ಸೂರತ್ ನವೆಂಬರ್ 24: ಸೈಯ್ಯದ್ ಮುಶ್ತಾಕ್ ಅಲಿ ಟಿ-20 ಪಂದ್ಯಾವಳಿಯಲ್ಲಿ ಕರ್ನಾಟಕ ಗೆಲುವಿನ ಓಟವನ್ನು ಮುಂದುವರಿಸಿದೆ. ಇಂದು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಭರ್ಜರಿ ಆಟದ ಫಲವಾಗಿ ಕರ್ನಾಟಕ 7 ವಿಕೆಟ್ಗಳಿಂದ ಗೆದ್ದುಕೊಂಡಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಪಂಜಾಬ್ ಕರ್ನಾಟಕಕ್ಕೆ 163ರನ್ಗಳ ಟಾರ್ಗೆಟ್ ನೀಡಿತ್ತು. ಉತ್ತಮ ಬ್ಯಾಟಿಂಗ್ ಲೈನ್ಅಪ್ಹೊಂದಿರುವ ಕರ್ನಾಟಕ ಇದನ್ನು ಯಶಸ್ವಿಯಾಗಿ ಬೆನ್ನತ್ತಿದೆ.
ಮೊದಲಿಗೆ ಬ್ಯಾಟಿಂಗ್ ಮಾಡಿದ ಪಂಜಾಬ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ನಿಗದಿತ 20 ಓವರ್ಗಳಲ್ಲಿ 5ವಿಕೆಟ್ ಕಳೆದುಕೊಂಡು 163 ರನ್ಗಳಿಸಿತು. ಪಂಜಾಬ್ ಪರವಾಗಿ ನಾಯಕ ಮನ್ದೀಪ್ ಸಿಂಗ್ ಅತ್ಯುತ್ತಮ ಆಟ ಪ್ರದರ್ಶಿಸಿದರು. 50ಎಸೆತಗಳನ್ನು ಎದುರಿಸಿದ ಮನ್ದೀಪ್ 76 ರನ್ ಗಳಿಸಿ ಔಟಾದರು. ಮತ್ತೋರ್ವ ಪ್ರಮುಖ ಆಟಗಾರ ಗುರುಕೀರತ್ ಸಿಂಗ್ 44ರನ್ ಸಿಡಿಸಿ ಪಂಜಾಬ್ ಉತ್ತಮ ರನ್ ಪೇರಿಸಲು ಕಾರಣರಾದರು.
ಸೈಯ್ಯದ್ ಮುಷ್ತಾಕ್ ಅಲಿ: ಪಾಂಡೆ ಸ್ಫೋಟಕ ಶತಕಕ್ಕೆ ಶರಣಾದ ಸರ್ವೀಸಸ್!
ಕರ್ನಾಟಕ ಪರವಾಗಿ ವೇಗಿ ರೋನಿತ್ ಮೋರೆ ನಾಲ್ಕು ಓವರ್ಗಳಲ್ಲಿ 27 ರನ್ಗೆ 4 ವಿಕೆಟ್ ಕಿತ್ತು ಪಂಜಾಬ್ ಬ್ಯಾಟಿಂಗ್ ವೇಗಕ್ಕೆ ಕಡಿವಾಣ ಹಾಕಿದರು. ಮನ್ದೀಪ್ ಸಿಂಗ್ ಮತ್ತು ಗುರುಕೀರತ್ ವಿಕೆಟ್ ರೋನಿತ್ ಮೋರೆ ಪಾಲಾದವು.ಕೌಶಿಕ್ ವಾಸುಕಿ ಮತ್ತು ಶ್ರೇಯಸ್ ಗೋಪಾಲ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಕರ್ನಾಟಕದ ಪರವಾಗಿ ಕೆ ಎಲ್ ರಾಹುಲ್ ಕೇವಲ 48 ಎಸೆತಗಳಲ್ಲಿ 84 ರನ್ ಚಚ್ಚಿದರು. ನಾಯಕನ ಆಟವಾಡಿದ ಮನೀಶ್ ಪಾಂಡೆ 33 ರನ್ ಸಿಡಿಸಿ ತಂಡದ ಗೆಲುವಿಗೆ ಸಹಕಾರಿಯಾದರು. ಅಂತಿಮವಾಗಿ ಕರುಣ್ ನಾಯರ್ 23 ರನ್ ಸಿಡಿಸಿ ಗೆಲುವಿನ ಸಿಹಿ ಉಣಿಸಿದರು.