
ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡ ಮುಂಬೈಯನ್ನು ಎದುರಿಸಲು ಸಜ್ಜಾಗಿದೆ. ಮುಂಬೈ ವಿರುದ್ಧದ ಪಂದ್ಯಕ್ಕೆ ಮಯಾಂಕ್ ಅಗರ್ವಾಲ್ ಅವರನ್ನು ಕೈಬಿಡಲಾಗಿದೆ. ಇದಕ್ಕೆ ಕರ್ನಾಟಕ ರಣಜಿ ತಂಡದ ನಾಯಕ ಕರುಣ್ ನಾಯರ್ ಪ್ರತಿಕ್ರಿಯೆ ನೀಡಿದ್ದಾರೆ. ಮಯಾಂಕ್ ತಂಡದಲ್ಲಿಲ್ಲದಿರುವುದು ಇತರ ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಿಸಲು ಒಂದು ಅವಕಾಶ ಎಂದಿದ್ದಾರೆ.
ಭಾರತ 'ಎ' ತಂಡ ನ್ಯೂಜಿಲ್ಯಾಂಡ್ 'ಎ' ವಿರುದ್ಧ ಪಂದ್ಯವಾಡಲಿರುವ ಕಾರಣ ಮಾಯಾಂಕ್ ನ್ಯೂಜಿಲ್ಯಾಂಡ್ಗೆ ಹಾರಲಿದ್ದಾರೆ. ಹೀಗಾಗಿ ಬಿಸಿಸಿಐ ಮಯಾಂಕ್ ಅಗರ್ವಾಲ್ ಅವರಿಗೆ ಮುಂಬೈ ವಿರುದ್ಧದ ಪಂದ್ಯದಿಂದ ವಿಶ್ರಾಂತಿ ನೀಡಬೇಕು ಎಂದು ಮನವಿ ಮಾಡಿತ್ತು. ಹೀಗಾಗಿ ಮಯಾಂಕ್ ಮುಂಬೈ ವಿರುದ್ಧದ ಮಹತ್ವದ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೇ ಮುಂಬೈ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗಿತ್ತು.
ಮಯಾಂಕ್ ಅಗರ್ವಾಲ್ ಬೃಹತ್ ಪ್ರತಿಭೆ. ಅವರ ಗೈರು ಇನ್ನೊಬ್ಬ ಆಟಗಾರನಿಗೆ ಅವಕಾಶವನ್ನು ನೀಡುತ್ತದೆ. ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ ಎಂದು ಕರುಣ್ ನಾಯರ್ ಹೆಳಿಕೆ ನೀಡಿದ್ದಾರೆ. ಕರ್ನಾಟಕ ತಂಡದ ನಾಯಕ ಕರುಣ್ ನಾಯರ್ ಆರು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.
'ಮಯಾಂಕ್ ಅಗರ್ವಾಲ್ ಓರ್ವ ಕಠಿಣ ಪರಿಶ್ರಮದ ಆಟಗಾರ. ಕ್ರಿಕೆಟ್ಗಾಗಿ ಅವರು ಪಡುವ ಶ್ರಮ ಅವರನ್ನು ಈ ಎತ್ತರಕ್ಕೆ ಏರಿಸಿದೆ. ನಿರಂತರ ಅಭ್ಯಾಸದ ಕಾರಣಕ್ಕೆ ಪ್ರತಿಫಲ ದೊರೆಯುತ್ತಿದೆ' ಎಂದು ಕರುಣ್ ನಾಯರ್ ಹೇಳಿಕೆ ನೀಡಿದ್ದಾರೆ.
28 ವರ್ಷದ ಮಯಾಂಕ್ ಅಗರ್ವಾಲ್ ಇಲ್ಲಿಯವರೆಗೆ 9 ಟೆಸ್ಟ್ ಪಂದ್ಯಗಳನ್ನು ಆಡಿದ್ದು 872 ರನ್ ಗಳಿಸಿದ್ದಾರೆ. ಮೂರು ಶತಕಗಳನ್ನು ಬಾರಿಸಿರುವ ಮಾಯಾಂಕ್ ಅಗರ್ವಾಲ್ 3 ಅರ್ಧ ಶತಕವನ್ನು ಬಾರಿಸಿದ್ದಾರೆ. ಮಯಾಂಕ್ ಖಾತೆಯಲ್ಲಿ ಎರಡು ದ್ವಿಶತಕಗಳು ಕೂಡ ಇದ್ದು ಬಾಂಗ್ಲಾದೇಶದ ವಿರುದ್ಧ ಇಂದೋರ್ನಲ್ಲಿ ನಡೆದ ಪಂದ್ಯದಲ್ಲಿ 243 ರನ್ ಬಾರಿಸಿ ಮಿಂಚಿದ್ದರು.