ಟಿ20 ವಿಶ್ವಕಪ್ಗೆ ಭಾರತೀಯ ತಂಡ ಘೋಷಣೆಯಾದ ಬಳಿಕ ಟೀಮ್ ಇಂಡಿಯಾದ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ಹೆಚ್ಚಾಗಿದೆ. ಈ ಬಾರಿಯ ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಸೀಮಿತ ಓವರ್ಗಳ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿಯಲಿದ್ದು ಬಳಿಕ ರೋಹಿತ್ ಶರ್ಮಾ ಸೀಮಿತ ಓವರ್ಗಳ ನಾಯಕತ್ವದ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಬಿಸಿಸಿಐ ಪ್ರತಿಕ್ರಿಯಿಸಿದ್ದು ಈ ವಿಚಾರವಾಗಿ ಬಿಸಿಸಿಐ ಯಾವುದೇ ಚರ್ಚೆಯನ್ನು ಮಾಡಿಲ್ಲ ಅಂಥಾ ಯಾವ ಚಿಂತನೆಗಳು ನಮ್ಮ ಮುಂದಿಲ್ಲ ಎಂದು ಬಿಸಿಸಿಐನ ಖಜಾಂಚಿ ಅರುಣ್ ಧುಮುಲ್ ಸ್ಪಷ್ಟಪಡಿಸಿದ್ದರು.
ಇದೀಗ ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡ ನೀಡುತ್ತಿರುವ ಅತ್ಯುತ್ತಮ ಪ್ರದರ್ಶನ ಮುಂದುವರಿಯುವವರೆಗೂ ತಂಡದ ನಾಯಕತ್ವದಲ್ಲಿ ಬದಲಾವಣೆ ಮಾಡುವ ಯಾವ ಯೋಚನೆಗಳು ಕೂಡ ಇಲ್ಲ ಎಂದಿದ್ದಾರೆ ಜಯ್ ಶಾ. ಇಂಡಿಯನ್ ಎಕ್ಸ್ಪ್ರೆಸ್ಗೆ ಪ್ರತಿಕ್ರಿಯೆ ನೀಡಿರುವ ಜಯ್ ಶಾ "ಮೈದಾನದಲ್ಲಿ ಭಾರತೀಯ ಕ್ರಿಕೆಟ್ ತಂಡ ಎಷ್ಟು ಸುದೀರ್ಘ ಕಾಲ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸುತ್ತದೋ ಅಲ್ಲಿಯವರೆಗೆ ನಾಯಕತ್ವ ಬದಲಾವಣೆಯ ಪ್ರಶ್ನೆಗಳು ಬರುವುದಿಲ್ಲ" ಎಂದಿದ್ದಾರೆ. ಈ ಮೂಲಕ ನಾಯಕತ್ವ ವಿಭಜನೆಯ ಚರ್ಚೆಗೆ ಪ್ರತಿಕ್ರಿಯಿಸಿದ್ದಾರೆ.
ನಾವು ಐದನೇ ಟೆಸ್ಟ್ಗೆ ಮರು ವೇಳಾಪಟ್ಟಿ ತಯಾರಿಸಲಿದ್ದೇವೆ: ಗಂಗೂಲಿ
ನಾಯಕನಾಗಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಐಸಿಸಿ ಟ್ರೋಫಿಗಳನ್ನು ಗೆಲ್ಲುವಲ್ಲಿ ವಿಫಲವಾಗಿರುವ ಕಾರಣವನ್ನು ಮುಂದಿಟ್ಟುಕೊಮಡು ನಾಯಕತ್ವ ಬದಲಾವಣೆಯ ಕೂಗು ಜೋರಾಗಿದೆ. ಕಳೆದ ಜೂನ್ ತಿಂಗಳಿನಲ್ಲಿ ಇಂಗ್ಲೆಂಡ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಕಂಡ ನಂತರ ಈ ಬಗ್ಗೆ ಚರ್ಚೆಗಳು ಮತ್ತಷ್ಟು ಹೆಚ್ಚಾಗಿದೆ.
ಅಂದಹಾಗೆ ಟೀಮ್ ಇಂಡಿಯಾ ಕೊನೆಯ ಬಾರಿಗೆ ಐಸಿಸಿ ಟೂರ್ನಮೆಂಟ್ ಗೆದ್ದಿದ್ದು 2013ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ. ಅಂದು ಚಾಂಪಿಯನ್ಸ್ ಲೀಗ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಿತ್ತು. ಅದಾದ ಬಳಿಕ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಹಂತಕ್ಕೇರಿದ್ದರೆ 2019ರ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ ಹಂತದಲ್ಲಿ ಸೋಲು ಕಂಡಿತ್ತು. ಇತ್ತೀಚೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡದ ವಿರುದ್ಧ ಸೋಲು ಅನುಭವಿಸಿ ರನ್ನರ್ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
ಕುತೂಹಲಕಾರಿ ಸಂಗತಿಯೆಂದರೆ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಮೆಂಟರ್ ಆಗಿ ನೇಮಕವಾಗಿದ್ದಾರೆ. ಐಸಿಸಿ ಟೂರ್ನಿಗಳಾದ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ನಾಯಕನಾಗಿ ಚಾಂಪಿಯನ್ ಪಟ್ಟಕ್ಕೇರಿಸಿದ ಅನುಭವ ಹೊಂದಿದ್ದಾರೆ ಎಂಎಸ್ ಧೋನಿ. ಹೀಗಾಗಿ ಈ ಸೇರ್ಪಡೆ ತಂಡಕ್ಕೆ ಹೆಚ್ಚಿನ ಬಲ ನೀಡಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
RCB blue jersey: ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ನೀಲಿ ಜೆರ್ಸಿ ಧರಿಸಲಿದೆ ಆರ್ಸಿಬಿ
ಬಿಸಿಸಿಐ ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ಕಾರ್ದರ್ಶಿ ಜಯ್ ಶಾ ಮಾಹಿತಿಯನ್ನು ನೀಡಿದ್ದರು. "ಎಂಎಸ್ ಧೋನಿ ನಮ್ಮ ನಿರ್ಧಾರಕ್ಕೆ ಒಪ್ಪಿಕೊಂಡಿದ್ದಾರೆ. ಟಿ20 ವಿಶ್ವಕಪ್ಗೆ ಮಾತ್ರ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸಲು ಧೋನಿ ಒಪ್ಪಿಕೊಂಡಿದ್ದಾರೆ. ಬಿಸಿಸಿಐನ ಈ ಮನವಿಯನ್ನು ಧೋನಿ ಒಪ್ಪಿಕೊಂಡಿರುವುದಕ್ಕೆ ನಾನು ಸಂತಸಗೊಂಡಿದ್ದೇನೆ. ಭಾರತೀಯ ಕ್ರಿಕೆಟ್ ತಂಡಕ್ದಕೆ ಮತ್ತೊಮ್ಮೆ ಕೊಡುಗೆ ನೀಡಲು ಅವರು ಕಾತುರರಾಗಿದ್ದಾರೆ. ಈ ವಿಚಾರವಾಗಿ ಕೋಚ್ ರವಿ ಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಗೆ ಚರ್ಚೆಯನ್ನು ನಡೆಸಿಯೇ ತೀರ್ಮಾನ ಕೈಗೊಳ್ಳಲಾಗಿದೆ" ಎಂದು ಜಯ್ ಶಾ ಮಾಹಿತಿಯನ್ನು ನೀಡಿದ್ದರು.