
ನವದೆಹಲಿ, ಜುಲೈ 28: ಮುಂಬರಲಿರುವ (2018-19ರ) ದೇಸಿ ಸೀಸನ್ ಗೆ ಮನೋಜ್ ತಿವಾರಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ಬೆಂಗಾಲ್ ತಂಡದ ಮಾಜಿ ನಾಯಕ ಪಾಲಾಶ್ ನಂದಿ ಮುಂದಾಳತ್ವದ ಆಯ್ಕೆ ಸಮಿತಿಯು ತಿವಾರಿ ಮತ್ತು ಕೋಚ್ ಸೈರಾಜ್ ಬಹುತುಲೆ ಸಮ್ಮುಖದಲ್ಲೇ ತಿವಾರಿ ಅವರನ್ನು ನೇಮಿಸಿತು.
ಮೂಲವೊಂದರ ಪ್ರಕಾರ ಸ್ವತಃ ತಿವಾರಿಗೆ ಬೆಂಗಾಲ್ ತಂಡವನ್ನು ಮುನ್ನಡೆಸಲು ಮನಸ್ಸಿಲ್ಲ. ಆದರೆ ಬೆಂಗಾಲ್ ಆಯ್ಕೆ ಸಮಿತಿ ನಾಯಕನ ಜವಾಬ್ದಾರಿ ನೀಡಿರುವುದರಿಂದ ಅನಿವಾರ್ಯವಾಗಿ ಅದನ್ನು ಒಪ್ಪಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಮನೋಜ್ ಭಾರತ ಕ್ರಿಕೆಟ್ ಆಯ್ಕೆ ಸಮಿತಿ ಮೇಲೆ ಬೇಸರ ತೋರಿಕೊಂಡಿದ್ದರು. ಕಾರಣ ದುಲೀಪ್ ಟ್ರೋಫಿ ಮತ್ತು ಭಾರತ ಎ, ಬಿ ತಂಡಗಳನ್ನು ರಚಿಸುವಾಗಿ ಯಾವ ತಂಡದಲ್ಲೂ ತಿವಾರಿಗೆ ಆಯ್ಕೆ ಸಮಿತಿ ಅವಕಾಶ ನೀಡಿರಲಿಲ್ಲ. ಕಳೆದ ಸೀಸನ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ತನ್ನನ್ನು ಕಡೆಗಣಿಸಿದ್ದರ ಬಗ್ಗೆ ತಿವಾರಿ ಸಹಜವಾಗೇ ಅಸಮಾಧಾನ ವ್ಯಕ್ತಪಡಿಸಿದ್ದರು.
'ಹೌದು, ದುಲೀಪ್ ಟ್ರೋಫಿ ಸೇರಿದಂತೆ ಯಾವ ತಂಡಕ್ಕೂ ನನ್ನನ್ನು ಆಯ್ಕೆ ಮಾಡದಿದ್ದಕ್ಕೆ ನನಗೆ ಬೇಸರ ಅನ್ನಿಸಿತ್ತು. ಆದರೆ ತಂಡವೊಂದಕ್ಕೆ ನಾಯಕವಾಗಬೇಕೆಂದು ನಾನೆಂದೂ ಬಯಸಿರಲಿಲ್ಲ. ಬೆಂಗಾಲ್ ತಂಡಕ್ಕೆ ನಾಯಕನಾಗಿದ್ದು ನನಗೆ ಹೆಮ್ಮೆಯೆನಿಸಿದೆ. ಸವಾಲನ್ನು ಸ್ವೀಕರಿಸಲು ನಾನ್ಯಾವತ್ತಿಗೂ ಸಿದ್ಧವಾಗಿದ್ದೇನೆ' ಎಂದು ತಿವಾರಿ ತಿಳಿಸಿದ್ದಾರೆ.