿತು ಎಂಬ ಅಭಿಪ್ರಾಯವನ್ನು ಸೆಹ್ವಾಗ್ ವ್ಯಕ್ತಪಡಿಸಿದ್ದಾರೆ. "ವಿರಾಟ್ ಕೊಹ್ಲಿ ಈ ಹಿಂದೆ ಆಟಗಾರ ಎರಡು ಅಥವಾ ಮೂರು ಪಂದ್ಯಗಳಲ್ಲಿ ವಿಫಲವಾದರೆ ಆತನನ್ನು ತಂಡದಿಂದ ಕೈ ಬಿಡುತ್ತಿದ್ದರು. ಆದರೆ ಅದು ಈ ಬಾರಿ ನಡೆಯಲಿಲ್ಲ. ಬಂಗಾರ್ ಹಾಗೂ ಫಾಫ್ ಇಬ್ಬರು ಟೂರ್ನಿಯುದ್ದಕ್ಕೂ ಬಹುತೇಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಯಶಸ್ವಿಯಾದರು" ಎಂದಿದ್ದಾರೆ ಸೆಹ್ವಾಗ್.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಾಲಿಫೈಯರ್ ಪಂದ್ಯಕ್ಕೆ ಸಜ್ಜಾದ ಆರ್ಸಿಬಿ
ಇನ್ನು ಆರ್ಸಿಬಿ ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎಲಿಮಿನೇಟರ್ ಪಂದ್ಯದಲ್ಲಿ ಮಣಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಆರ್ಸಿಬಿ ಎದುರಿಸಲಿದೆ. ಎರಡೂ ತಂಡಗಳಲ್ಲಿಯೂ ಸಾಕಷ್ಟು ಬಲಿಷ್ಠ ಆಟಗಾರರಿದ್ದು ಶುಕ್ರವಾರದ ಪಂದ್ಯದಲ್ಲಿ ಯಾರಿಗೆ ಗೆಲುವು ದೊರೆಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.