
ನವದೆಹಲಿ, ಜನವರಿ 13: ಪಂಜಾಬ್ ಪರ ಚೊಚ್ಚಲ ಪಂದ್ಯವಾಡಿದ ಎರಡು ವರ್ಷಗಳಲ್ಲೇ ದೇಶದ ಪರ ಆಡುವ ಅವಕಾಶವನ್ನು ಶುಭ್ ಮನ್ ಗಿಲ್ ಗಳಿಸಿಕೊಂಡಿದ್ದಾರೆ. ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದರ ಬಗ್ಗೆ ಇಂಡಿಯಾ ಟಿವಿ ನ್ಯೂಸ್ ಜತೆ ಮಾತನಾಡಿದ ಶುಭ್ ಮನ್ ಗಿಲ್, 'ಇದು ನನಗೆ ಅಚ್ಚರಿಯ ಕರೆಯಾಗಿದೆ, ನನಗೆ ಸುದ್ದಿ ತಿಳಿದ 15-20 ಸೆಕೆಂಡುಗಳ ಕಾಲ ಅಚ್ಚರಿಯ ಆಘಾತದಲ್ಲಿದ್ದೆ ಎಂದಿದ್ದಾರೆ.
ಅಂಡರ್ 19 ತಂಡದ ನಾಯಕ ಪೃಥ್ವಿ ಶಾ ಅವರು ವೆಸ್ಟ್ ಇಂಡೀಸ್ ಅವರು ಚೊಚ್ಚಲ ಸರಣಿಯಲ್ಲಿ 237ರನ್ ಗಳಿಸಿ ಸಾಧನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಆಸ್ಟ್ರೇಲಿಯಾ ಸರಣಿ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡು ಸರಣಿಯಿಂದಲೇ ಹೊರಗುಳಿಯಬೇಕಾಯಿತು.
19 ವರ್ಷ ವಯಸ್ಸಿನ ಪಂಜಾಬ್ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ಅವರು 9 ರಣಜಿ ಪಂದ್ಯಗಳಿಂದ 104.00 ರನ್ ಸರಾಸರಿಯಂತೆ 728ರನ್ ಗಳಿಸಿದ್ದಾರೆ.ದೇವಧರ್ ಟ್ರೋಫಿಯ 3 ಪಂದ್ಯಗಳಲ್ಲಿ 168ರನ್ ಗಳಿಸಿದ್ದರು.
ಲಿಸ್ಟ್ ಎ ಕ್ರಿಕೆಟ್ ನಲ್ಲಿ ಸುಮಾರು 50ರ ತನಕ ರನ್ ಸರಾಸರಿ ಹೊಂದಿದ್ದಾರೆ. ಒಟ್ಟಾರೆ, ಪ್ರಥಮ ದರ್ಜೆಯಲ್ಲಿ 80ರ ರನ್ ಸರಾಸರಿ ಹೊಂದಿದ್ದಾರೆ. ಗಿಲ್ ಅವರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20ಐ ಸರಣಿಯಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ.
ಮಧ್ಯರಾತ್ರಿಯ ಬಳಿಕ ತಂಡಕ್ಕೆ ಆಯ್ಕೆಯಾಗಿದ್ದರ ಬಗ್ಗೆ ಸುದ್ದಿ ತಿಳಿಯಿತು. ವಾಟ್ಸಾಪ್ ನಲ್ಲಿ ಬಂದ ಸಂದೇಶದಲ್ಲಿ ವಿಜಯ್ ಶಂಕರ್ ಜತೆ ನಾನು ಕೂಡಾ ಆಯ್ಕೆಯಾಗಿರುವ ಬಗ್ಗೆ ತಿಳಿಯಿತು. ಸಂತೋಷದಿಂದ ಸುದ್ದಿಯನ್ನು ನಂಬುವುದೇ ಕಷ್ಟವಾಗಿಬಿಟ್ಟಿತು. ನನ್ನ ಅದೃಷ್ಟ ಚೆನ್ನಾಗಿದೆ ಎಂದು ಹೇಳಿದರು.
ಟಿವಿ ಶೋವೊಂದರಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾರಣಕ್ಕೆ ಅಮಾನತುಗೊಂಡಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಅವರ ಬದಲಿಗೆ ಬೇರೆ ಆಟಗಾರರಾಗಿ ವಿಜಯ್ ಶಂಕರ್ ಹಾಗೂ ಶುಭ್ ಮನ್ ಗಿಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ.