ವಿಶಾಖಪಟ್ಟಣಂ, ನವೆಂಬರ್ 16: ರಣಜಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾಕ್ಕೆ ಮರಳಿರುವ ಕೆಎಲ್ ರಾಹುಲ್ ಅವರು ನಮ್ಮ ಮೊದಲ ಆಯ್ಕೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮುರಳಿ ವಿಜಯ್ ಜತೆಗೆ ಕನ್ನಡಿಗ ರಾಹುಲ್ ಕಣಕ್ಕಿಳಿಯುವುದು ಖಚಿತವಾಗಿದೆ.
ನ್ಯೂಜಿಲೆಂಡ್ ಸರಣಿಯಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ರಾಹುಲ್ ಅವರು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ರಾಹುಲ್ ಅವರ ಬದಲಿಗೆ ತಂಡ ಸೇರಿದ್ದ ಅನುಭವಿ ಆಟಗಾರ ಗೌತಮ್ ಗಂಭೀರ್ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.[ರಣಜಿಯಲ್ಲಿ ಶತಕ, ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕೆ ರಾಹುಲ್]

ರಾಜಸ್ತಾನ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರು ಕರ್ನಾಟಕದ ಪರ ಮೊದಲ ಇನ್ನಿಂಗ್ಸ್ ನಲ್ಲಿ 76 ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 106 ರನ್ ಗಳಿಸುವ ಮೂಲಕ ಆಯ್ಕೆದಾರರ ಗಮನ ಸೆಳೆದು ತಂಡಕ್ಕೆ ಮರಳಿದ್ದಾರೆ.[ವಿಶಾಖಪಟ್ಟಣಂಗೆ ಬಂದಿಳಿದ ಕೊಹ್ಲಿ-ಕುಕ್ ಪಡೆ]
ರಾಹುಲ್ ಅವರು ನಮ್ಮ ಮೊದಲ ಆಯ್ಕೆಯಾಗಿದ್ದಾರೆ. ಆದರೆ, ಅವರು ಪೂರ್ಣವಾಗಿ ಗುಣಮುಖರಾಗುವುದು ಕೂಡಾ ನಮಗೆ ಮುಖ್ಯ. ಪಿಚ್ ನೋಡಿಕೊಂಡು ತಂಡದ ಆಯ್ಕೆ ಮಾಡಲಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.[ಕೊಹ್ಲಿ- ಸಾಧನೆಯ ಮತ್ತೊಂದು ಮೈಲಿಗಲ್ಲು ದಾಟಲು ಸಜ್ಜು!]
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಕರ್ನಾಟಕದ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅವರು ಆಯ್ಕೆಯಾದ ಬಗ್ಗೆ ಬಿಸಿಸಿಐ ಮಂಗಳವಾರ ಪ್ರಕಟಿಸಿತ್ತು. ಬಿಸಿಸಿಐ ನಿರ್ಣಯವನ್ನು ಕೋಚ್ ಅನಿಲ್ ಕುಂಬ್ಳೆ ಕೂಡಾ ಸ್ವಾಗತಿಸಿ, ಆಡುವ XIನಲ್ಲಿ ರಾಹುಲ್ ಗೆ ಸ್ಥಾನ ಸಿಗುವ ಬಗ್ಗೆ ಸುಳಿವು ನೀಡಿದ್ದರು.
ವೈಜಾಗ್ ಪಿಚ್ ಸಾಮಾನ್ಯವಾಗಿ ಸ್ಪಿನ್ನರ್ ಗಳಿಗೆ ನೆರವಾಗುವುದರಿಂದ ಪಿಚ್ ಲಾಭವನ್ನು ಎರಡು ತಂಡಗಳು ಪಡೆಯುವ ತವಕದಲ್ಲಿವೆ. ರಾಜ್ ಕೋಟ್ ನಲ್ಲಿ ನಡೆದ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು. (ಪಿಟಿಐ)