
ಚೋಪ್ರಾ ಹೇಳಿದ್ದು ಯಾರ ಬಗ್ಗೆ?
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಈ ಆಟಗಾರನಿಗೆ ಖಂಡಿತಾ ಅವಕಾಶ ದೊರೆಯುವುದಿಲ್ಲ ಎಂದಿದ್ದಾರೆ. ಮಾಜಿ ಕ್ರಿಕೆಟರ್ ಹಾಘೂ ಹಾಲಿ ಕಾಮೆಂಟೇಟರ್ ಆಗಿರುವ ಆಕಾಶ್ ಚೋಪ್ರಾ ಈ ರೀತಿಯಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಟೀಮ್ ಇಮಡಿಯಾದ ಆಟಗಾರ ಸೂರ್ಯಕುಮಾರ್ ಯಾದವ್ ಬಗ್ಗೆ. ನಾಲ್ಕನೇ ಟೆಸ್ಟ್ನಲ್ಲಿ ಸೂರ್ಯಕುಮಾರ್ ಯಾದವ್ ಆಡುವ ಬಳಗದಲ್ಲಿ ಖಂಡಿತವಾಗಿಯೂ ಅವಕಾಶ ಗಿಟ್ಟಿಸಿಕೊಳ್ಳಲು ಅವಕಾಶವಿಲ್ಲ ಎಂದಿದ್ದಾರೆ.
ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಪಡೆ ಕಳೆದ ಒಂದೆರಡು ವರ್ಷಗಳಲ್ಲಿ ದೊಡ್ಡ ಯಶಸ್ಸು ಸಾಧಿಸಿಲ್ಲ. ಅದರಲ್ಲೂ ಇತ್ತೀಚೆಗೆ ಅನುಭವಿ ಚೇತೇಶ್ವರ್ ಪೂಜಾರ, ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ ಪ್ರದರ್ಶನ ತೀರಾ ಕಳಪೆಯಾಗಿತ್ತು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಪಂದ್ಯಗಳು ಮುಕ್ತಾಯವಾಗುತ್ತಿದ್ದಂತೆಯೇ ಆಡುವ ಬಳಗದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಹನುಮ ವಿಹಾರಿಗೆ ಅವಕಾಶ ನೀಡಬೇಕು ಎಂಬ ಕೂಗು ಜೋರಾಗಿ ಕೇಳಿ ಬಂದಿತ್ತು. ಆದರೆ ಲಾರ್ಡ್ಸ್ ಅಂಗಳದಲ್ಲಿ ಪಂದ್ಯವನ್ನು ಗೆದ್ದ ಬಳಿಕ ತಮಡದಲ್ಲಿ ಬದಲಾವನೆ ಮಾಡುವ ಮನಸ್ಸು ಮಾಡಿರಲಿಲ್ಲ ನಾಯಕ ವಿರಾಟ್ ಕೊಹ್ಲಿ. ಈಗ ಲೀಡ್ಸ್ ಅಂಗಳದಲ್ಲಿ ತಂಡ ಸೋಲಿನ ಮೂಲಕ ಪಂದ್ಯವನ್ನು ಅಂತ್ಯಗೊಳಿಸಿದೆ.

ಹೆಡಿಂಗ್ಲೆ ಸೋಲಿನ ಬಳಿಕ ಸೂರ್ಯಕುಮಾರ್ಗೆ ಅವಕಾಶ ದೊರೆಯುತ್ತಾ?
ಕಾಮೆಂಟೇಟರ್ ಆಕಾಶ್ ಚೋಪ್ರಗೆ ಕ್ರಿಕೆಟ್ ಅಭಿಮಾನಿಗಳು ಪ್ರಶ್ನೆಯನ್ನು ಕೇಳಿದ್ದರು. ಇದರಲ್ಲಿ ಒಂದು ಪ್ರಶ್ನೆ ಹೆಡಿಂಗ್ಲೆ ಟೆಸ್ಟ್ ಪಂದ್ಯವನ್ನು ಭಾರತ ಸೋತ ಕಾರಣದಿಂದಾಗಿ ಆಡುವ ಬಳಗದಲ್ಲಿ ಸೂರ್ಯಕುಮಾರ್ ಯಾದವ್ಗ ಎಅವಕಾಶ ದೊರೆಯಲಿದೆಯಾ ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಪ್ರತಿಕ್ರಿಯಿಸುತ್ತಾ ಆಕಾಶ್ ಚೋಪ್ರಾ "ಸೂರ್ಯಕುಮಾರ್ ಯಾದವ್, ಇಲ್ಲ, ಅದು ನಡೆಯಲು ಸಾಧ್ಯವಿಲ್ಲ. ನಾನು ಆತನ ಪರವಾಗಿ ಪಕ್ಷಪಾತಧೋರಣೆಯನ್ನು ಸ್ವಲ್ಪ ಮಟ್ಟಿಗೆ ಹೊಂದಿದ್ದೇನೆ. ನನಗೆ ಆತನೆಂದರೆ ಇಷ್ಟ. ಆದರೆ ಯಾರ ಸ್ಥಾನದಲ್ಲಿ ಆತನನ್ನು ನೀವು ಆಡಿಸುತ್ತೀರಿ? ಆರನೇ ಬ್ಯಾಟ್ಸ್ಮನ್ ಆಗಿ ನೀವು ಅವಕಾಶವನ್ನು ನೀಡುತ್ತೀರಾ" ಎಂದು ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರ ತಮ್ಮ ಮಾತಿಗೆ ಕಾರಣವನ್ನು ಕೂಡ ನೀಡಿದ್ದಾರೆ. ಈಗ ಇರುವ ತಂಡದಲ್ಲಿರುವ ಆರು ಬ್ಯಾಟ್ಸ್ಮನ್ಗಳ ಪೈಕಿ ಯಾರು ಕೂಡ ಹೊರಗುಳಿಯುವುದು ಅಸಾಧ್ಯವಾಗಿದೆ ಎಂದಿದ್ದಾರೆ. "ಈಗ ಆಡುತ್ತಿರುವ ತಂಡದ ಯಾರನ್ನು ಕೂಡ ನೀವು ಮುಟ್ಟಲು ಸಾಧ್ಯವಿಲ್ಲ. ರೋಹಿತ್, ರಾಹುಲ್, ಪೂಜಾರ, ಕೊಹ್ಲಿ, ರಹಾನೆ ಮತ್ತು ರಿಷಭ್ ಪಂತ್ ಈ ಆರು ಆಟಗಾರರು ಕೂಡ ಆಡಲಿದ್ದಾರೆ. ಈ ಆರು ಆಟಗಾರರು ಉಳಿದುಕೊಂಡರೆ ನಿಮಗೆ ಸೇರ್ಪಡೆಗೆ ಅವಕಾಶವೇ ಇಲ್ಲ" ಎಂದು ಆಕಾಶ್ ಚೋಪ್ರಾ ವಿವರಿಸಿದ್ದಾರೆ.

ಹೆಚ್ಚುವರು ಬ್ಯಾಟ್ಸ್ಮನ್ನನ್ನು ಕಣಕ್ಕಿಳಿಸುತ್ತಾರಾ ಕೊಹ್ಲಿ
ತಂಡದ ರಣತಂತ್ರದ ವಿಚಾರವಾಗಿ ಮತ್ತೊಂದು ಲೆಕ್ಕಾಚಾರ ಕೂಡ ನಡೆಯುತ್ತಿದೆ. ಟೀಮ್ ಇಂಡಿಯಾ ಈ ಸರಣಿಯಲ್ಲಿ ಈವರೆಗೆ ಐವರು ಬೌಲರ್ಗಳೊಂದಿಗೆ ಕಣಕ್ಕಿಳಿದಿತ್ತು. ಆದರೆ ನಾಲ್ವರು ಬೌಲರ್ಗಳನ್ನು ಕಣಕ್ಕಿಳಿಸಿ ಓರ್ವ ಹೆಚ್ಚುವರಿ ಬ್ಯಾಟ್ಸ್ಮನ್ನನ್ನು ಕಣಕ್ಕಿಳಿಸುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿದೆ. ಇದು ನಿಜವಾದಲ್ಲಿ ಸೂರ್ಯಕುಮಾರ್ ಯಾದವ್ ಅಥವಾ ಹನುಮ ವಿಹಾರಿಗೆ ಆಡುವ ಬಳಗದಲ್ಲಿ ಅವಕಾಶ ದೊರೆಯುವ ಸಾಧ್ಯತೆಯಿದೆ.

ಅಶ್ವಿನ್ ಆಯ್ಕೆಯನ್ನು ಖಂಡಿತಾ ಪರಿಗಣಿಸಲಿದ್ದಾರೆ
ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರಾ ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್ ಅಶ್ವಿನ್ ಅವರನ್ನು ತಂಡ ಆಡುವ ಬಳಗಕ್ಕೆ ಸೇರಿಸಿಕೊಳ್ಳುವ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ತಲೆಯಲ್ಲಿ ಆರ್ ಅಶ್ವಿನ್ ಅವರ ಸೇರ್ಪಡೆಯ ವಿಚಾರ ಕಂಡಿತಾ ಇರುತ್ತದೆ ಎಂದಿದ್ದಾರೆ. ಇದಕ್ಕೆ ಅವರು ಕಾರಣವನ್ನು ಕೂಡ ನೀಡಿದ್ದಾರೆ. "ಆರ್ ಅಶ್ವಿನ್ ವಿಚಾರವಾಗಿ, ನೀವು ಓವಲ್ನಲ್ಲಿ ಆಡುತ್ತಿದ್ದೀರಿ. ಅಲ್ಲಿ ಚೆಂಡು ತಿರುವನ್ನು ಪಡೆಯುತ್ತದೆ ಹಾಗೂ ಪ್ಲಾಟ್ ಆಗಿದೆ. ಈ ಅಂಗಳದಲ್ಲಿ ಆರ್ ಅಶ್ವಿನ್ ಸರ್ರೆ ತಂಡದ ಪರವಾಗಿ ಕೌಂಟಿ ತಂಡದಲ್ಲಿಯೂ ಆಡಿದ್ದರು. ಆತನಿಗೆ ಈ ಪಿಚ್ನ ಬಗ್ಗೆ ಚೆನ್ನಾಗಿ ಅರಿವಿರುತ್ತದೆ. ಹೀಗಾಗಿ ಅವರ ಆಯ್ಕೆಯನ್ನು ಖಂಡಿತಾ ಪರಿಗಣಿಸುತ್ತಾರೆ" ಎಂದು ಚೋಪ್ರಾ ವಿವರಿಸಿದರು.
ಮುಂದುವರಿದು ಮಾತನಾಡಿದ ಆಕಾಶ್ ಚೋಪ್ರ ಪಿಚ್ಅನ್ನು ಗಮನಿಸಿದ ಬಳಿಕ ಹಾಗೂ ತಂಡದ ಕಾಂಬಿನೇಶನ್ನ ಗಮನದಲ್ಲಿಟ್ಟುಕೊಂಡು ಈ ಸೇರ್ಪಡೆಯನ್ನು ತಂಡ ಮಾಡಿಕೊಳ್ಳಲಿದೆ ಎಂದಿದ್ದಾರೆ. "ನೀವು ಪಿಚ್ಅನ್ನು ನೋಡುವವರೆಗೆ ಈ ಪ್ರಶ್ನೆಗೆ ಉತ್ತರವನ್ನು ನಿಖರವಾಗಿ ನೀಡಲು ಸಾಧ್ಯವಿಲ್ಲ. ಇದು ನಾಲ್ವರು ಬೌಲರ್ಗಳನ್ನು ಬಳಸಿಕೊಳ್ಳಬೇಕಾದ ಪಿಚ್ ಅಥವಾ ಕೇವಲ ಓರ್ವ ಸ್ಪಿನ್ನರ್ ಜೊತೆಗೆ ನೀವು ಕಣಕ್ಕಿಳಿಯುತ್ತೀರಾ ? ಆಗ ನಿಮ್ಮ ಪ್ರಶ್ನೆ ಜಡೇಜಾನಾ ಅಥವಾ ಆರ್ ಅಶ್ವಿನಾ ಎಂಬುದಾಗಿರುತ್ತದೆ" ಎಂದಿದ್ದಾರೆ ಆಕಾಶ್ ಚೋಪ್ರಾ.
ಈ ಮಧ್ಯೆ ಮೂರನೇ ಟೆಸ್ಟ್ನ ಬಳಿಕ ಆರ್ ಅಶ್ವಿನ್ ಮೊಣಕಾಲಿನ ನೋವಿಗೆ ಒಳಗಾಗಿದ್ದು ಸ್ಕ್ಯಾನಿಂಗ್ ನಡೆಸಿದ್ದಾರೆ. ಈ ಗಾಯದ ತೀವ್ರತೆಯನ್ನು ಗಮನಿಸಿದ ಬಳಿಕ ಆರ್ ಅಶ್ವಿನ್ಗೆ ಆಡುವ ಬಳಗದಲ್ಲಿ ಸ್ಥಾನ ದೊರೆಯುವ ಅವಕಾಶಗಳು ಕೂಡ ಸ್ಪಷ್ಟವಾಗಲಿದೆ.


Click it and Unblock the Notifications
