
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್ ಅಭ್ಯಾಸದ ವೇಳೆ ಗಾಯಗೊಂಡು ಯುಎಇನಿಂದ ಭಾರತಕ್ಕೆ ವಾಪಾಸಗಿದ್ದರು. ಮೊಣಕಾಲಿಗೆ ಗಂಭೀರ ಗಾಯವಾಗಿದ್ದ ಕಾರಣ ಕುಲ್ದೀಪ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಕುಲ್ದೀಪ್ ಯಾದವ್ ಟ್ವಿಟ್ಟರ್ನಲ್ಲಿ ಫೋಟೋ ಹಂಚಿಕೊಂಡಿದ್ದು ಚೇತರಿಕೆ ಕಾಣುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಶೀಘ್ರದಲ್ಲಿಯೇ ಗುಣಮುಖವಾಗಿ ಮೈದಾನಕ್ಕೆ ಇಳಿಯುವ ವಿಶ್ವಾಸವನ್ನು ಕುಲ್ದೀಪ್ ಯಾದವ್ ವ್ಯಕ್ತಪಡಿಸಿದ್ದಾರೆ.
"ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಹಾಗೂ ಚೇತರಿಕೆ ಈಗ ಆರಂಭವಾಗಿದೆ. ನಿಮ್ಮೆಲ್ಲರ ಬೆಂಬಲಕ್ಕೆ ತುಂಬಾ ಧನ್ಯವಾದಗಳು. ಈಗ ನಾನು ಚೇತರಿಕೆಯ ಮೇಲೆ ಗಮನವಿಟ್ಟಿದ್ದೇನೆ. ಸಾಧ್ಯವಾದಷ್ಟು ಬೇಗ ಪಿಚ್ಗೆ ಮರಳಿ ನನ್ನ ಇಷ್ಟದ ಆಟವನ್ನು ಆಡಲಿದ್ದೇನೆ" ಎಂದು ಕುಲ್ದೀಪ್ ಯಾದವ್ ಟ್ವೀಟ್ ಮಾಡಿದ್ದಾರೆ.
ಕನಿಷ್ಠ ನಾಲ್ಕು ತಿಂಗಳ ವಿಶ್ರಾಂತಿ?: ಕುಲ್ದೀಪ್ ಯಾದವ್ಗೆ ಅಭ್ಯಾಸದ ವೇಳೆ ಮುಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್ದೀಪ್ ಯಾದವ್ ಈ ಭಾರಿಯ ದೇಶೀಯ ಕ್ರಿಕೆಟ್ ಋತುವನ್ನು ಕೂಡ ಬಹುತೇಕ ಕಳೆದುಕೊಳ್ಳುವ ಸಾಧ್ಯತೆಯಿದೆ. ಕುಲ್ದೀಪ್ ಸಂಪೂರ್ಣ ಚೇತರಿಕೆಗಾಗು ಕನಿಷ್ಠ ನಾಲ್ಕು ತಿಂಗಳ ಅಗತ್ಯವಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಹೀಗಾಗಿ ಈ ಬಾರಿಯ ದೇಶೀಯ ಕ್ರಿಕೆಟ್ ಋತುವಿನ ಬಹುತೇಕ ಭಾಗವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಆಡುವ ಬಳಗದಲ್ಲಿ ಸ್ಥಾನಪಡೆಯಲು ವಿಫಲ: 26ರ ಹರೆಯದ ಕುಲ್ದೀಪ್ ಯಾದವ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್ ತಂಡದ ಪರವಾಗಿ ಒಂದೇ ಒಂದು ಪಂದ್ಯದಲ್ಲಿ ಕೂಡ ಆಡುವ ಅವಕಾಶವನ್ನು ಪಡೆದುಕೊಂಡಿರಲಿಲ್ಲ. ಕೆಕೆಆರ್ ತಂಡ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್ಗೆ ಅವಕಾಶ ನೀಡುತ್ತಿದ್ದು ಈ ಇಬ್ಬರು ಕೂಡ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಕುಲ್ದೀಪ್ ಯಾದವ್ಗೆ ಆಡುವ ಬಳಗದಲ್ಲಿ ಸ್ಥಾನ ಇಲ್ಲದಂತಾಗಿತ್ತು. ಕುಲ್ದೀಪ್ ಯಾದವ್ ಮತ್ತೆ ಕ್ರಿಕೆಟ್ಗೆ ಮರಳುವ ಮುನ್ನ ಸುದೀರ್ಘ ರಿಹ್ಯಾಬಿಲಿಟೇಶನ್ನ ಅಗತ್ಯವಿದೆ ಎನ್ನಲಾಗಿದೆ.
ರಾಷ್ಟ್ರೀಯ ತಂಡದಲ್ಲಿಯೂ ಕಡೆಗಣನೆ: ಸಾಕಷ್ಟು ವೈಫಲ್ಯವನ್ನು ಅನುಭವಿಸಿದ್ದ ಕುಲ್ದೀಪ್ ಯಾದವ್ ಇತ್ತೀಚೆಗೆ ತಂಡದಲ್ಲಿ ಸ್ಥಾನವನ್ನು ಪಡೆಯುವುದೇ ಕಠಿಣವಾಗಿತ್ತು. ಟೀಮ್ ಇಂಡಿಯಾ ಪರವಾಗಿ ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಸರಣಿಯಲ್ಲಿ ಯಾದವ್ ಆಡಿದ್ದರು. ಆಡಿದ ಒಂದು ಏಕದಿನ ಪಂದ್ಯದಲ್ಲಿ 2/48 ವಿಕೆಟ್ ಪಡೆದಿದ್ದ ಕುಲ್ದೀಪ್ ಟಿ20ಯ ಒಂದು ಪಂದ್ಯದಲ್ಲಿ 2/30 ವಿಕೆಟ್ ಪಡೆದಿದ್ದರು. ಉಳಿದ ಎರಡು ಪಂದ್ಯಗಳಲ್ಲಿ ವಿಕೆಟ್ ಪಡೆಯದೆ ನಿರಾಸೆ ಅನುಭವಿಸಿದ್ದರು.
ನಾಯಕನ ಬಗ್ಗೆ ದೂರಿದ್ದ ಯಾದವ್: ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯ ಆರಂಭವಾಗುವುದಕ್ಕೆ ಕೆಲವೇ ದಿನಗಳ ಮುನ್ನ ಕುಲ್ದೀಪ್ ಕೆಕೆಆರ್ ತಂಡದಲ್ಲಿ ಆಗುತ್ತಿರುವ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದರು. ಇಯಾನ್ ಮಾರ್ಗನ್ ತಂಡದ ನಾಯಕನಾಗಿರುವುದರಿಂದ ತಂಡದಲ್ಲಿ ಸಂವಹನದ ಸಮಸ್ಯೆಯಾಗುತ್ತಿದೆ. ಭಾಷೆಯ ಸಮಸ್ಯೆಯಿರುವುದರಿಂದ ನಾಯಕನ ಬಳಿ ಸೂಕ್ತ ರೀತಿಯಲ್ಲಿ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದಿದ್ದರು.
ಕೊಲ್ಕತ್ತಾ ನೈಟ್ ರೈಡರ್ಸ್ ಕಮ್ಬ್ಯಾಕ್: ಇನ್ನು ಮತ್ತೊಂದೆಡೆ ಈ ಬಾರಿಯ ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅದ್ಭುತವಾದ ಪ್ರದರ್ಶನ ನೀಡುತ್ತಿದೆ. ಈ ಬಾರಿಯ ಐಪಿಎಲ್ನ ಮೊದಚ ಸರಣದಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಕೆಕೆಆರ್ ಎರಡನೇ ಚರಣದಲ್ಲಿ ಅದ್ಭುತ ಕಮ್ಬ್ಯಾಕ್ ಮಾಡಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಅಗ್ರ ಸ್ಥಾನಕ್ಕೇರಲು ಹವಣಿಸುತ್ತಿರುವ ಡೆಲ್ಲಿ ಕ್ಯಾಪಟಿಲ್ಸ್ ತಂಡಕ್ಕೆ ಸೋಲುಣಿಸಿತ್ತು. ಈ ಮೂಲಕ ಪ್ಲೇಆಫ್ಗೆ ಕೆಕೆಆರ್ ಮತ್ತಷ್ಟು ಸನಿಹಕ್ಕೆ ತಲುಪಿದೆ. ಹೀಗಾಗಿ ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಇದ್ದು ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಗೆಲುವು ಸಾಧಿಸಿ ಟೂರ್ನಿಯಲ್ಲಿ ಪ್ಲೇ ಆಫ್ ಹಂತಕ್ಕೆ ಟಿಕೆಟ್ ಖಾತ್ರಿಪಡಿಸಿಕೊಳ್ಳುವ ಉತ್ಸಾಹದಲ್ಲಿದೆ.