ಕೊಹ್ಲಿಯ ಬ್ಯಾಟಿಂಗ್ ಅಲ್ಲ: ಈತನ ಪ್ರದರ್ಶನವೇ ಭಾರತಕ್ಕೆ ದೊಡ್ಡ ಭರವಸೆ ಎಂದ ಮೊಹಮ್ಮದ್ ಕೈಫ್

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿದ್ದು ಅರ್ಹವಾಗಿಯೇ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವೈಟ್ವಾಶ್ ಮೂಲಕ ವಶಕ್ಕೆ ಪಡೆದುಕೊಂಡಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದು ಮೂರು ಪಂದ್ಯಗಳಲ್ಲಿ ಎರಡು ಭರ್ಜರಿ ಶತಕ ಸಿಡಿಸಿದ್ದಾರೆ. ಇನ್ನು ಯುವ ಆಟಗಾರ ಶುಬ್ಮನ್ ಗಿಲ್ ಅವರಿಂದ ಕೂಡ ಅದ್ಭುತ ಪ್ರದರ್ಶನ ಬಂದಿರುವುದು ಗಮನಾರ್ಹ ಅಂಶ.
ಆದರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಟೀಮ್ ಇಂಡಿಯಾದ ಸರಣಿ ಗೆಲುವಿನ ಬಳಿಕ ಮಾತನಾಡಿದ್ದು ಈ ಸರಣಿಯಲ್ಲಿ ಓರ್ವ ಆಟಗಾರನ ಪ್ರದರ್ಶನವನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ. ಈ ಸರಣಿಯಲ್ಲಿ ಭಾರತ ತಂಡಕ್ಕೆ ದೊರೆದ ಅತೀ ದೊಡ್ಡ ಸಕಾರಾತ್ಮಕ ಅಂಶ ಎಂದಿದ್ದಾರೆ ಮೊಹಮ್ಮದ್ ಕೈಫ್. ಅಂದ ಹಾಗೆ ಕೈಫ್ ಹೊಗಳಿದ್ದು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಥವಾ ಯುವ ಆಟಗಾರ ಶುಬ್ಮನ್ ಗಿಲ್ ಬಗ್ಗೆ ಅಲ್ಲ. ಬದಲಾಗಿ ಟೀಮ್ ಇಂಡಿಯಾದ ಬೌಲಿಂಗ್ನಲ್ಲಿ ಮಿಂಚಿನ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್ ಬಗ್ಗೆ.

ಮೊಹಮ್ಮದ್ ಸಿರಾಜ್ ಬಗ್ಗೆ ಕೈಫ್ ಪ್ರಶಂಸೆ
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಆಟಗಾರ ವೇಗಿ ಮೊಹಮ್ಮದ್ ಸಿರಾಜ್. ಅದರಲ್ಲೂ ಅಂತಿಮ ಪಂದ್ಯದಲ್ಲಿ ಸಿರಾಜ್ ಭಯಾನಕ ದಾಳಿಕೆ ಲಂಕಾ ದಾಂಡಿಗರು ಸಂಪೂರ್ಣವಾಗಿ ನಿರುತ್ತರವಾಗಿದ್ದರು. ಈ ಪಂದ್ಯದಲ್ಲಿ ಸಿರಾಜ್ 10 ಓವರ್ಗಳ ಬೌಲಿಂಗ್ ದಾಳಿಯಲ್ಲಿ ಕೇವಲ 32 ರನ್ಗಳನ್ನು ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಈ ಭರ್ಜರಿ ಪ್ರದರ್ಶನದ ಕಾರಣದಿಂದಾಗಿ ಟೀಮ್ ಇಂಡಿಯಾ 317 ರನ್ಗಳ ಬೃಹತ್ ಅಂತರದ ಗೆಲುವು ಸಾಧಿಸಲು ಸಾಧ್ಯವಾಯಿತು. ಇದಕ್ಕೂ ಮುನ್ನ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ 166 ರನ್ಗಳ ಕೊಡುಗೆ ನೀಡಿದರೆ ಶುಬ್ಮನ್ ಗಿಲ್ 116 ರನ್ಗಳ ಕೊಡುಗೆ ನೀಡಿದರು. ಹೀಗಾಗಿ ಟೀಮ್ ಇಂಡಿಯಾ 390 ರನ್ಗಳ ಬೃಹತ್ ಮೊತ್ತ ಗಳಿಸಿತ್ತು.

ಸಿರಾಜ್ ಬೌಲಿಂಗ್ ಭಾರತಕ್ಕೆ ದೊಡ್ಡ ಸಕಾರಾತ್ಮಕ ಅಂಶ
ಇನ್ನು ಈ ಸರಣಿ ಗೆಲುವಿನ ಬಳಿಕ ಮೊಹಮ್ಮದ್ ಕೈಫ್ ಸ್ಪೋರ್ಟ್ಸ್ ಕೀಡಾಗೆ ಪ್ರತಿಕ್ರಿಯೆ ನೀಡಿದ್ದಾರೆ. "ಈ ಸರಣಿಯಲ್ಲಿ ಭಾರತಕ್ಕೆ ಬಹುದೊಡ್ಡ ಸಕಾರಾತ್ಮಕ ಅಂಶವೆಂದರೆ ಅದು ಮೊಹಮ್ಮದ್ ಸಿರಾಜ್. ಭಾರತದ ಫ್ಲ್ಯಾಟ್ ಕಂಡೀಶನ್ನಲ್ಲಿ ವಿಶ್ವಕಪ್ ಗೆಲುವು ಸಾಧಿಸುವ ಪ್ರಯತದನಗಳು ನಡೆಯುತ್ತಿದೆ. ನನ್ನ ಪ್ರಕಾರ ಈ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್ ಪ್ರದರ್ಶಣ ಅದ್ಭುತವಾಗಿದೆ" ಎಂದಿದ್ದಾರೆ ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್.

ಕಳೆದ ಒಂದೆರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ
ಮುಂದುವರಿದು ಮಾತನಾಡಿದ ಮೊಹಮ್ಮದ್ ಕೈಫ್, "ಕಳೆದ ಒಂದೆರಡು ಪಂದ್ಯಗಳನ್ನು ನೋಡಿದರೆ ಅವರ ಬೌಲಿಂಗ್ ಅದ್ಭುತವಾಗಿದೆ. ಆತ ಹೊಸ ಚೆಂಡಿನಲ್ಲಿ ತಂಡಕ್ಕೆ ಯಶಸ್ಸು ತಂದುಕೊಡುತ್ತಿದ್ದಾರೆ. ಇನ್ನು ಪಂದ್ಯದ ಅಂತ್ಯದ ವೇಳೆಯಲ್ಲಿಯೂ ಸಿರಾಜ್ ವಿಕೆಟ್ಗಳನ್ನು ತಂದುಕೊಡುತ್ತಿದ್ದಾರೆ" ಎಂದಿದ್ದಾರೆ ಕೈಫ್. ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ಡೆತ್ ಓವರ್ನಲ್ಲಿ ಬೌಲಿಂಗನ್ನು ಬಲಗೊಳಿಸಬೇಕು ಎಂದಿದ್ದು ಜಸ್ಪ್ರೀತ್ ಬೂಮ್ರಾ ಇಲ್ಲದಿರುವುದು ತಂಡಕ್ಕೆ ಹಿನ್ನಡೆಯಾಗಿದೆ ಎಂದಿದ್ದಾರೆ.

9 ವಿಕೆಟ್ ಪಡೆದು ಮಿಂಚಿರುವ ಸಿರಾಜ್
ಇನ್ನು ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸಿರಾಜ್ ಬೌಲಿಂಗ್ ಅದ್ಭುತವಾಗಿದ್ದು. ಈ ಮೂರು ಪಂದ್ಯಗಳಲ್ಲಿ ಸಿರಾಜ್ ಒಟ್ಟು 9 ವಿಕೆಟ್ ಪಡೆದುಕೊಳ್ಳುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈ ಮೂಲಕ ಸಿಕ್ಕ ಅವಕಾಶವನ್ನು ಸಿರಾಜ್ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಗುವಾಹಟಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿದ್ದ ಸಿರಾಜ್, ಕೊಲ್ಕತ್ತಾದಲ್ಲಿ ನಡೆದ ಎರಡನೇ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದರು. ಇನ್ನು ಅಂತಿಮ ಪಂದ್ಯದಲ್ಲಿ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ವಿಕೆಟ್ ಕಬಳಿಸುವುದರ ಜೊತೆಗೆ ರನ್ ನಿಯಂತ್ರಣದಲ್ಲಿಯೂ ಸಿರಾಜ್ ಸಾಧಿಸಿರುವ ಯಶಸ್ಸು ತಂಡಕ್ಕೆ ಭರವಸೆ ಮೂಡಿಸಿರುವುದರಲ್ಲಿ ಅನುಮಾನವಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications