ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಗೆದ್ದಿರುವ 4 ಕ್ರಿಕೆಟಿಗರ ಪಟ್ಟಿ

ಈ ಹಿಂದೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಇದ್ದ ಹೆಸರನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಬದಲಾಯಿಸಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಾಧಕ ಕ್ರೀಡಾಪಟುಗಳಿಗೆ ನೀಡಲಾಗುವ ಪ್ರಶಸ್ತಿಯು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಧ್ಯಾನ್ ಚಂದ್ ಅವರ ಹೆಸರಿನಲ್ಲಿದ್ದರೆ ಸೂಕ್ತ ಎಂಬ ಕಾರಣದಿಂದ ಕೇಂದ್ರ ಸರ್ಕಾರವು ರಾಜೀವ್ ಗಾಂಧಿ ಬದಲು ಧ್ಯಾನ್ ಚಂದ್ ಅವರ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಮರುನಾಮಕರಣ ಮಾಡಿತು.
ಕೇಂದ್ರ ಸರ್ಕಾರ ತೆಗೆದುಕೊಂಡ ಈ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪರ ಮತ್ತು ವಿರೋಧ ಎರಡೂ ಅಭಿಪ್ರಾಯಗಳು ಸಹ ವ್ಯಕ್ತವಾದವು. ಕೆಲವರು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಸರಿಯಾಗಿದೆ ಎಂದು ಬೆಂಬಲ ನೀಡಿದರೆ ಇನ್ನೂ ಹಲವಾರು ಮಂದಿ ಇದೇ ರೀತಿ ದೇಶದಲ್ಲಿನ ಕ್ರೀಡಾಂಗಣಗಳಿಗೆ ಇಟ್ಟಿರುವ ರಾಜಕಾರಣಿಗಳ ಹೆಸರನ್ನು ಕೂಡ ಬದಲಾಯಿಸಿ ಆ ಕ್ರೀಡಾಂಗಣಗಳಿಗೆಲ್ಲ ಕ್ರಿಕೆಟಿಗರ ಹೆಸರನ್ನು ಇಟ್ಟರೆ ಉತ್ತಮ ಎಂದು ಮೋದಿ ಸರ್ಕಾರದ ಕಾಲೆಳೆದಿದ್ದರು.
ಹೀಗೆ ಹೆಸರು ಬದಲಾವಣೆಯಾದ ಕಾರಣ ರಾಜಕೀಯ ಸ್ವರೂಪವನ್ನು ಪಡೆದುಕೊಂಡು ಭಾರೀ ಚರ್ಚೆಗೆ ಕಾರಣವಾಗಿದ್ದ ಖೇಲ್ ರತ್ನ ಪ್ರಶಸ್ತಿ ಕ್ರೀಡಾ ಕ್ಷೇತ್ರದಲ್ಲಿ ಅತಿ ದೊಡ್ಡ ಮಟ್ಟದ ಸೇವೆ ಸಲ್ಲಿಸಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ನೀಡುವ ದೇಶದ ಅತ್ಯುನ್ನತ ಪ್ರಶಸ್ತಿಯಾಗಿದೆ. ದೇಶದ ಯಾವುದಾದರೂ ಕ್ರೀಡೆಯೊಂದರಲ್ಲಿ ನಾಲ್ಕಕ್ಕೂ ಹೆಚ್ಚು ವರ್ಷಗಳ ಕಾಲ ಅತ್ಯುತ್ತಮ ಪ್ರದರ್ಶನ ನೀಡಿ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಈ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಇಂತಹ ಅತ್ಯುನ್ನತ ಪ್ರಶಸ್ತಿಯನ್ನು ಮೊದಲಿಗೆ ಪಡೆದದ್ದು ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ್. ಹೌದು ಚೆಸ್ ಆಟದಲ್ಲಿ ಅತ್ಯದ್ಭುತ ಸಾಧನೆಯನ್ನು ಮಾಡಿದ್ದ ವಿಶ್ವನಾಥನ್ ಆನಂದ್ ಅವರು ಮೊಟ್ಟಮೊದಲ ಖೇಲ್ ರತ್ನ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 1991-92ನೇ ಸಾಲಿನ ಖೇಲ್ ರತ್ನ ಪ್ರಶಸ್ತಿಯನ್ನು ವಿಶ್ವನಾಥನ್ ಆನಂದ್ ಅವರಿಗೆ ನೀಡಿ ಗೌರವಿಸಲಾಯಿತು. ಹೀಗೆ ವಿಶ್ವನಾಥನ್ ಆನಂದ್ ಮೂಲಕ ಆರಂಭವಾದ ಖೇಲ್ ರತ್ನ ಪ್ರಶಸ್ತಿಯನ್ನು ಇದುವರೆಗೂ ನಾಲ್ವರು ಕ್ರಿಕೆಟಿಗರು ಪಡೆದುಕೊಂಡಿದ್ದಾರೆ. ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿರುವ ನಾಲ್ವರು ಕ್ರಿಕೆಟಿಗರ ಪಟ್ಟಿ ಈ ಕೆಳಕಂಡಂತಿದೆ ಓದಿ..

1997-98: ಸಚಿನ್ ತೆಂಡೂಲ್ಕರ್
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ಸಚಿನ್ ತೆಂಡೂಲ್ಕರ್ ಪಾತ್ರರಾಗಿದ್ದಾರೆ. 1997-98ರ ಅವಧಿಯಲ್ಲಿ ಸಚಿನ್ ತೆಂಡೂಲ್ಕರ್ ನೀಡಿದ ಅತ್ಯದ್ಬುತ ಪ್ರದರ್ಶನಕ್ಕೆ ಕೇಂದ್ರ ಸರಕಾರ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಆ ಸಮಯಕ್ಕೆ ಸಚಿನ್ ತೆಂಡೂಲ್ಕರ್ 251 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 9940 ರನ್ ಗಳಿಸಿದ್ದರು ಹಾಗೂ 26 ಶತಕ ಮತ್ತು 54 ಅರ್ಧಶತಕಗಳನ್ನು ಸಚಿನ್ ಆ ಸಮಯಕ್ಕೆ ಸಿಡಿಸಿದ್ದರು.

2007-08: ಎಂಎಸ್ ಧೋನಿ
ಸಚಿನ್ ತೆಂಡೂಲ್ಕರ್ ನಂತರ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿಯನ್ನು ಪಡೆದಿರುವ ಎಂ ಎಸ್ ಧೋನಿಗೆ 2007-08ನೇ ಸಾಲಿನ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 2007ರಲ್ಲಿ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸುವುದರ ಮೂಲಕ ಧೋನಿ ನಾಯಕತ್ವದ ಟೀಮ್ ಇಂಡಿಯಾ ಟಿ ಟ್ವೆಂಟಿ ವಿಶ್ವಕಪ್ನ್ನು ತನ್ನದಾಗಿಸಿಕೊಂಡು ದಾಖಲೆ ಬರೆದಿತ್ತು.

2018: ವಿರಾಟ್ ಕೊಹ್ಲಿ
ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ನಂತರ ಖೇಲ್ ರತ್ನ ಪ್ರಶಸ್ತಿಯನ್ನು 2018ರಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ನೀಡಲಾಯಿತು. ಕ್ರಿಕೆಟ್ ಜಗತ್ತು ಕಂಡ ಅತ್ಯುನ್ನತ ಕ್ರಿಕೆಟಿಗರಲ್ಲಿ ಒಬ್ಬರು ಎಂದು ವಿರಾಟ್ ಕೊಹ್ಲಿಯವರನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅದೇ ಸಮಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತುಂಗ ಸ್ಥಾನವನ್ನು ತಲುಪಿತ್ತು.

2020: ರೋಹಿತ್ ಶರ್ಮಾ
ಇತ್ತೀಚಿಗೆ ಖೇಲ್ ರತ್ನ ಪ್ರಶಸ್ತಿ ಪಡೆದ ಆಟಗಾರ ಎಂಬ ಕೀರ್ತಿಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. 2020ರಲ್ಲಿ ರೋಹಿತ್ ಶರ್ಮಾಗೆ ಕೇಂದ್ರ ಸರ್ಕಾರ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ರೋಹಿತ್ ಶರ್ಮಾ 2019ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದರು. ರೋಹಿತ್ ಶರ್ಮಾ 2019ರ ವಿಶ್ವಕಪ್ನ 9 ಇನ್ನಿಂಗ್ಸ್ ಪೈಕಿ 648 ರನ್ ಕಲೆಹಾಕಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications