ನವದೆಹಲಿ, ಅ.18: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಪ್ರಮುಖ ವೇಗಿ ಇಶಾಂತ್ ಶರ್ಮ ಅವರು ರಣಜಿ ಪಂದ್ಯದ ವೇಳೆ ಗಾಯ ಮಾಡಿಕೊಂಡಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಅಭಿಮಾನಿಗೆ ಆಘಾತಕಾರಿ ಸುದ್ದಿ ಕೊಟ್ಟಿದ್ದಾರೆ.
ರಣಜಿ ಟ್ರೋಫಿಯಲ್ಲಿ ಹರ್ಯಾಣ ವಿರುದ್ಧದ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಹಾಗೂ ದೆಹಲಿಯ ಆಟಗಾರ ಇಶಾಂತ್ ಶರ್ಮ ಸ್ನಾಯುಸೆಳೆತಕ್ಕೆ ಸಿಲುಕಿ ನರಳಿದ್ದಾರೆ. ಗಾಯದ ನಡುವೆ ಬೌಲಿಂಗ್ ಮಾಡಿದ್ದರಿಂದ ನೋವು ಉಲ್ಬಣವಾಗಿದೆ.
ರಣಜಿ ಪಂದ್ಯದ ಮೂರನೇ ದಿನ ಶನಿವಾರ ಇಶಾಂತ್ ಶರ್ಮ ಮೈದಾನಕ್ಕೆ ಇಳಿದಿರಲಿಲ್ಲ. ಶುಕ್ರವಾರ ಸಂಜೆ ಆರು ಓವರ್ಗಳನ್ನು ಮಾತ್ರ ಬೌಲ್ ಮಾಡಲು ಸಾಧ್ಯವಾಗಿತ್ತು. ಇಶಾಂತ್ ಗಾಯದ ಸಮಸ್ಯೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. [ಗಾಂಧಿ-ಮಂಡೇಲಾ ಕ್ರಿಕೆಟ್ ಸರಣಿ ಫುಲ್ ಗೈಡ್]
ಇಶಾಂತ್ ಐಸಿಸಿಯಿಂದ ಒಂದು ಪಂದ್ಯ ನಿಷೇಧ ಎದುರಿಸುತ್ತಿರುವ ಕಾರಣ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಪಂದ್ಯದಿಂದ ವಂಚಿತರಾಗುವ ಸಾಧ್ಯತೆಯಿದೆ. ಒಂದು ವೇಳೆ ಗಾಯದ ಸಮಸ್ಯೆ ಗಂಭೀರ ಸ್ವರೂಪದ್ದಾಗಿದ್ದರೆ ಬೆಂಗಳೂರಿನಲ್ಲಿ ನಡೆಯಲಿರುವ ಎರಡನೆ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯಬೇಕಾಗುತ್ತದೆ.
ದಕ್ಷಿಣ ಆಫ್ರಿಲಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಅಕ್ಟೋಬರ್ 19 ಸೋಮವಾರ ತಂಡದ ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಒಂದು ಟೆಸ್ಟ್ ಪಂದ್ಯದ ನಿಷೇಧಕ್ಕೆ ಒಳಗಾಗಿರುವ ಇಶಾಂತ್ ಶರ್ಮ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ. ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುತ್ತಾರೋ ಇಲ್ಲವೋ ಕಾದು ನೋಡಬೇಕಿದೆ. (ಪಿಟಿಐ)