ಬೆಂಗಳೂರು, ಫೆಬ್ರವರಿ 13: ಇಂದು ನಗರದ ಹೊರ ವಲಯದ ಆಲೂರಿನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ 'ಎ' ಗುಂಪಿನ ಪಂದ್ಯದಲ್ಲಿ ಒಡಿಶಾ ವಿರುದ್ಧ ಕರ್ನಾಟಕ ತಂಡವು ಭಾರಿ ಮೊತ್ತ ಪೇರಿಸಿದೆ.
ಎರಡು ಶತಕ ಮತ್ತು ಒಂದು ಅರ್ಧ ಶತಕ ದಾಖಲಿಸಿರುವ ಕರ್ನಾಟಕದ ಬ್ಯಾಟ್ಸ್ಮನ್ಗಳು ಒಡಿಸ್ಸಾಗೆ ಗೆಲ್ಲಲು 354 ರನ್ಗಳ ಗುರಿ ನೀಡಿದ್ದಾರೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಒಡಿಶಾ ತಂಡ ತನ್ನ ನಿರ್ಣಯಕ್ಕೆ ಹಣೆ ಚಚ್ಚಿಕೊಳ್ಳುವಂತೆ ಕರ್ನಾಟಕದ ಬ್ಯಾಟ್ಸ್ಮನ್ಗಳು ಬಾಲ್ಗಳನ್ನು ಬೌಂಡರಿಗೆ ಚಚ್ಚಿದರು. ಆರಂಭಿಕ ಬ್ಯಾಟ್ಸ್ಮನ್ಗಳಾದ ಕರುಣ್ ನಾಯರ್ ಮತ್ತು ಮಯಾಂಕ್ ಅಗರ್ವಾಲ್ ಇಬ್ಬರೂ ಶತಕ ಗಳಿಸಿದರು. ಮಯಾಂಕ್ ಅಗರ್ವಾಲ್ 94 ಬಾಲ್ನಲ್ಲಿ 102 ರನ್ ಗಳಿಸಿದರು ಅವರು 10 ಬೌಂಡರಿ ಬಾರಿಸಿ ಎರಡು ಸಿಕ್ಸರ್ ಎತ್ತಿದರು. ಕರುಣ್ ನಾಯರ್ 111 ಬಾಲ್ ಎದುರಿಸಿ ಬರೋಬ್ಬರಿ 100 ರನ್ ಗಳಿಸಿದರು ಅವರ ಬ್ಯಾಟಿನಿಂದ ಬಂದದ್ದು 12 ಬೌಂಡರಿ.
ವಿಜಯ್ ಹಜಾರೆ ಟೂರ್ನಿ: ರೋಚಕ ಪಂದ್ಯದಲ್ಲಿ ಕರ್ನಾಟಕಕ್ಕೆ ಸೋಲು
ಆರಂಭಿಕ ಬ್ಯಾಟ್ಸ್ಮನ್ಗಲು ಔಟಾದ ನಂತರ ಬಂದ ಪವನ್ ದೇಶಪಾಂಡೆ ಬಿರುಸಿನ ಆಟವಾಡಿ ಕೇವಲ 37 ಎಸೆತಕ್ಕೆ 54 ರನ್ ಗಳಿಸಿ ಕೊನೆಯ ವರೆಗೆ ಔಟಾಗದೆ ಉಳಿದರು. ಪವನ್ ಅವರು 5 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು. ಶ್ರೇಯಸ್ ಗೋಪಾಲ್ 18 ಬಾಲ್ಗೆ 25 ರನ್ ಗಳಿಸಿದರು. ಆ ನಂತರ ಬಂದ ಗೌತಮ್ ಕೇವಲ 26 ಬಾಲ್ ಎದುರಿಸಿ 47 ರನ್ ಭಾರಿಸಿದರು. ಅವರು 5 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು.
ಮೊದಲ 30 ಓವರ್ಗಳಲ್ಲಿ 190 ರನ್ ಗಳಿಸಿದ ಕರ್ನಾಟಕ ತಂಡ ಕೊನೆಯ 20 ಓವರ್ನಲ್ಲಿ 163 ರನ್ಗಳಿಸಿತು. ದ.ಆಫ್ರಿಕಾ ವಿರುದ್ಧ ಟಿ20 ಯಲ್ಲಿ ಸ್ಥಾನ ಗಳಿಸಿರುವ ಕೆ.ಎಲ್.ರಾಹುಲ್ ಈ ಪಂದ್ಯದಲ್ಲಿ ಆಡಲಿಲ್ಲ.
ಎ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಮೇಲಿರುವ ಕರ್ನಾಟಕ ತಂಡ ಈ ಪಂದ್ಯ ಗೆದ್ದು ಕ್ವಾಟರ್ಪೈನಲ್ ಪ್ರವೇಶಿಸುವ ಗುರಿ ಹೊಂದಿದೆ. ಒಡಿಶಾ ಇನ್ನಿಂಗ್ಸ್ ಆರಂಭವಾಗಿದ್ದು, 8 ಓವರ್ ಬಳಿಕ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿದೆ.